ತಮಿಳ್ನಾಡನ್ನು ಅಕ್ಷರಶಃ ಆಳಿದ ಕುಮಾರಿ ಜಯಲಲಿತಾ ಯುಗಾಂತ್ಯ
ಜಯಲಲಿತಾ ಅವರ ಸಾವಿನಿಂದ ತಮಿಳುನಾಡಿನಲ್ಲಿ ದಿಟ್ಟ ರಾಜಕಾರಣಿಯ ಯುಗವೊಂದು ಅಂತ್ಯವಾದಂತಾಗಿದೆ. ಅವರನ್ನು ದ್ವೇಷಿಸುತ್ತಿದ್ದವರು ಹಲವಾರಿದ್ದರು, ಆದರೆ ಜಯಲಲಿತಾ ಅವರಲ್ಲಿದ್ದ ಶಕ್ತಿಯನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿರಲಿಲ್ಲ.
ಚೆನ್ನೈ, ಡಿಸೆಂಬರ್ 6: ಅಮ್ಮನ ಅಗಲಿಕೆಯಿಂದ ಇಡೀ ತಮಿಳುನಾಡೇ ಶೋಕಸಾಗರದಲ್ಲಿ ಮುಳುಗಿದೆ, ಚೆನ್ನೈನ ರಾಜಾಜಿ ಹಾಲ್ ನಲ್ಲಿ ಜಯಲಲಿತಾ ಅವರ ಮೃತದೇಹವನ್ನು ಮರೀನಾ ಬೀಚಿಗೆ ತಂದು ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.
ಎಪ್ಪತ್ತೆರಡು ದಿನಗಳ ಕಾಲ ಹೊರ ಜಗತ್ತನ್ನೇ ಕಾಣದೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮುಖ್ಯಮಂತ್ರಿ ಕುಮಾರಿ ಜೆ ಜಯಲಲಿತಾ (68) ಸೋಮವಾರ ರಾತ್ರಿ 11.30ಕ್ಕೆ ತಮಿಳುನಾಡಿನ ಜನತೆಯನ್ನು ಅಗಲಿದ್ದಾರೆ. ಅನೇಕ ಸಿನಿತಾರೆಯರು, ಅಭಿಮಾನಿಗಳು, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಆಗಮಿಸಿ ನಮನಸಲ್ಲಿಸಿ ಜಯಾ ಆಪ್ತರಿಗೆ ಸಾಂತ್ವನ ಹೇಳಿದರು.
* ಅಯ್ಯಾಂಗಾರಿ ಪುರೋಹಿತರಿಂದ ಅಂತ್ಯಕ್ರಿಯೆ ಸಂಬಂಧ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಲಾಯಿತು. ಇದರಲ್ಲಿ ಶಶಿಕಲಾ ಮತ್ತು ಜಯ ತಮ್ಮನ ಮಗ ದೀಪಕ್, ಪನ್ನೀರ್ ಸೆಲ್ವಂ ಕೊನೆ ನಮನವನ್ನು ಸಲ್ಲಿಸಿದರು. ನಂತರ ಶವಪೆಟ್ಟಿಗೆಯಲ್ಲಿ ಪಾರ್ಥಿವ ಶರೀವನ್ನು ಇರಿಸಿ ಮೊಳೆಯನ್ನು ಹೊಡೆಯಲಾಯಿತು. ಬಳಿಕ ಪನ್ನೀರ್ ಸೇಲ್ವಂ ಸೇರಿದಂತೆ ಪ್ರಮುಖರು ಶವಪೆಟ್ಟಿಗೆಯನ್ನು ಭೂಮಿಗೆ ಇಳಿಸಿ ಕೊನೆ ನಮಸ್ಕಾರ ಮಾಡಿದರು. ಜನಸ್ತೋಮ ಕಿಕ್ಕರಿದು ನಿಂತಿತ್ತು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
* ಮರೀನಾ ಬೀಚ್ ಬಳಿ ಆಗಮಿಸಿದ್ದ ಅನೇಕ ರಾಜಕೀಯ ನಾಯಕರು, ಬೆಂಬಲಿಗರು, ಅಧಿಕಾರಿಗಳು ಅಮ್ಮ ಪಾರ್ಥಿವ ಶರೀರಕ್ಕೆ ಮತ್ತೆ ಪುಷ್ಪ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ರಾಜ್ಯಪಾಲ ರೋಸಯ್ಯ ಅಂತಿಮ ನಮನ ಸಲ್ಲಿಸಿದರು.
*ಒಂದು ಗಂಟೆಗಳ ಕಾಲ ಮೆರವಣಿಗೆಯಲ್ಲಿ ಮರೀನಾ ಬೀಚ್ ಬಳಿ ಬಂದು, ಮುಂಚೆಯೇ ಸಿದ್ದಗೊಂಡಿದ್ದ ವೇದಿಯಲ್ಲಿ ಜಯಾ ಪಾರ್ಥಿವ ಶರೀರವನ್ನು ಇರಿಸಲಾಯಿತು. ಅಂತಿಮ ಸರಕಾರಿ ಗೌರವವನ್ನು ಸಲ್ಲಿಸಲಾಯಿತು. ಪ್ರತಿಯೊಬ್ಬರು ಎದ್ದು ನಿಂತು ಸಲ್ಯೂಟ್ ಸಲ್ಲಿಸಿದರು.
* ಪಾರದರ್ಶಕ ಶವಪೆಟ್ಟಿಗೆಯಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಇರಿಸುತ್ತಿದ್ದಂತೆ ದರ್ಶನ ಪಡೆಯದ ಅಭಿಮಾನಿಗಳು ಗದ್ದಲ ಪ್ರಾರಂಭಿಸಿದರು. ಮಿಲಿಟರಿ ಭದ್ರತೆಯಲ್ಲಿ ಸಾರ್ವತ್ರಿಕ ದರ್ಶನವಾಗುವಂತೆ ಜಯಾ ಪಾರ್ಥಿವ ಶರೀರವನ್ನು ಮಿಲಿಟರಿ ವಾಹನದಲ್ಲಿರಿಸಿದ್ದು ಮರೀನಾ ಬೀಚ್ ಬಳಿಗೆ ಸಂಸ್ಕಾರ ಯಾತ್ರೆ ಪ್ರಾರಂಭವಾಗಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯ ಕರ್ತರು ಜೊತೆಯಲ್ಲಿ ಸಾಗಿದರು.
*ಮೊದಲನೇ ವಿಮಾನದಲ್ಲಿ ಬರಬೇಕಿದ್ದ ರಾಷ್ಟಪತಿಗಳು ವಿಮಾನ ತಾಂತ್ರಿಕ ಕಾರಣದಿಂದ ಮತ್ತೊಂದು ವಿಮಾನದಲ್ಲಿ ಸಂಜೆ 4 ಗಂಟೆಗೆ ಚೆನ್ನೈನ ರಾಜಾಜಿ ಹಾಲ್ ಗೆ ಆಗಮಿಸಿದರು. ಜಯಾ ಅವರ ಪಾರ್ಥಿವ ಶರೀರಕ್ಕೆ ಪುಷ್ಪವನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಮತ್ತು ಎಪಿಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮ್ಮನವರ ಅಂತಿಮ ದರ್ಶನ ಪಡೆದರು.
* ಅಮ್ಮಾ ಅಂತಿಮ ಸಂಸ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಮಿಲಿಟರಿ ವಾಹನದಲ್ಲಿ ಜಯಾ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಮೆರವಣಿಗೆ ಮೂಲಕ ಅಣ್ಣಾಸಾಲೈನಲ್ಲಿರುವ ಮರೀನಾ ಬೀಚ್ ಗೆ ತರಲಾಗುವುದು ನಂತರ ಅಯ್ಯಂಗಾರಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಜರುಗುವವು. ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.
* ಜಯಾಲಲಿತಾ ಅವರ ಅಂತಿಮ ದರ್ಶನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಆಗಮಿಸಿ ಹೂಗಚ್ಚವನ್ನು ಅರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದರು. ನಂತರ ಜಯಾ ಆಪ್ತರಾದ ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಅವರಿಗೆ ಸಾಂತ್ವನ ಹೇಳಿದರು. ರಾಜಕೀಯ ಮುಖಂಡರೊಂದಿಗೆ ಮಾತಕತೆ ನಡೆಸಿ ನಿರ್ಗಮಿಸಿದರು.
* ಜಯಲಲಿತಾ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಸಂಜೆ 4.30ಕ್ಕೆ ಎಂಜಿಆರ್ ಸ್ಮಾರಕದಲ್ಲಿ ಎಂಜಿಆರ್ ಅವರ ಅಂತ್ಯ ಸಂಸ್ಕಾರ ಮಾಡಿದ ಜಾಗದ ಪಕ್ಕದಲ್ಲಿಯೇ ಜಯಾ ಅವರ ಪಾರ್ಥಿವ ಶರೀರವನ್ನು ಸಂಸ್ಕಾರ ಗೊಳಿಸಲು ನಿರ್ಧರಿಸಲಾಗಿದೆ.
* ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಮತ್ತು ಡಿ.ಕೆ.ಶಿವಕುಮಾರ್ ಅವರು ಚೆನ್ನೈನ ರಾಜಾಜಿ ಹಾಲ್ ತಲುಪಿದ್ದು ಅಂತಿಮ ದರ್ಶನ ಪಡೆದರು. ಶಶಿಕಲಾ ಅವರಿಗೆ ಸಾಂತ್ವನ ಹೇಳಿದರು. ನೋವಿನಲ್ಲಿದ್ದ ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಧೈರ್ಯ ಹೇಳಿದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಿರ್ಗಮಿಸಿದರು.
* ರಾಜಾಜಿ ಹಾಲ್ ಮುಖ್ಯದ್ವಾರದ ಬಳಿ ಅಮ್ಮ ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಮುಗಿಬಿದ್ದ ಕಾರಣ ಪೊಲೀಸರು ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿರುವ ಪೊಲೀಸರು ನಿರ್ವಹಣೆ ವೇಳೆ ಕೆಲವರ ಮೇಲೆ ಈ ಕ್ರಮ ಜರುಗಿಸಿದ್ದಾರೆ.
* ಜಯಲಲಿತಾ ದರ್ಶನಕ್ಕೆ ಚೆನ್ನೈನ ರಾಜಾಜಿ ಹಾಲ್ ಗೆ 1.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದು, ಪನ್ನೀರ್ ಸೆಲ್ವಂ ಅವರ ಭುಜವನ್ನು ಸವರಿ ಅಪ್ಪಿಕೊಂಡು ಸಮಾಧಾನ ಹೇಳಿದರು. ನಂತರ ಜಯಲಲಿತಾ ಅವರ ಪಾರ್ಥಿವ ಶರೀರಕ್ಕೆ ಪುಷ್ಟಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಶಶಿಕಲಾ ಅವರ ಬಳಿ ತೆರಳಿ ಸಾಂತ್ವನ ಹೇಳಿದರು. ಮುಖಂಡರ ಬಳಿ ನಡೆದು ಬಂದ ಮೋದಿ ಜನರೆಡೆಗೆ ತಿರುಗಿ ನಮಸ್ಕರಿಸಿದರು. ಜಯಾ ಆಪ್ತರಿಗೆ ಸಾಂತ್ವನ ಹೇಳಿದರು.
* ಜಯಲಲಿತಾ ಅವರ ಅಂತಿಮ ದರ್ಶನಕ್ಕೆ ಬರುತ್ತಿದ್ದ ರಾಷ್ಟ್ರಪತಿ ಅವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಪ್ರಣಬ್ ಮುಖರ್ಜಿ ಅವರಿದ್ದ ವಿಮಾನ ಮತ್ತೆ ದೆಹಲಿಗೆ ತೆರಳಿದೆ. ಅವರು ವಿಮಾನವನ್ನು ಬದಲಿಸಿಕೊಂಡು ಮತ್ತೆ ಅಂತಿಮ ನಮನ ಸಲ್ಲಿಸಲು ಬರುತ್ತಾರಾ ಎಂಬುದು ಇನ್ನು ಖಚಿತವಾಗಿಲ್ಲ.
* ಜಯಲಲಿತಾ ಅವರ ಅಂತಿಮ ದರ್ಶನಕ್ಕೆ ನಟ ರಜನಿಕಾಂತ್ ಅಗಮಿಸಿದ್ದು, ಅಮ್ಮನ ಪಾದಗಳಿಗೆರಗಿ ನಮಿಸಿದರು. ತಮ್ಮ ಕಾಲದ ಶ್ರೇಷ್ಠ ನಟಿಯನ್ನು ಕಳೆದುಕೊಂಡ ಅವರಿಗೆ ದುಃಖವನ್ನು ತಡೆಯಲಾಗಲಿಲ್ಲ. ಮೌನದಲ್ಲಿಯೇ ಹನಿಗಣ್ಣಾದರು. ನಿಧಾನವಾಗಿ ಶಶಿಕಲಾ ಅವರ ಬಳಿಗೆ ದಾವಿಸಿ ಸಾಂತ್ವನ ಹೇಳಿದರು. ಮತ್ತೊಮ್ಮೆ ನಮಿಸಿ ನಿರ್ಗಮಿಸಿದರು.
* ಡಿಎಂಕೆ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರು ಜಯಲಲಿತಾ ಅಂತಿಮ ದರ್ಶನವನ್ನು ಪಡೆದರು. ಡಿಎಂಕೆ ಸದಸ್ಯರೊಂದಿಗೆ ಆಗಮಿಸಿದ ಎಂ. ಕೆ ಸ್ಟಾಲಿನ್ ಅವರು ಪುಷ್ಪ ಗುಚ್ಚವನ್ನು ಅರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದರು. ಕೆಲವು ಹೊತ್ತು ಜಯಾ ಬಳಿಯಿದ್ದು, ನಂತರ ಜಯಾ ಪರಿವಾರದೊಂದಿಗೆ ಮಾತಕತೆ ನಡೆಸಿ ಸಾಂತ್ವನ ಹೇಳಿದರು. [ಜಯಲಲಿತಾ ನಿಧನ ನಂತರದ 10 ಬೆಳವಣಿಗೆ]
* ಕರ್ನಾಟಕ ಮುಖ್ಯಮಂತ್ರಿ ಮಾತನಾಡಿದ್ದು, ಜಯಲಲಿತಾ ಮಹಾನ್ ನಾಯಕಿ, ಉತ್ತಮ ನಟಿ ತಮಿಳುನಾಡಿನ ಜನತೆಗೆ ಅಪಾರ ನಷ್ಟವಾಗಿದೆ. ಇಂದು ತಮಿಳುನಾಡು ಆಕೆಯನ್ನು ಕಳೆದುಕೊಂಡು ತಬ್ಬಲಿಯಾಗಿದೆ ಎಂದು ತಿಳಿಸಿದರು.
* ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಜಯಲಲಿತಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕೆ ಒಬ್ಬ ಮಹಾನ್ ನಟಿ, ರಾಜಕೀಯ ಕಂಡ ಮಹಾನ್ ನಾಯಕಿ, ತಮಿಳುನಾಡಿನ ಬಡ ಜನರ ಮನಸ್ಸಿನಲ್ಲಿ ಮನೆ ಮಾಡಿದ ಅಮ್ಮಾಆಗಿದ್ದಾರೆ. ಎರಡನೇ ಹಂತದ ಮುಖಂಡತ್ವದಲ್ಲಿ ಯಾರನ್ನು ಅವರು ಬೆಳೆಸಲಿಲ್ಲ. ಅವರ ನಿರ್ಧಾರಗಳು ತಮಿಳುನಾಡನ್ನು ಭದ್ರವಾಗಿಸಿದ್ದವು ಎಂದು ಹೇಳಿದ್ದಾರೆ. [68 ರೀಲಿನ 'ಅಮ್ಮ' ಸಿನಿಮಾ ಮತ್ತು ಕನ್ನಡ ದಿನಪತ್ರಿಕೆಗಳು]
* ಪೊಲೀಸರ ಭದ್ರಕೋಟೆಯನ್ನು ಒಡೆದು ಮುನ್ನುಗ್ಗುತ್ತಿರುವ ಅಮ್ಮಾ ಅಭಿಮಾನಿಗಳು ದುಃಖ ಮತ್ತು ಆಕ್ರೋಶದಿಂದ ಆಮ್ಮನ ಕೊನೆಯ ದರ್ಶನಕ್ಕೆ ಕಾತರಿಸುತ್ತಿದ್ದು, ಪೊಲೀಸರು ಜನರ ಒತ್ತಡವನ್ನು ಸಹಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತು ಹೆಚ್ಚುವರಿ ಪೊಲೀಸರನ್ನು ಕರೆತರಲು ಮುಂದಾಗಿದ್ದಾರೆ.
* ಅಮ್ಮನ ದರ್ಶನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದ್ದು, ಮುಗಿಬಿದ್ದ ಜನ ಪೊಲೀಸ್ ಕಾವಲನ್ನು ಮುರಿದು ದರ್ಶನಕ್ಕೆ ಮುನ್ನುಗ್ಗುತ್ತಿದ್ದಾರೆ ಚನ್ನೈ ರಾಜಾಜಿಹಾಲಿನಲ್ಲಿ ಪೂರ್ಣ ಪ್ರಮಾಣದ ಜನಸಂಖ್ಯೆ ತುಂಬಿಹೋಗಿದೆ. ಕೆಲವರು ಅಮ್ಮನ ದರ್ಶನ ಸಿಗದ ಕಾರಣ ಆಕ್ರೋಶಗೊಂಡು ಹಾಲ್ ಸುತ್ತಲೂ ಹಾಕಿರುವ ತಡೆಯನ್ನು ಮುರಿದು ಮುನ್ನುಗ್ಗುತ್ತಿದ್ದಾರೆ.[ಅಧಿಕಾರದಲ್ಲಿದ್ದಾಗಲೇ ನಿಧನ, ತಮಿಳುನಾಡಿನ ಮೂರನೇ ಸಿಎಂ ಜಯಾ]
* ವೆಂಕಯ್ಯ ನಾಯ್ಡು ಅವರು ಜಯಾ ಅಂತಿಮ ದರ್ಶಶ ಪಡೆದು ಪನ್ನೀರ್ ಸೆಲ್ವಂ ಅವರಿಗೆ ಸಾಂತ್ವನ ಹೇಳಿದರು.
* ತಮಿಳುನಾಡಿನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಹಾಗೆಯೇ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.