ಜಯಲಲಿತಾ ಸಭೆ ನಡೆಸಿದ್ದರ ಫೋಟೋ ಎಲ್ಲಿ: ಕರುಣಾನಿಧಿ
ಚೆನ್ನೈ, ಸೆಪ್ಟೆಂಬರ್ 30: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಜ್ವರ, ಅತಿಸಾರದ ಕಾರಣಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿ ಒಂದು ವಾರವಾಗಿದೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ವದಂತಿಗಳು ಹಬ್ಬುತ್ತಿದೆ. ಸರಕಾರ ಅದಕ್ಕೆಲ್ಲ ಕೊನೆ ಹೇಳುವಂತೆ ಮುಖ್ಯಮಂತ್ರಿಗಳ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ನೀಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಕರುಣಾನಿಧಿ ಅವರು, ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಜನರಿಗೆ ತಿಳಿಸುವುದು ತಮಿಳುನಾಡು ಸರಕಾರದ ಜವಾಬ್ದಾರಿ. ಜನರ ಆತಂಕವನ್ನು ನಿವಾರಿಸುವುದಕ್ಕೆ ಸರಕಾರಕ್ಕೆ ರಾಜ್ಯಪಾಲರು ಸೂಚಿಸಬೇಕು ಎಂದು ಸಹ ಅಗ್ರಹಿಸಿದ್ದಾರೆ.[ತಮಿಳರ 'ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲೇ ಜಯಲಲಿತಾ ಅವರು ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅದರೆ ಅದರ ಯಾವುದೇ ಫೋಟೋಗಳು ಇಲ್ಲ. ಅಷ್ಟೇ ಅಲ್ಲ, ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳೂ ಇಲ್ಲ ಎಂದು 92 ವರ್ಷದ ಕರುಣಾನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಜಯಲಲಿತಾ ಅವರು ವಿಡಿಯೋ ಸಂದೇಶವನ್ನಾದರೂ ಕಳಿಸಬೇಕು ಎಂದು ಪಿಎಂಕೆ ಅಧ್ಯಕ್ಷ ಡಾ.ರಾಮದಾಸ್ ಸಲಹೆ ನೀಡಿದ್ದಾರೆ. ಆದರೆ ಈ ಬಗ್ಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯಮಂತ್ರಿಗಳು ಎಲ್ಲ ಜವಾಬ್ದಾರಿಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆಸ್ಪತ್ರೆಯಲ್ಲಿ ಅವರ ಫೋಟೋ ತೆಗೆದು, ಪ್ರಕಟಿಸಿದರೆ ತಪ್ಪಿಲ್ಲವಲ್ಲ?' ಎಂದಿದ್ದಾರೆ.[ಜಯಲಲಿತಾ ಆರೋಗ್ಯದಲ್ಲಿ ಏರುಪೇರು: ಅಪೋಲೋ ಆಸ್ಪತ್ರೆಯತ್ತ ಜನಸಾಗರ]
ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿವೆ. ಎಐಎಡಿಎಂಕೆ ಕಾರ್ಯಕರ್ತರೇ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಹೀಗಾಗುತ್ತಿದೆ. ಯಾರು ವದಂತಿ ಹಬ್ಬಿಸುತ್ತಿದ್ದಾರೆ ಎಂಬುದನ್ನ ಪತ್ತೆ ಹಚ್ಚುವುದರಲ್ಲು ಪೊಲೀಸರು ವಿಫಲರಾಗಿದ್ದಾರೆ ಎಂದು ಕರುಣಾನಿಧಿ ಹೇಳಿದ್ದಾರೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಆಗಿನ ಸರಕಾರದ ಅಧಿಕಾರಿಗಳು ಮಾಧ್ಯಮಗಳು ಹಾಗೂ ಜನರಿಗೆ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ಹೇಳಿರುವ ಕರುಣಾನಿಧಿ, 'ಅದೇ ರೀತಿ ಈಗಲೂ ಮಾಡಬೇಕಾಗಿದೆ. ಹಾಗೆ ಮಾಡಿದರೆ ಈಗ ಹರಿದಾಡುತ್ತಿರುವ ವದಂತಿಗಳನ್ನು ನಿಲ್ಲಿಸಬಹುದು' ಎಂದಿದ್ದಾರೆ.