ರಾಜಕೀಯ ಪ್ರವೇಶದ ವದಂತಿ ಸೃಷ್ಟಿಸಿದ ರಜನಿ ಅಧ್ಯಾತ್ಮ ಹೇಳಿಕೆ
ಚೆನ್ನೈ, ಫೆಬ್ರವರಿ 6: ಸೂಪರ್ ಸ್ಟಾರ್ ರಜನಿಕಾಂತ್ ಮಾತೊಂದು ತಮಿಳುನಾಡು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನನ್ನ ಆಯ್ಕೆ 'ಅಧಿಕಾರ ಅಥವಾ ಶಕ್ತಿ'ಯೇ ಎಂಬ ಮಾತಷ್ಟೇ ಪ್ರಚಾರಕ್ಕೆ ಬಂದು, ಸ್ವತಃ ರಜನಿಕಾಂತ್ ನಾನು ಮಾತನಾಡಿದ್ದು ಅಧ್ಯಾತ್ಮದ ಬಗ್ಗೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡುವಂತಾಗಿದೆ.
ರಜನಿ ಬಿಜೆಪಿ ಜತೆಗೆ ಸೇರಿ ರಾಜಕೀಯ ಪಕ್ಷವೊಂದನ್ನು ಕಟ್ಟುತ್ತಾರೆ ಎಂಬ ಬಗ್ಗೆ ಮಾತು ಚಾಲ್ತಿಯಲ್ಲಿದೆ. ರಾಜಕೀಯದಿಂದ ದೂರ ಇರುವ ರಜನಿಗೆ ಸದ್ಯದ ತಮಿಳುನಾಡಿನ ಪರಿಸ್ಥಿತಿ ಬೇಸರ ತರಿಸಿದೆಯಂತೆ. "ಒಂದು ವೇಳೆ ಜಯಲಲಿತಾಗೆ ಮತ ನೀಡಿದರೆ ಆ ದೇವರು ಕೂಡ ತಮಿಳುನಾಡನ್ನು ಕಾಪಾಡಲಾರ" 1996ರಲ್ಲಿ ಎಂದು ರಜನಿ ಕಾಂತ್ ನೀಡಿದ್ದ ಹೇಳಿಕೆ, ಆಕೆ ಸೋಲಿಗೆ ಕಾರಣವಾಗಿತ್ತು.[ತರಾತುರಿಯಲ್ಲಿ ಸಿಎಂ ಹುದ್ದೆಗೆ ಶಶಿಕಲಾ: ಪ್ರಧಾನಿ ಮೋದಿ ಭಯ ಕಾಡಿತೇ?]
ಆದರೆ, ಆ ಹೇಳಿಕೆಗೆ ಪೂರ್ತಿ ವಿರುದ್ಧವಾಗಿ ದಶಕಗಳ ನಂತರ ಆತ ಮತ್ತೊಮ್ಮೆ ಹೇಳಿಕೆ ನೀಡಿದ್ದರು. "ಜಯಲಲಿತಾ ಅಷ್ಟಲಕ್ಷ್ಮಿಯ ಅಂಶ ಹೊಂದಿದ್ದಾರೆ" ಎಂದು ಹೊಗಳಿದ್ದರು. 2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ರಜನಿಕಾಂತ್ ನ ಭೇಟಿ ಮಾಡಿ, ಬೆಂಬಲ ಕೋರಿದ್ದರು. ಆಗಲೂ ಸಕ್ರಿಯ ರಾಜಕಾರಣದಿಂದ ರಜನಿ ದೂರವೇ ಉಳಿದಿದ್ದರು.
ತಮಿಳುನಾಡಿನಲ್ಲಿ ಅಷ್ಟಾಗಿ ಅಸ್ತಿತ್ವ ಇಲ್ಲದ ಬಿಜೆಪಿ ಈಗ 66 ವರ್ಷದ ರಜನಿಕಾಂತ್ ರನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಆರಂಭಿಸಿದೆ. ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ಕಾಣಿಸಿಕೊಂಡಿರುವ ಶೂನ್ಯವನ್ನು ತುಂಬಲು ಅವರಿಂದ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.[ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]
ಈ ಮಧ್ಯೆ ಇದೇನು ಅಧಿಕಾರ-ಶಕ್ತಿ ಹೇಳಿಕೆ ವಿವಾದ ಅಂದರೆ, ಅದನ್ನು ಆಧ್ಯಾತ್ಮಿಕವಾಗಿ ರಜನಿ ಹೇಳಿದ್ದಂತೆ. "ಹಣ ಮತ್ತು ಕೀರ್ತಿಯನ್ನು ಒಂದು ಕಡೆ ಇರಿಸಿ, ನಿನಗೆ ಏನು ಬೇಕೋ ತೆಗೆದುಕೋ ಎಂದು ಹೇಳಿದರೆ, ಅವೆರಡರ ಬದಲಿಗೆ ಅಧ್ಯಾತ್ಮವನ್ನೇ ಆರಿಸಿಕೊಳ್ತೀನಿ. ಏಕೆಂದರೆ ಅಧ್ಯಾತ್ಮಕ್ಕೆ ಅಪಾರ ಶಕ್ತಿ ಇದೆ. ಏಕೆಂದರೆ ನನಗೆ ಶಕ್ತಿ ಅಂದರೆ ಬಹಳ ಇಷ್ಟ. ಇದನ್ನು ತಪ್ಪಾಗಿ ಅರ್ಥೈಸಬೇಡಿ" ಎಂದಿದ್ದಾರೆ ರಜನಿಕಾಂತ್.