ಶಶಿಕಲಾಗೇ ಆಹ್ವಾನ ನೀಡಬೇಕು : ಸುಬ್ರಮಣಿಯನ್ ಸ್ವಾಮಿ ವಾದ
ಚೆನ್ನೈ, ಫೆಬ್ರವರಿ 10 : "ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ರಾಜೀನಾಮೆ ಸಲ್ಲಿಸಿರುವ ಪನ್ನೀರ್ ಸೆಲ್ವಂ ಅವರಿಗೆ ಸರಕಾರ ರಚಿಸಲು ಅವಕಾಶ ನೀಡಿದರೆ, ಹೊರತೆಗೆದಿರುವ ಟೂತ್ ಪೇಸ್ಟನ್ನು ಮತ್ತೆ ಟ್ಯೂಬ್ ಒಳಗೆ ತುರುಕಿದಂತೆ" ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಬಣ್ಣಿಸಿದ್ದಾರೆ.
ರಾಜ್ಯಪಾಲರ ಮೇಲೆ ಶುಕ್ರವಾರ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಸುಬ್ರಮಣಿಯನ್ ಸ್ವಾಮಿ ಅವರು, ರಾಜ್ಯಪಾಲರು ಈಗಲಾದರೂ ಕರ್ತವ್ಯಪ್ರಜ್ಞೆಯಿಂದ ಎಚ್ಚೆತ್ತುಕೊಂಡಿದ್ದರೆ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ಆಹ್ವಾನ ನೀಡಬೇಕು ಎಂದರು.
ಶಶಿಕಲಾ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುತ್ತಿರುವ ಶಾಸಕರ ಪಟ್ಟಿಯನ್ನು ನೀಡಿದ್ದಾರೆ. ಆದರೆ, ಪನ್ನೀರ್ ಸೆಲ್ವಂ ಅವರು ಯಾವುದೇ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿಲ್ಲ. ಆದ್ದರಿಂದ ನ್ಯಾಯಯುತವಾಗಿ ಶಶಿಕಲಾ ಅವರನ್ನೇ ವಿದ್ಯಾಸಾಗರ್ ಆಹ್ವಾನಿಸಬೇಕು ಎಂಬುದು ಸ್ವಾಮಿಯ ವಾದ.
ಪನ್ನೀರ್ ಸೆಲ್ವಂ ಅವರು ತಾವು ಈಗಾಗಲೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಹಿಂದಕ್ಕೆ ನೀಡಬೇಕು ಅಂತ ಮಾತ್ರ ಕೇಳಿಕೊಂಡಿದ್ದಾರೆ. ಆದರೆ, ಅವರು ಈಗಾಗಲೆ ರಾಜೀನಾಮೆ ಸಲ್ಲಿಸಿಬಿಟ್ಟಿದ್ದಾರೆ. ಅದು ಸ್ವೀಕೃತವೂ ಆಗಿದೆ. ಹೀಗಿರುವಾಗ ವಾಪಸ್ ನೀಡಲು ಹೇಗೆ ಸಾಧ್ಯ? ಎಂಬುದು ಸ್ವಾಮಿ ಅವರ ಪ್ರಶ್ನೆ.
ಸದ್ಯಕ್ಕೆ ಚೆಂಡು ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಅವರ ಅಂಗಳದಲ್ಲಿದೆ. 234 ಶಾಸಕರ ತಮಿಳುನಾಡು ವಿಧಾನಸಭೆಯಲ್ಲಿ 133 ಶಾಸಕರ ಬಲವನ್ನು ಎಐಎಡಿಎಂಕೆ ಹೊಂದಿದೆ. ಇವರಲ್ಲಿ 35ಕ್ಕೂ ಹೆಚ್ಚು ಶಾಸಕರು ಪನ್ನೀರ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. 89 ಶಾಸಕರು ಡಿಎಂಕೆ ಪಕ್ಷದಲ್ಲಿದ್ದಾರೆ.