ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ
ಸದ್ಯಕ್ಕೆ ಎಲ್ಲರ ದೃಷ್ಟಿ ಸರ್ವೋಚ್ಚ ನ್ಯಾಯಾಲಯ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ತೀರ್ಪಿನ ಮೇಲೆ ನೆಟ್ಟಿದೆ. ತಮಿಳುನಾಡಿನ ರಾಜಕಾರಣದ ಸ್ಪಷ್ಟ ಚಿತ್ರಣ ಸಿಗಬೇಕಿದ್ದರೆ ತೀರ್ಪು ಆದಷ್ಟು ಬೇಗ ಪ್ರಕಟವಾಗಬೇಕು.
ಚೆನ್ನೈ, ಫೆಬ್ರವರಿ 11 : ತಮಿಳುನಾಡಿನಲ್ಲಿ ಉದ್ಭವವಾಗಿರುವ ರಾಜಕೀಯ ಅರಾಜಕತೆಯಿಂದಾಗಿ ಟೀಕೆಗೆ ಗುರಿಯಾಗಿರುವುದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮಾತ್ರವಲ್ಲ, ದೂರದಿಂದಲೇ ಇದೆಲ್ಲವನ್ನು ವೀಕ್ಷಿಸುತ್ತಿದ್ದ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ತಡ ಮಾಡುತ್ತಿರುವ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಕೂಡ.
ಅದಕ್ಕೆ ಕಾರಣವೂ ಇಲ್ಲದಿಲ್ಲ. ಮಹರಾಷ್ಟ್ರದ ರಾಜ್ಯಪಾಲರೂ ಆಗಿರುವ ವಿದ್ಯಾಸಾಗರ, ಸಾಧ್ಯತೆ ಬಾಧ್ಯತೆಗಳ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹ ಹಾಕಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ವಿದ್ಯಾಸಾಗರ ಅವರು ಶಶಿಕಲಾ ಅಥವಾ ಪನ್ನೀರ್ ಸೆಲ್ವಂ ಅವರನ್ನು ಬಹುಮತ ಸಾಬೀತುಪಡಿಸಲು ಆಹ್ವಾನಿಸಬೇಕಾಗಿತ್ತು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಆ ಸಂಗತಿಯೇ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.[ಶಶಿಕಲಾ ಕ್ಯಾಂಪ್ ನಿಂದ ಮತ್ತೊಂದು ವಿಕೆಟ್ ಡೌನ್]
ಯಾವುದೇ ನಿರ್ಣಯ ತೆಗೆದುಕೊಂಡರೂ ಅದು ತಾತ್ಕಾಲಿಕವೆ. ಆದ್ದರಿಂದ ಯಾವುದೇ ಗೊಂದಲಕ್ಕೆ ಕಾರಣವಾಗದಂಥ ನಿರ್ಣಯ ತೆಗೆದುಕೊಳ್ಳಬೇಕೆಂದು ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಮುಂದಿನ ವಾರ ಸರ್ವೋಚ್ಚ ನ್ಯಾಯಾಲಯ ತೀರ್ಪು ಬಂದ ನಂತರವೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಮತ್ತು ಅದರ ಆಧಾರದ ಮೇಲೆ ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನ ನೀಡಲಿದ್ದಾರೆ. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]
ಮತ್ತೊಬ್ಬ ಮುಖ್ಯಮಂತ್ರಿಯನ್ನು ಹುಡುಕಬೇಕು
ಶಶಿಕಲಾಗೆ ಸರಕಾರ ರಚಿಸಲು ಆಹ್ವಾನ ನೀಡಿದ ನಂತರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರ ಅಪರಾಧ ಸಾಬೀತಾದರೆ, ಮತ್ತೆ ನಿರ್ವಾತ ನಿರ್ಮಾಣವಾಗುತ್ತದೆ. ರಾಜ್ಯಪಾಲರು ಮತ್ತೊಬ್ಬ ಮುಖ್ಯಮಂತ್ರಿಯನ್ನು ಹುಡುಕಬೇಕಾಗುತ್ತದೆ. ಇದೇ ಸಂಗತಿಯನ್ನು ಕಾನೂನು ತಜ್ಞರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. [ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]
ಎಸ್ಆರ್ ಬೊಮ್ಮಾಯಿ ಪ್ರಕರಣದಂತೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ಅವರ ಪ್ರಕರಣದಲ್ಲಿ ಅನುಸರಿಸಿದ ರೀತಿಯನ್ನೇ ಇಲ್ಲಿ ವಿದ್ಯಾಸಾಗರ ಅವರು ಅನುಸರಿಸಬೇಕಾಗುತ್ತದೆ. ಯಾರನ್ನೇ ಆಗಲಿ ನೇರವಾಗಿ ಸರಕಾರ ರಚಿಸಲು ಅವಕಾಶ ನೀಡುವುದಕ್ಕಿಂತ ಅವರಿಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲೇಬೇಕು.
Img courtesy:wikimedia.org
ಸಹಿಗಳ ಬಗ್ಗೆಯೇ ರಾಜ್ಯಪಾಲರಿಗೆ ಅನುಮಾನ
ರಾಜ್ಯಪಾಲರು ಹಿಂದೇಟು ಹಾಕಲು ಮತ್ತೊಂದು ಕಾರಣವೇನೆಂದರೆ, ಶಶಿಕಲಾ ಅವರು ಪ್ರಸ್ತುತಪಡಿಸಿರುವ ಸಹಿ ಇರುವ ಬೆಂಬಲ ಸೂಚಿಸಿರುವ ಶಾಸಕರ ಪಟ್ಟಿ. ಇವರ ಸಹಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಆಹ್ವಾನ ನೀಡುವ ಹಾಗೇ ಇಲ್ಲ. ಈಕುರಿತು ಕೂಡ ರಾಜ್ಯಪಾಲರು ತಜ್ಞರ ಸಲಹೆಯನ್ನು ಯಾಚಿಸಿದ್ದಾರೆ.
ಸಹಿಗಳ ಬಗ್ಗೆ ಅನುಮಾನವಿದ್ದಾಗ
ಒಂದು ವೇಳೆ ಸಹಿಗಳ ಬಗ್ಗೆ ಅನುಮಾನವಿದ್ದರೆ, ರಾಜ್ಯಪಾಲರು ನೇರವಾಗಿ ಬಹುಮತ ಸಾಬೀತುಪಡಿಸಲು ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಟರಾಜನ್ ಅವರನ್ನು ಆಹ್ವಾನಿಸಬೇಕು. ಆಗ, ಯಾವ ಶಾಸಕ ಯಾರ ಪರವಾಗಿದ್ದಾನೆ, ಯಾರು ಮುಖ್ಯಮಂತ್ರಿಯಾಗಲು ಅರ್ಹರು ಎಂಬುದು ಅನುಮಾನಕ್ಕೆ ಎಡೆಮಾಡದಂತೆ ಸಾಬೀತಾಗುತ್ತದೆ.
ಬರುವ ವಾರ ಸುಪ್ರೀಂ ತೀರ್ಪು ಖಚಿತ
ಬರುವ ವಾರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಲಿದೆ ಎಂಬುದು ಬಲ್ಲ ಮೂಲಗಳಿಂದ ಹೆಚ್ಚೂಕಡಿಮೆ ಖಚಿತವಾಗಿದೆ. ಸೋಮವಾರವೇ ಪ್ರಕಟವಾಗಬೇಕಾಗಿದ್ದ ತೀರ್ಪು, ಅಂದು ಓರ್ವ ನ್ಯಾಯಮೂರ್ತಿ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮುಂದೂಡಲಾಗಿದೆ.
ತೀರ್ಪಿನಲ್ಲಿ ಶಶಿಕಲಾಗೆ ಏನು ಕಾದಿದೆಯೋ?
ಒಂದು ವೇಳೆ ತೀರ್ಪು ಪ್ರಕಟವಾಗಿ ಎರಡನೇ ಆರೋಪಿ ಶಶಿಕಲಾ ಅವರ ಆರೋಪ ಸಾಬೀತಾದರೆ, ಅವರಿಗೆ 4 ವರ್ಷ ಜೈಲು ಕಟ್ಟಿಟ್ಟ ಬುತ್ತಿ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಯಡಿ 10 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಎಲ್ಲ ಸಾಧ್ಯತೆಗಳನ್ನು ಮನದಲ್ಲಿಟ್ಟುಕೊಂಡೇ ವಿದ್ಯಾಸಾಗರ್ ಅವರು ನಿರ್ಣಯವನ್ನು ಮುಂದೂಡುತ್ತಿದ್ದಾರೆ.