ಸೆಲ್ಫಿ ಹುಚ್ಚಿಗೆ ಹುಚ್ಚುಕೋಡಿ ವಿದ್ಯಾರ್ಥಿ ಬಲಿ
ಚೆನ್ನೈ, ಫೆ.01: 'ಹುಚ್ಚುಕೋಡಿ ಮನಸು ಅದು ಹದಿನಾರರ ವಯಸು' ಎಂಬ ಹಾಡು ನೀವು ಕೇಳಿರಬಹುದು. 16ರ ಹರೆಯದ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿನ ಜೊತೆ ಸೆಲ್ಫಿ ಫೋಟೋ ತೆಗೆದುಕೊಳ್ಳುವ ಆತುರದಲ್ಲಿ ಪ್ರಾಣವನ್ನು ಬಲಿ ಕೊಟ್ಟಿದ್ದಾನೆ.
ಹತ್ತನೇ ತರಗತಿಯಲ್ಲಿ ಓದುತ್ತಿದ್ದ 16ರ ಹರೆಯದ ದಿನೇಶ್ ಕುಮಾರ್ ಗೆ ಜೀವನದ ಅಂತಿಮ ದಿನವಾಗಿತ್ತು. ರೈಲ್ವೆ ಹಳಿಗಳ ಮೇಲೆ ಸ್ನೇಹಿತರ ಜೊತೆ ನಡೆದುಕೊಂಡು ಹೋಗುತ್ತಿದ್ದ ದಿನೇಶ್ ಗೆ ಇದ್ದ ಸೆಲ್ಫಿ ಹುಚ್ಚು ಆತನನ್ನು ಬಲಿ ಪಡೆಯಿತು.
ವಡಲೂರು ಸಮೀಪ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸಬ್ ಅರ್ಬನ್ ರೈಲ್ವೆ ಹಿಂಬದಿಯಿಂದ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಸೆಲ್ಫಿ ಕ್ರೇಜ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಇತ್ತೀಚೆಗೆ ವೈದ್ಯರ ಸಲಹೆ ಮೇರೆಗೆ ಸಾಮಾಜಿಕ ಕಾರ್ಯಕರ್ತರು ಗಂಟೆಗಟ್ಟಲೇ ಟಿವಿ ಮಾಧ್ಯಮಗಳಲ್ಲಿ ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ.
ಅಣ್ಣಾ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ದಿನೇಶ್ ಅವರು ಮೊದಲಿಗೆ ಸ್ನೇಹಿತರೊಡನೆ ಮಾತನಾಡುತ್ತಾ ನಿಂತಿದ್ದ. ರೈಲು ಬರುತ್ತಿರುವುದನ್ನು ಗಮನಿಸಿ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ದುರಂತ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. (ಪಿಟಿಐ)