ತ.ನಾಡು ಸಿಎಸ್ ರಾಮ್ ಮನೋಹರ್ ರಾವ್ ಔಟ್, ಗಿರಿಜಾ ಇನ್
ಚೆನ್ನೈ, ಡಿಸೆಂಬರ್ 22: ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ತಮಿಳುನಾಡು ಸರಕಾರ ಗುರುವಾರ ನೇಮಿಸಿದೆ. ಈ ಹಿಂದೆ ಆ ಹುದ್ದೆ ನಿರ್ವಹಿಸುತ್ತಿದ್ದ ರಾಮ್ ಮೋಹನ್ ರಾವ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಒಂದು ದಿನ ನಂತರ ಈ ಘೋಷಣೆ ಹೊರಬಿದ್ದಿದೆ.
ಡಾ.ಗಿರಿಜಾ ವೈದ್ಯನಾಥನ್ ಅವರು ಜಾಗೃತದಳ ಹಾಗೂ ಆಡಳಿತ ಸುಧಾರಣೆ ಆಯುಕ್ತೆಯಾಗಿಯೂ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಎರಡೂ ಹುದ್ದೆಗಳನ್ನು ರಾಮ್ ಮೋಹನ್ ರಾವ್ ನಿರ್ವಹಿಸುತ್ತಿದ್ದರು. ಆದಾಯ ಇಲಾಖೆ ಅಧಿಕಾರಿಗಳು ರಾಮ್ ಮೋಹನ್ ರಾವ್ ಮನೆಯೂ ಸೇರಿದಂತೆ ಹದಿಮೂರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.[ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ]
ಇದರಿಂದ ರಾಜ್ಯ ಸರಕಾರ ಭಾರೀ ಮುಜುಗರಕ್ಕೆ ಈಡಾಗಿತ್ತು. ದಾಳಿ ನಂತರ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತುರ್ತು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಸಹ ಭಾಗವಹಿಸಿದ್ದರು. ಆ ಸಭೆಯಲ್ಲಿ ರಾಮ್ ಮೋಹನ್ ರಾವ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯುವ ನಿರ್ಧಾರಕ್ಕೆ ಬರಲಾಯಿತು.[ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ]
ರಾಮ್ ಮೋಹನ್ ರಾವ್ ಗೆ ಸಂಬಂಧಿಸಿದ ಹದಿಮೂರು ಸ್ಥಳಗಳಲ್ಲಿ ಮೂವತ್ತು ಕೋಟಿಯಷ್ಟು ಮೊತ್ತದ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು. ಈ ಹಿಂದೆ ಡಾ.ಗಿರಿಜಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಭೂ ಆಡಾಳಿತದ ಆಯುಕ್ತೆ ಆಗಿದ್ದರು.