ಶಶಿಕಲಾಗೆ ಮಂಗಳವಾರ ಸಿಎಂ ಪಟ್ಟಕ್ಕೇರುವ ಯೋಗವಿಲ್ಲ!
ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರು ಮಂಗಳವಾರ(ಫೆಬ್ರವರಿ 07)ದಂದು ಸಿಎಂ ಪಟ್ಟಕ್ಕೇರುವ ಕನಸಿಗೆ ಭಂಗ ಉಂಟಾಗಿದೆ. ಸಮಾರಂಭಕ್ಕೆ ಸಮಯ ನೀಡಲು ರಾಜ್ಯಪಾಲ ವಿದ್ಯಾಸಾಗರ್ ನಿರಾಕರಿಸಿದ್ದಾರೆ.
ಚೆನ್ನೈ, ಫೆಬ್ರವರಿ 06: ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರು ಮಂಗಳವಾರ(ಫೆಬ್ರವರಿ 07)ದಂದು ಸಿಎಂ ಪಟ್ಟಕ್ಕೇರುವ ಕನಸಿಗೆ ಭಂಗ ಉಂಟಾಗಿದೆ. ಸಮಾರಂಭಕ್ಕೆ ಸಮಯ ನೀಡಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ನಿರಾಕರಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಶಶಿಕಲಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಬಗ್ಗೆ ಕಾನೂನಿನ ಸಲಹೆ ಪಡೆಯುತ್ತಿದ್ದಾರೆ. ಹೀಗಾಗಿ ಚೆನ್ನೈಗೆ ಆಗಮಿಸಿಲ್ಲ, ನಾಳೆ ನಿಗದಿತ ಕಾರ್ಯಕ್ರಮ ಪಟ್ಟಿಯಲ್ಲೂ ಶಶಿಕಲಾ ಪ್ರಮಾಣ ವಚನ ಕಾರ್ಯಕ್ರಮ ಸೇರಿಸಲಾಗಿಲ್ಲ ಎಂದು ರಾಜಭವನದ ಮೂಲಗಳು ಹೇಳಿವೆ.[ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು : ಸಾಧ್ಯಾಸಾಧ್ಯತೆಗಳು!]
ಈ ನಡುವೆ ಇದೇ ವಾರದಲ್ಲಿ ಶಶಿಕಲಾ ನಟರಾಜನ್ ಅವರು ಆರೋಪಿಯಾಗಿರುವ ಅಕ್ರಮ ಆಸ್ತಿ ಪ್ರಕರಣ ತೀರ್ಪು ಹೊರ ಬೀಳುವ ಸಾಧ್ಯತೆಯಿದೆ. ಹೀಗಾಗಿ ಕಾನೂನಿನ ಸಾಧ್ಯ ಸಾಧ್ಯತೆಗಳನ್ನು ರಾಜ್ಯಪಾಲರು ಪರಿಶೀಲಿಸಿದ ನಂತರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಮ್ಮತಿಸಲಿದ್ದಾರೆ.
ಓ ಪನ್ನೀರ್ ಸೆಲ್ವಂ ಅವರ ರಾಜೀನಾಮೆಯಿಂದ ತೆರವಾಗಿರುವ ಸಿಎಂ ಸ್ಥಾನಕ್ಕೆ ಶಾಸಕಾಂಗ ಪಕ್ಷದ ನಾಯಕಿ ಶಶಿಕಲಾ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ.