ಕಟಕಟನೆ ಹಲ್ಲು ಕಡಿದು ಸಮಾಧಿಗೆ ರಪ್ಪನೆ ಬಾರಿಸಿದ ಶಶಿ
ತಮ್ಮ ಜಠರಾಗ್ನಿಯಿಂದ ವಿದ್ರೋಹಿಗಳನ್ನು ದಹಿಸುವ ಹಾಗೆ ಪರಪ್ಪನ ಅಗ್ರಹಾರ ಜೈಲು ಸೇರಲಿರುವ ಶಶಿಕಲಾ ನಟರಾಜನ್ ಶಪಥ ಮಾಡಿದ್ದಾರೆ. ಅಮ್ಮನ ಸಮಾಧಿಗೆ ನಮಿಸಿ ಪನ್ನೀರ್ ಮತ್ತು ಬಿಜೆಪಿಯನ್ನು ಸರ್ವನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಚೆನ್ನೈ, ಫೆಬ್ರವರಿ 15 : "ಬೆಂಗಳೂರಿಗೆ ತೆರಳುವ ಮುನ್ನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿ ಶಶಿಕಲಾ ಬ್ಯಾಗ್ ತುಂಬ ಹಣವನ್ನು ಮಾತ್ರ ತುಂಬಿಕೊಂಡಿಲ್ಲ, ಜೊತೆಗೆ ಬಾಟಲಿಗಟ್ಟಲೆ ಗ್ಲಿಸರಿನ್ ಕೂಡ ಕೊಂಡೊಯ್ಯುತ್ತಿದ್ದಾರೆ. ಆಕೆ ಮತ್ತೊಮ್ಮೆ ಕಣ್ಣೀರು ಸುರಿಸಿದರೆ ನಾನೂ ಅತ್ತುಬಿಡುತ್ತೇನೆ."
ಹೀಗೊಂದು ತಮಾಷೆಯ ಮಾತು ಶಶಿಕಲಾ ಬಗ್ಗೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಶಶಿಕಲಾ ಸುರಿಸುತ್ತಿರುವುದು ಮೊಸಳೆ ಕಣ್ಣೀರು ಎಂದು ಪನ್ನೀರ್ ಸೆಲ್ವಂ ಅವರೇ ವ್ಯಂಗ್ಯವಾಡಿದ್ದರು. ಅಮ್ಮನನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹರಿಸುತ್ತಿದ್ದಾರೋ, ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿದ್ದಕ್ಕೆ ಕಂಬನಿ ಮಿಡಿಯುತ್ತಿದ್ದಾರೋ ಅಥವಾ ಜೈಲು ಸೇರುತ್ತಿದ್ದೇನೆಂದು ಜಲಧಾರೆ ಹರಿಸುತ್ತಿದ್ದಾರೋ? ಒಟ್ಟಿನಲ್ಲಿ ಚಿನ್ನಮ್ಮನ ಕಣ್ಣೀರು ಎಲ್ಲರಿಗೂ ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. [LIVE: ಶಪಥ, ಧ್ಯಾನ ಬಳಿಕ ಶಶಿಕಲಾ ಬೆಂಗಳೂರು ಜೈಲಿನತ್ತ]
ಈಗ ಜಯಲಲಿತಾ ಸಮಾಧಿಗೆ ಪುಷ್ಪಅರ್ಚನೆ ಮಾಡಿ, ಮೂರು ಬಾರಿ ನಮಸ್ಕರಿಸಿ, ಹಲ್ಲು ಕಟಕಟನೆ ಕಡಿದು ಸಮಾಧಿಗೆ ಕೈತೋರಿಸಿ, ಮೇಲೆ ಒಂದು ಬಾರಿ ರಪ್ಪನೆ ಬಾರಿಸಿ, ಬಾಯಲ್ಲಿ ಯಾರಿಗೂ ಕೇಳದ ಹಾಗೆ ಮಂತ್ರ ಪಠಿಸಿದಂತೆ ಮಿಣಮಿಣನೆ ಏನೇನೋ ಅಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. [ಮೋದಿಯ ತೆರೆಯ ಹಿಂದಿನ ರಾಜಕೀಯಕ್ಕೆ ಹೈರಾಣಾದರೆ ಶಶಿಕಲಾ?]
ಓಪಿಎಸ್, ಬಿಜೆಪಿ ಮುಗಿಸಿ ಹಾಕುವ ಶಪಥ
ಮುಖ್ಯಮಂತ್ರಿ ಪದವಿಗೇರಲು ಶಶಿಕಲಾಗೆ ಅಡ್ಡಗಾಲು ಹಾಕಿದ್ದೇ ಓ ಪನ್ನೀರ್ ಸೆಲ್ವಂ. ಅವರನ್ನು ಮುಂದಿಟ್ಟುಕೊಂಡು ಆಟವಾಡಿದ್ದೇ ಬಿಜೆಪಿ ಎಂಬುದು ಶಶಿಕಲಾಗೆ ಮನವರಿಕೆಯಾಗಿದೆ. ಹಾಗಾಗಿ, ಪನ್ನೀರ್, ಬಿಜೆಪಿ ಮತ್ತು ಇತರ ವೈರಿಗಳನ್ನು ಸರ್ವನಾಶ ಮಾಡಲು ಶಶಿ ಪಣ ತೊಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಶಶಿಕಲಾರನ್ನು ದಾಳವಾಗಿಸಿಕೊಂಡಿದ್ದ ಜಯಲಲಿತಾ
ಶಶಿಕಲಾ ಅವರು ಎಷ್ಟೇ ಎತ್ತರಕ್ಕೆ ಈಗ ಬೆಳೆದಿದ್ದರೂ ಜಯಲಲಿತಾ ಅವರು ಒಂದಾನೊಂದು ಕಾಲದಲ್ಲಿ ಶಶಿಕಲಾರನ್ನು ತಮ್ಮ ಭ್ರಷ್ಟಾಚಾರದ ಪಾಲುದಾರರನ್ನಾಗಿ ಮಾಡಿದ್ದು, ಅವರನ್ನು ದಾಳದಂತೆ ಉಪಯೋಗಿಸಿಕೊಂಡಿದ್ದನ್ನು ಅವರ ವೈರಿಗಳೂ ಅಲ್ಲಗಳೆಯಲಾರರು.
ಆ ದೃಶ್ಯ ಹೇಗಿತ್ತೆಂದರೆ...
ನನ್ನ ಈಗಿನ ಸ್ಥಿತಿಗೆ ನೀನೇ ಕಾರಣ ಎಂದು ಶಶಿಕಲಾ ಅವರು ಡಿಸೆಂಬರ್ 5ರಂದು ಇಹಲೋಕ ತ್ಯಜಿಸಿದ ಜಯಲಲಿತಾ ಅವರತ್ತ ಕೈತೋರಿಸಿ ಮನಸ್ಸಿನಲ್ಲಿಯೇ 'ಅಮ್ಮ'ನನ್ನು ಬೈದುಕೊಳ್ಳುತ್ತಿದ್ದಾರೆ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದು ಒಂದು ರೀತಿ ನಿಜವೂ ಹೌದು.
ಲೈಫು ರಂಗೀನ್ ರಂಗೀನ್ ಆಗಿತ್ತು
ಜಯಲಲಿತಾ ಅವರಿದ್ದಾಗ ಶಶಿಕಲಾ ಅವರ ಲೈಫು ರಂಗೀನ್ ರಂಗೀನ್ ಆಗಿತ್ತು. ಆದರೆ, ಅವರು ಅಸುನೀಗುತ್ತಿದ್ದಂತೆ ಅವರ ರಾಜಕೀಯದ ಆಟಗಳು ತಲೆಬುಡವಾಗುತ್ತಿವೆ. ರಾಜಕೀಯದ ನಡೆಗಳನ್ನು ತೆಗೆದುಕೊಳ್ಳಲು ಶಶಿಕಲಾ ಪರದಾಡುತ್ತಿದ್ದಾರೆ. ಅಮ್ಮನ ಸ್ಥಾನ ತುಂಬುತ್ತೇನೆಂದು ಬೀಗುತ್ತಿದ್ದ ಶಶಿ ಲೆಕ್ಕಾಚಾರಗಳೆಲ್ಲ ತಲೆಗೆಳಗಾಗಿವೆ.