ಶಶಿಕಲಾಗೆ ಅಗ್ರಹಾರದ ರಾಗಿಮುದ್ದೆ ಸೇರುತ್ತಿಲ್ಲವಂತೆ!
ಬೆಂಗಳೂರು, ಫೆಬ್ರವರಿ 21 : ಶಶಿಕಲಾಗೆ ಪರಪ್ಪನ ಅಗ್ರಹಾರದ ರಾಗಿಮುದ್ದೆ ಅವರೆಕಾಳು ಸಾರು ರುಚಿಸುತ್ತಿಲ್ಲವಂತೆ ಕಾಣತ್ತೆ! ಅಥವಾ ಮೇಣದಬತ್ತಿ ಮಾಡುವ ವಿಧಾನ ಕರಗತವಾಗುತ್ತಿಲ್ಲವೆಂದು ಕಾಣುತ್ತದೆ. ಆಕೆಯನ್ನು ಬೆಂಗಳೂರಿನಿಂದ ಚೆನ್ನೈಗೆ ವರ್ಗಾವಣೆ ಮಾಡಬೇಕೆಂದು ವಕೀಲರು ಅರ್ಜಿ ಹಿಡಿದು ನಿಂತಿದ್ದಾರೆ.
ಜೈಲನ್ನು ಸೇರಿಕೊಂಡು ಇನ್ನೂ ವಾರವೂ ಆಗಿಲ್ಲ ಅಷ್ಟರಲ್ಲಿ ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಚೆನ್ನೈನಲ್ಲಿರುವ ಪುಳಲ್ ಸೆಂಟ್ರಲ್ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಉದ್ದೇಶದಿಂದ ಪ್ರಯತ್ನ ನಡೆಸಲಾಗುತ್ತದೆ. ಆದರೆ, ಇದು ಸಾಧ್ಯವಾ?[ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಳ ಪಕ್ಕ ಸೈನೈಡ್ ಮಲ್ಲಿಕಾ]
ಫೆಬ್ರವರಿ 14ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಇಳವರಸಿ ಮತ್ತು ಸುಧಾಕರನ್ ಜೊತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ಇಲ್ಲಿ ಪ್ರಾಣ ಬೆದರಿಕೆ ಇದೆ ಎನ್ನುವುದು ಅವರ ವಾದ. ಇದನ್ನು ಪೊಲೀಸ್ ಇಲಾಖೆ ತಳ್ಳಿ ಹಾಕಿದೆ.
ಅವರನ್ನು ಚೆನ್ನೈ ಜೈಲಿಗೆ ಸ್ಥಳಾಂತರಿಸಲು ನಿಖರವಾದ ಕಾರಣವೇನೆಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಸಂಗತಿಯನ್ನು ಎಐಎಡಿಎಂಕೆ ಮೂಲಗಳು ಒಪ್ಪಿಕೊಳ್ಳುವುದೂ ಇಲ್ಲ, ತಳ್ಳಿಹಾಕುವುದೂ ಇಲ್ಲ. ಆದರೆ, ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರವಾದರೆ ವಾಸಿ ಎಂಬುದು ಅವರ ವಾದ.[ಶಶಿಕಲಾಗೆ ಪರಪ್ಪನ ಅಗ್ರಹಾರಕ್ಕೆ ಚುನಾವಣೆ ಆಯೋಗದ ನೋಟಿಸ್]
ಇದಕ್ಕೆ ಮಾಡಬೇಕಾಗಿರುವುದೇನು? : ಚೆನ್ನೈನ ಪೊಲೀಸ್ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿರುವ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಬೇಕು. ಅಥವಾ ಕರ್ನಾಟಕ ಗೃಹ ಸಚಿವಾಲಯಕ್ಕೆ ಅರ್ಜಿ ಗುಜರಾಯಿಸಬೇಕು. ಇವರು ಒಪ್ಪಿಗೆ ನೀಡಿದರೆ ಸ್ಥಳಾಂತರಿಸಲು ಸಾಧ್ಯ. ಇಲ್ಲದಿದ್ದರೆ ಶಶಿಕಲಾ ಮೂರುವರೆ ವರ್ಷ ಇಲ್ಲೇ ಮೇಣದಬತ್ತಿ ತಯಾರಿಸಬೇಕಾಗುತ್ತದೆ.
ಆದರೆ, ಕಾರಣವಿಲ್ಲದೆ ಈರೀತಿ ಕೈದಿಯನ್ನು ಅಥವಾ ಅಪರಾಧಿಯನ್ನು ಸ್ಥಳಾಂತರಿಸಿದ ಉದಾಹರಣೆ ಹಿಂದೆ ಇಲ್ಲ. ಹಾಗೆ ಮಾಡಬೇಕಾದರೆ ಕೋರ್ಟಿನ ಮುಖಾಂತರ ಶಶಿಕಲಾ ಕರ್ನಾಟಕ ಸರಕಾರವನ್ನು ಕೋರಬೇಕಾಗುತ್ತದೆ. ಇಲ್ಲಿಯವರೆಗೆ ಇಂಥ ಯಾವುದೇ ಮನವಿ ಅಥವಾ ಅರ್ಜಿ ಬಂದಿಲ್ಲ ಎಂದು ರಾಜ್ಯದ ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ.
ಇದಕ್ಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿವಿ ಆಚಾರ್ಯ ಅವರು ಹೇಳುವುದೇನೆಂದರೆ, ಶಶಿಕಲಾರನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದೆ. ಅವರನ್ನು ಸ್ಥಳಾಂತರಿಸಬೇಕಾದರೆ ಸುಪ್ರೀಂ ಕೋರ್ಟ್ ಅನುಮತಿ ನೀಡಬೇಕಾಗುತ್ತದೆ. ಕೋರ್ಟ್ ಅನುಮತಿ ಇಲ್ಲದೆ ಸ್ಥಳಾಂತರಿಸಿದರೆ ಅದನ್ನು ಕೋರ್ಟ್ ನಲ್ಲಿ ಪ್ರಶ್ನಿಸಬಹುದಾಗಿದೆ.