ಪನ್ನೀರ್ v/s ಶಶಿಕಲಾ: ಗುರುವಾರದ ಪ್ರಮುಖ ಬೆಳವಣಿಗೆಗಳು
ಕುತೂಹಲ ಘಟ್ಟಕ್ಕೆ ಬಂದಿರುವ ತಮಿಳುನಾಡು ರಾಜಕೀಯ ಚದುರಂಗದಾಟ; ಮುಖ್ಯಮಂತ್ರಿ ಪಟ್ಟ ಯಾರಿಗೆ ಎಂಬುದು ರಾಜ್ಯಪಾಲರ ಮುಂದಿನ ನಡೆ ಮೇಲೆ ಅವಲಂಬಿತ.
ಚೆನ್ನೈ, ಫೆಬ್ರವರಿ 9: ದಿನೇ ದಿನೇ ಹೊಸ ತಿರುವುಗಳೊಂದಿಗೆ, ಹೊಸ ಹೊಸ ರಂಗು ಪಡೆಯುತ್ತಿರುವ ತಮಿಳುನಾಡು ರಾಜಕೀಯ ಗುರುವಾರವೂ ಅದರಿಂದ ಹೊರತಾಗಿರಲಿಲ್ಲ.
ಮುಖ್ಯಮಂತ್ರಿ ಪಟ್ಟವೇರಲು ತುದಿಗಾಲಲ್ಲಿದ್ದ ಶಶಿಕಲಾ ಅವರಿಗೆ ಸಡ್ಡು ಹೊಡೆದಿರುವ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನಿಂದ ಎಐಡಿಎಂಕೆ ಪಕ್ಷ ಇಬ್ಭಾಗವಾಗಿದೆಯಲ್ಲದೆ, ಕೆಲವು ಪ್ರಭಾವಿ ವ್ಯಕ್ತಿಗಳು ಒಬ್ಬೊಬ್ಬರಾಗಿ ಪನ್ನೀರ್ ಬಣವನ್ನು ಸೇರಿಕೊಳ್ಳುತ್ತಿದ್ದಾರೆ.
ಇವರಲ್ಲಿ ಎಐಡಿಎಂಕೆಯ ಮಾಸ್ ಲೀಡರ್ ಎಂದೇ ಗುರುತಿಸಿಕೊಂಡಿರುವ ಪ್ರಭಾವಿ ಶಾಸಕ ಇ. ಮಧುಸೂಧನ್ ಅವರು, ಪನ್ನೀರ್ ಬಣ ಸೇರಿಕೊಂಡಿದ್ದು ಪನ್ನೀರ್ ಬಣಕ್ಕೆ ಬಲ ತಂದಂತಾಗಿದೆ.
ಗುರುವಾರದ ಪ್ರಮುಖ ಬೆಳವಣಿಗೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿದ್ದ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಇಂದು ಚೆನ್ನೈಗೆ ಆಗಮಿಸಿದ್ದು. ಸಂಜೆ ವೇಳೆಗೆ, ಪನ್ನೀರ್ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದು ಪ್ರಮುಖ ಘಟ್ಟಗಳು.
ಇವೂ ಸೇರಿದಂತೆ ದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ...
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಸಾಮಾಜಿಕ ಜಾಲತಾಣಗಳಲ್ಲಿ ಪನ್ನೀರ್ ಸೆಲ್ವಂ ಕಡೆಗೆ ಹರಿದ ಜನಾಭಿಪ್ರಾಯ. ಶಶಿಕಲಾ ಅವರು, ಪಕ್ಷದ ಒಳಗಾಗಲೀ, ಹೊರಗಾಗಲೀ ಯಾವುದೇ ಚುನಾವಣೆಯನ್ನು ಎದುರಿಸಿಲ್ಲ ಎಂಬುದು ಬಹು ಜನರ ಅಭಿಪ್ರಾಯವಾಗಿತ್ತು.
ಮತ್ತೊಂದು ಅವಕಾಶಕ್ಕೆ ಮೊರೆ
ರಾಜೀನಾಮೆಯ ನಿರ್ಧಾರ ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಪನ್ನೀರ್ ಸೆಲ್ವಂ. ರಾಜ್ಯಪಾಲರು ಅವಕಾಶ ಕೊಟ್ಟರೆ ವಿಧಾನಸಭೆಯಲ್ಲಿ ತಮ್ಮ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವುದಾಗಿ ಸವಾಲು.
ಶಶಿಕಲಾ ಬೆಂಬಲಿಗರಿಂದ ಕಿಡಿ
ಇತ್ತ, ಶಶಿಕಲಾ ಅವರ ಬೆಂಬಲಿಗರಿಂದ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ನಡೆ ಬಗ್ಗೆ ಆಕ್ಷೇಪ. ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಶಶಿಕಲಾ ಅವರನ್ನು ಆರಿಸಿದಾಗಿನಿಂದ ಚೆನ್ನೈನಿಂದ ರಾಜ್ಯಪಾಲರು ದೂರ ಉಳಿದಿದ್ದೇ ಪನ್ನೀರ್ ಸೆಲ್ವಂ, ಅವರ ಬೆಂಬಲಿಗರು ಚಿಗುರಲು ಕಾರಣವಾಗಿದ್ದೆಂದು ಕಿಡಿ.
ಪನ್ನೀರ್ ಬಣದವರು ಟಾರ್ಗೆಟ್
ಪಕ್ಷದ್ರೋಹದ ಆರೋಪದ ಮೇರೆಗೆ ಪುದುಚ್ಚೇರಿಯ ಮಾಜಿ ಎಂಎಲ್ಎ ಓಂ ಶಕ್ತಿ ಶೇಖರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಶಶಿಕಲಾ.
ಅಮ್ಮ ಮನೆ ಆಗುತ್ತಾ ಸ್ಮಾರಕ?
ಜಯಲಲಿತಾ ಅಭಿಮಾನಿಗಳ ಮನ ಗೆಲ್ಲಲು ನಿರತರಾದ ಪನ್ನೀರ್ ಸೆಲ್ವಂ ಅವರ ಬೆಂಬಲಿಗರು ಚೆನ್ನೈನ ಪೋಯೆಸ್ ಗಾರ್ಡನ್ ನಲ್ಲಿರುವ ಜಯಲಲಿತಾ ಅವರ ನಿವಾಸವನ್ನು ಸ್ಮಾರಕವನ್ನಾಗಿಸುವುದಾಗಿ ಘೋಷಣೆ.
ಸಂಸತ್ತಿನಲ್ಲಿ ಆಗ್ರಹ
ಲೋಕಸಭೆಯಲ್ಲಿ ಎಐಡಿಎಂಕೆ ಶಾಸಕರ ಗದ್ದಲ. ಶಶಿಕಲಾ ಅವರೇ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕೆಂದು ಆಗ್ರಹ. ಸಭೆಯಲ್ಲಿ ಘೋಷಣೆ ಕೂಗಿದ ಎಐಡಿಎಂಕೆ ಸಂಸದರು.
ಪ್ರಭಾವಿ ನಾಯಕ ಪನ್ನೀರ್ ಬಣಕ್ಕೆ
ಎಐಡಿಎಂಕೆಯ ಹಿರಿಯ ಹಾಗೂ ಪ್ರಭಾವಿ ನಾಯಕ ಇ. ಮಧುಸೂಧನ್ ಅವರು ಪನ್ನೀರ್ ಬಣಕ್ಕೆ ಸೇರ್ಪಡೆ. ಇದರಿಂದ ಪನ್ನೀರ್ ಬಣಕ್ಕೆ ಆನೆ ಬಂದಿರುವುದಾಗಿ ಆ ಬಣದ ಶಾಸಕರ ಅಭಿಮತ.
ರಾಜಿನಾಮೆ ಹಿಂಪಡೆಯುವ ಬಗ್ಗೆ ಚರ್ಚೆ
ಸಂಜೆ ವೇಳೆಗೆ, ರಾಜ್ಯಪಾಲರನ್ನು ಭೇಟಿಯಾದ ಪನ್ನೀರ್. ಮುಖ್ಯಮಂತ್ರಿ ಸ್ಥಾನಕ್ಕೆ ಕೆಲ ದಿನಗಳ ಹಿಂದೆ ನೀಡಿದ್ದ ರಾಜಿನಾಮೆ ಹಿಂಪಡೆಯುವ ಬಗ್ಗೆ ಚರ್ಚೆ.