ಸುಪ್ರಿಂ ತೀರ್ಪು: ತಮಿಳುನಾಡು ರಾಜ್ಯಪಾಲರ ಮುಂದಿರುವ 6 ಆಯ್ಕೆಗಳು
ಇಂದು ಸುಪ್ರಿಂ ಕೋರ್ಟ್ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಳಿಗ್ಗೆ 10:30ಕ್ಕೆ ತೀರ್ಪು ನೀಡಲಿದೆ. ತೀರ್ಪು ನೀಡುತ್ತಿದ್ದಂತೆ ಮತ್ತೆ ಮುಖ್ಯಮಂತ್ರಿ ಗಾದಿಯ ನಿರ್ಧಾರದ ಚೆಂಡು ಗವರ್ನರ್ ಅಂಗಳ ತಲುಪಲಿದೆ.
ಚೆನ್ನೈ, ಫೆಬ್ರವರಿ 14: ಇಂದು ಸುಪ್ರಿಂ ಕೋರ್ಟ್ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಳಿಗ್ಗೆ 10:30ಕ್ಕೆ ತೀರ್ಪು ನೀಡಲಿದೆ. ತೀರ್ಪು ನೀಡುತ್ತಿದ್ದಂತೆ ಮತ್ತೆ ಮುಖ್ಯಮಂತ್ರಿ ಗಾದಿಯ ನಿರ್ಧಾರದ ಚೆಂಡು ಗವರ್ನರ್ ಅಂಗಳ ತಲುಪಲಿದೆ. ಸುಪ್ರಿಂ ಕೋರ್ಟ್ ನೀಡಲಿರುವ ತೀರ್ಪನ್ನಾಧರಿಸಿ ಗವರ್ನರ್ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಸೋಮವಾರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಶಶಿಕಲಾ ನಟರಾಜನ್ ಹಾಗೂ ಒ ಪನ್ನೀರ್ ಸೆಲ್ವಂ ಇಬ್ಬರಿಗೂ ಬಹುಮತ ಸಾಬೀತಿಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದ್ದರು. ಈ ಮತದಾನದಲ್ಲಿ ಎಲ್ಲಾ ಸದಸ್ಯರು ತಾವು ಯಾರನ್ನು ಬೆಂಬಲಿಸುತ್ತೇವೆ ಎಂದು ಗುಪ್ತ ಮತದಾನ ಮಾಡಬೇಕಾಗುತ್ತದೆ. ಪ್ರತಿ ಸದಸ್ಯರು ಮತ ಪತ್ರದಲ್ಲಿ ತಮ್ಮ ಹೆಸರು ಬರೆದು ಕಡ್ಡಾಯವಾಗಿ ಸಹಿ ಹಾಕಿಯೇ ಮತದಾನ ಮಾಡಬೇಕು.[ಶಶಿಕಲಾ ಭವಿಷ್ಯ: 2 ಸುಪ್ರೀಂ ಜಡ್ಜ್ ಗಳ ಮುಂದಿರುವ 4 ಸಾಧ್ಯತೆಗಳು]
ರಾಜ್ಯಪಾಲರ ಮುಂದಿರುವ ಆಯ್ಕೆಗಳು,
ಆಯ್ಕೆ 1
ಒಂದೊಮ್ಮೆ ಸುಪ್ರಿಂ ಕೋರ್ಟ್ ಶಶಿಕಲಾ ದೋಷಿ ಎಂದು ತೀರ್ಪು ನೀಡಿದರೆ ಸಮಸ್ಯೆಯೇ ಇಲ್ಲ. ಆಕೆ ಮುಖ್ಯಮಂತ್ರಿ ಗಾದಿಗೇರುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಶಿಕ್ಷೆಗೆ ಗುರಿಯಾದವರು ಚುನಾವಣೆಗಳಲ್ಲಿ 6 ವರ್ಷ ಕಾಲ ಸ್ಪರ್ಧಿಸುವಂತಿಲ್ಲ. ಹೀಗಾದಾಗ ರಾಜ್ಯಪಾಲರು ಪನ್ನೀರ್ ಸೆಲ್ವಂಗೆ ಮಾತ್ರ ಬಹುಮತ ಸಾಬೀತುಪಡಿಸುವಂತೆ ಸೂಚಿಸಲಿದ್ದಾರೆ.[ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು]
ಆಯ್ಕೆ 2
ಒಂದೊಮ್ಮೆ ಶಶಿಕಲಾ ನಿರ್ದೋಷಿ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದರೆ ಮುಖ್ಯಮಂತ್ರಿ ಗಾದಿಗೆ ಸ್ಪರ್ಧಿಸಬಹುದು. ಹೀಗಾದಾಗ ಮುಖ್ಯಮಂತ್ರಿ ಗಾದಿಗೆ ಇಬ್ಬರು ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ. ಆಗ ರಾಜ್ಯಪಾಲರು ಅಡ್ವೊಕೇಟ್ ಜನರಲ್ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ಆಯ್ಕೆ 3
ಒಂದೊಮ್ಮೆ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿಗಳು ಭಿನ್ನಾಭಿಪ್ರಾಯ ತಾಳಿದರೆ ಆಗ ಪ್ರಕರಣ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಯಾಗಲಿದೆ. ಈಗಾಗಲೇ ಹೈಕೋರ್ಟ್ ಶಶಿಕಲಾರನ್ನು ನಿರ್ದೋಷಿ ಎಂದಿರುವುದರಿಂದ ಹಾಗೂ ಸದ್ಯ ಅದೇ ಜಾರಿಯಲ್ಲಿರುವುದರಿಂದ ಶಶಿಕಲಾ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಆಯ್ಕೆ 4
ಒಂದೊಮ್ಮೆ ಇಬ್ಬರೂ ಜಡ್ಜ್ ಗಳು ದೋಷಿ ಎಂದು ಒಪ್ಪಿಕೊಂಡು, ಆದರೆ ಶಿಕ್ಷೆ ಮಾತ್ರ ಬೇರೆ ಬೇರೆ ನೀಡಿದರೆ ಆಗ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವೇ ಅನ್ವಯವಾಗಲಿದೆ. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಈಗಾಗಲೇ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದರಿಂದ ಶಶಿಕಲಾ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಾಧ್ಯವಾಗುವುದಿಲ್ಲ. ಆಗ ರಾಜ್ಯಪಾಲರು ಶಶಿಕಲಾರನ್ನು ಆಹ್ವಾನಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ.
ಆಯ್ಕೆ 5
ಒಂದೊಮ್ಮೆ ಸರ್ವೋಚ್ಛ ನ್ಯಾಯಾಲಯ ಪ್ರಕರಣವನ್ನು ಹೈಕೋರ್ಟಿಗೆ ವಾಪಸ್ ಕಳುಹಿಸಿದರೆ ಶಶಿಕಲಾರನ್ನು ಸರಕಾರ ರಚಿಸುವಂತೆ ಆಹ್ವಾನಿಸಿ ಬಹುಮತ ಸಾಬೀತಿಗೆ ಅವಕಾಶ ನೀಡಬೇಕಾಗುತ್ತದೆ. ಕಾರಣ ಈಗಾಗಲೇ ಹೈಕೋರ್ಟ್ ಆಕೆಯ ಮೇಲಿನ ಆರೋಪಗಳನ್ನು ಕೈಬಿಟ್ಟಿದೆ. ಹೀಗಾಗಿ ಮುಖ್ಯಮಂತ್ರಿಯಾಗುವ ಶಶಿಕಲಾ ಪ್ರಯತ್ನವನ್ನು ರಾಜ್ಯಪಾಲರು ತಡೆಯುವಂತಿಲ್ಲ.
ತ್ರಿಸದಸ್ಯ ಪೀಠ ಶಿಕ್ಷೆ ನೀಡಿದರೆ
ಒಂದೊಮ್ಮೆ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದರೆ ಆಕೆ ಮುಖ್ಯಮಂತ್ರಿ ಗಾದಿಗೆ ಏರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಪ್ರಕರಣ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಯಾಗುತ್ತದೆ. ಒಂದೊಮ್ಮೆ ತ್ರಿ ಸದಸ್ಯ ಪೀಠವೂ ಆಕೆಯನ್ನು ದೋಷಿ ಎಂದು ತೀರ್ಪು ನೀಡಿದರೆ ಮುಖ್ಯಮಂತ್ರಿಯಾಗಿದ್ದರೂ ಶಶಿಕಲಾ ಹುದ್ದೆ ಕಳೆದುಕೊಳ್ಳಬೇಕಾಗುತ್ತದೆ. ಆಗ ರಾಜ್ಯಪಾಲರು ಸಹಜವಾಗಿ ಮತ್ತೊಬ್ಬ ಅಭ್ಯರ್ಥಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಲಿದ್ದಾರೆ.