ಪನ್ನೀರ್ ಸೆಲ್ವಂಗೆ ಪರೋಕ್ಷವಾಗಿ ಮತ್ತೊಂದು ಅವಕಾಶ ನೀಡ್ತಾರಾ ಗವರ್ನರ್ ?
ಬಹುಮತ ಸಾಬೀತು ಕಲಾಪದಲ್ಲಿ ಡಿಎಂಕೆ ಶಾಸಕರ ಗದ್ದಲ, ಪ್ರತಿಭಟನೆ ನಡುವೆ ಬಹುಮತ ಸಾಬೀತಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಪಳನಿಗೆ ಸೂಚಿಸಬಹುದಾಗಿದೆ.
ಚೆನ್ನೈ, ಫೆಬ್ರವರಿ 18: ತಮಿಳುನಾಡಿನ ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿ ಪಳನಿಸ್ವಾಮಿ ತಮ್ಮ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಿದ್ದರೂ, ಬಹುಮತ ಸಾಬೀತು ವೇಳೆ ಸದನದಲ್ಲಿ ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಪಾಲರು ಮತ್ತೊಮ್ಮೆ ಬಹುಮತ ಸಾಬೀತುಪಡಿಸುವಂತೆ ಪಳನಿಯವರಿಗೆ ಸೂಚಿಸುವ ಅವಕಾಶಗಳೂ ಇವೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಹಾಗಾದಲ್ಲಿ, ಪನ್ನೀರ್ ಸೆಲ್ವಂ ಅವರಿಗೆ ಪಳನಿ ಸರ್ಕಾರವು ಬಹುಮತ ಪಡೆಯದಂತೆ ನೋಡಿಕೊಳ್ಳುವ ಮತ್ತೊಂದು ಅವಕಾಶವೂ ಸಿಗಲಿದೆ ಎನ್ನಲಾಗುತ್ತಿದೆ.
ಶನಿವಾರದ ವಿಶೇಷ ಕಲಾಪದಲ್ಲಿ ಡಿಎಂಕೆಯ ಗದ್ದಲದ ನಡೆದು, ಅವರ ಉಚ್ಛಾಟನೆಯಾಗಿ, ಆ ಶಾಸಕರು ಸ್ಪೀಕರ್ ಅವರನ್ನು ತಳ್ಳಾಡಿದ ಪ್ರಸಂಗ ನಡೆದಿರುವುದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದಲ್ಲಿ, ಸ್ಪೀಕರ್ ಅವರು ಪಳನಿಸ್ವಾಮಿ ಸರ್ಕಾರವು ಬಹುಮತ ಪಡೆದಿರುವುದಾಗಿ ವಿವರ ಕಳುಹಿಸಿದ್ದರೂ ಅದನ್ನು ಪಕ್ಕಕ್ಕಿಟ್ಟು ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಸೂಚಿಸಬಹುದಾಗಿದೆ.
ಏತನ್ಮಧ್ಯೆ, ಡಿಎಂಕೆ ಶಾಸಕರು ಸದನದಲ್ಲಿ ತಮ್ಮ ಬೇಡಿಕೆಗಳಿಗೆ ಸ್ಪೀಕರ್ ಮಾನ್ಯತೆ ನೀಡಲಿಲ್ಲವೆಂದು ರಾಜ್ಯಪಾಲರಿಗೆ ದೂರು ನೀಡಿದರೆ ರಾಜ್ಯಪಾಲರು ಸ್ವಯಂ ಆಲೋಚನೆಯಿಂದ ಮತ್ತೆ ಬಹುಮತ ಸಾಬೀತುಪಡಿಸುವ ಸೂಚನೆ ನೀಡುವ ಪ್ರಮೇಯಕ್ಕೆ ಪುಷ್ಟಿ ದೊರೆಯಲಿದೆ ಎನ್ನಲಾಗಿದೆ.
ಗದ್ದಲ ಏಕೆ?: ಶನಿವಾರ ನಡೆದ ಬಹುಮತ ಸಾಬೀತು ಕಲಾಪದ ವೇಳೆ, ಇತ್ತೀಚೆಗೆ ಎಐಎಡಿಎಂಕೆ ಪಕ್ಷದ ವತಿಯಿಂದ ನಡೆದ ರೆಸಾರ್ಟ್ ರಾಜಕಾರಣದ ಬಗ್ಗೆ ಚರ್ಚೆಯಾಗಬೇಕು ಹಾಗೂ ಸರ್ಕಾರದ ಬಹುಮತ ಸಾಬೀತು ಗೌಪ್ಯ ಮತದಾನದ ಮೂಲಕವೇ ಆಗಬೇಕು ಎಂದು ಡಿಎಂಕೆ ಶಾಸಕರು ಪಟ್ಟು ಹಿಡಿದರು.
ಆದರೆ, ಇದಕ್ಕೊಪ್ಪದ ಸ್ಪೀಕರ್ ಧನರಾಜ್, ಚರ್ಚೆಗೆ ಅವಕಾಶ ನೀಡದೇ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಗೆ ಮುಂದಾದರು. ಅಲ್ಲದೆ, ಗೌಪ್ಯ ಮತದಾನದ ಬೇಡಿಕೆ ತಿರಸ್ಕರಿಸಿ ಧ್ವನಿ ಮತದಾನದ ಮೂಲಕ ಬಹುಮತ ಸಾಬೀತುಪಡಿಸಲು ಸೂಚಿಸಿದರು.
ಇದರಿಂದ ಕೆಂಡಾಮಂಡಲವಾದ ಡಿಎಂಕೆ ಪಕ್ಷದ 88 ಶಾಸಕರು ಪ್ರತಿಭಟನೆ ನಡೆಸಿ, ಸದನದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದರು. ಇದರಿಂದ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರೂ ಪ್ರಯೋಜನವಾಗಲಿಲ್ಲ.
ಮಧ್ಯಾಹ್ನ ಮತ್ತೆ ಸಭೆ ಸೇರಿದಾಗ ಮತ್ತೆ ಡಿಎಂಕೆ ಶಾಸಕರು ದಾಂಧಲೆ ನಡೆಸಿ, ಸ್ಪೀಕರ್ ಅವರನ್ನು ತಳ್ಳಾಡುವ ಮಟ್ಟಕ್ಕೂ ಹೋದರು. ಇದರಿಂದಾಗಿ, ಡಿಎಂಕೆ ಶಾಸಕರನ್ನು ಕಲಾಪದಿಂದ ಉಚ್ಛಾಟಿಸಲಾಯಿತು.
ಇದರಿಂದಾಗಿ, ಸದನದಲ್ಲಿದ್ದ ಶಾಸಕರ ಸಂಖ್ಯೆ ಇಳಿಮುಖವಾಗಿ, ಪಳನಿಯವರು ತಾವು ತೋರಬೇಕಿದ್ದ 117 ಶಾಸಕರ ಬೆಂಬಲದ ಬದಲಿಗೆ ಕೇವಲ 77 ಶಾಸಕರ ಬೆಂಬಲ ತೋರಿಸಬೇಕಾಯಿತು. ಇದರಲ್ಲಿ ಯಶಸ್ವಿಯಾದ ಅವರು ಬಹುಮತ ಸಾಬೀತುಪಡಿಸಿದರು.