ಐಟಿ ದಾಳಿಗೆ ಮುನ್ನ ಅನುಮತಿ ಬೇಕಿತ್ತೆ? ಬೇಡ್ವೇಬೇಡ!
ಚೆನ್ನೈ, ಡಿಸೆಂಬರ್ 21 : ತಮಿಳುನಾಡಿನ ಪ್ರಧಾನ ಕಾರ್ಯದರ್ಶಿ ರಾಮ್ ಮೋಹನ್ ರಾಯ್ ಅವರ ಕಚೇರಿ ಮತ್ತು ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ನಂತರ ಉದ್ಭವವಾಗಿರುವ ಪ್ರಶ್ನೆಯೆಂದರೆ, ಹೀಗೆ ದಾಳಿ ನಡೆಸುವ ಮುನ್ನ ಅನುಮತಿ ಐಟಿ ಇಲಾಖೆಗೆ ಸಿಕ್ಕಿತ್ತೆ?
ಯಾವುದೇ ಹಿರಿಯ ಸರಕಾರಿ ಅಧಿಕಾರಿಯ ವಿರುದ್ಧ ತನಿಖೆ ನಡೆಸುವ ಮುನ್ನ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿರಬೇಕು ಎಂಬ ಕಾನೂನು ಭ್ರಷ್ಟಾಚಾರ ನಿಗ್ರಹ ಕಾನೂನಿನಡಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ತೀರ್ಪು ನೀಡಿತ್ತು.[ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ]
ಅಂದಿನ ಮುಖ್ಯ ನ್ಯಾಯಮೂರ್ತಿ ಆರ್ ಎಂ ಲೋಧಾ, ನ್ಯಾ. ಎಕೆ ಪಟ್ನಾಯಿಕ್, ನ್ಯಾ. ಎಸ್ ಜೆ ಮುಖ್ಯೋಪಾಧ್ಯಾಯ, ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಇಬ್ರಾಹಿಂ ಖಲೀಫುಲ್ಲಾ ಅವರಿದ್ದ ಪೂರ್ಣಪೀಠ, ಜಂಟಿ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳನ್ನು ಪ್ರಾಥಮಿಕ ವಿಚಾರಣೆಯಿಂದಲೂ ರಕ್ಷಣೆ ನೀಡುವ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಆ್ಯಕ್ಟ್ ಸಂವಿಧಾನದ 14ನೇ ಅನುಚ್ಛೇದವನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು.
ಭ್ರಷ್ಟಾಚಾರವೆಂಬುದು ದೇಶದ ಶತ್ರುವಿದ್ದಂತೆ. ಭ್ರಷ್ಟಾಚಾರದಲ್ಲಿ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಲಿ, ಅಂಥವನನ್ನು ಶಿಕ್ಷಿಸುವುದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಶಿಕ್ಷಿಸಲೇಬೇಕು ಎಂದು ಸುಪ್ರೀಂಕೋರ್ಟ್ ಪೀಠ ಆದೇಶ ಹೊರಡಿಸಿತ್ತು.
ಅಮಿತ್ ಶಾ ಮೇಲೆ ಐಟಿ ದಾಳಿ ಏಕಿಲ್ಲ?
ತಮಿಳುನಾಡಿನ ಪ್ರಧಾನ ಕಾರ್ಯದರ್ಶಿಯ ಕಚೇರಿ ಮತ್ತು ಮನೆಯ ಮೇಲೆ ಐಟಿ ಇಲಾಖೆ ದಾಳಿ ನಡೆಸಿರುವುದು ಅನೈತಿಕ ಮತ್ತು ತಾಂತ್ರಿಕವಾಗಿ ದೋಷಯುಕ್ತವಾದದ್ದು ಎಂದು ಕಿಡಿ ಕಾರಿದ್ದಾರೆ. ಹಣವನ್ನು ಕೂಡಿಹಾಕುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲೆ ಐಟಿ ದಾಳಿ ಏಕೆ ಆಗಬಾರದು ಎಂದೂ ಖಾರವಾಗಿ ಪ್ರಶ್ನಿಸಿದ್ದಾರೆ.
ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಪ್ರತಿಕ್ರಿಯೆ
ರಾಮ್ ಮೋಹನ್ ರಾಯ್ ಅವರ ಮೇಲೆ ಐಟಿ ದಾಳಿ ನಡೆದಿರುವುದು ತಮಿಳುನಾಡಿಗೆ ಕಳಂಕ ತಂದಂತೆ ಎಂದು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ನಾಯಕ ಎಂಕೆ ಸ್ಟಾಲಿನ್ ಅವರು ಪ್ರತಿಕ್ರಿಯಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿಯ ಮೇಲೆ ಇಂಥ ದಾಳಿ ನಡೆದಿದೆ. ಇದು ನಿಜಕ್ಕೂ ಖೇದಕರ ಎಂದಿದ್ದಾರೆ.
ಬೆಂಗಳೂರಿನಲ್ಲಿಯೂ ದಾಳಿ
ಆದಾಯ ತೆರಿಗೆ ಇಲಾಖೆಯ 10ಕ್ಕೂ ಹೆಚ್ಚು ತಂಡಗಳು ಚೆನ್ನೈ, ಬೆಂಗಳೂರು, ಚಿತ್ತೂರು ಮುಂತಾದವುಗಳಲ್ಲಿ ದಾಳಿ ನಡೆಸಿದೆ. ಶೇಖರ್ ರೆಡ್ಡಿ ಮೇಲೆ ದಾಳಿ ನಡೆಸಿದ ನಂತರ ಸಿಕ್ಕ ಸುಳಿವುಗಳ ಆಧಾರದ ಮೇಲೆ ಬೆಂಗಳೂರು, ಚೆನ್ನೈ ಮತ್ತು ಆಂಧ್ರಪ್ರದೇಶದಲ್ಲಿ ದಾಳಿ ನಡೆಸಲಾಗುತ್ತಿದೆ.
ಕಾರ್ಯದರ್ಶಿ ಮನೆಗೆ ಭಾರೀ ಭದ್ರತೆ
ಚೆನ್ನೈನಲ್ಲಿ ಎಲ್ಲೆಲ್ಲಿ ದಾಳಿ ನಡೆಯುತ್ತಿದೆಯೇ ಅಲ್ಲೆಲ್ಲ ಭದ್ರತೆಯ ದೃಷ್ಟಿಯಿಂದ ಸಿಆರ್ಪಿಎಫ್ ತುಕುಡಿಗಳನ್ನು ನಿಯೋಜಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ರಾಮ್ ಮೋಹನ್ ರಾಯ್ ಅವರ ಮನೆಯ ಮೇಲೆ ಬೆಳಿಗ್ಗೆ 5.30ರಿಂದಲೇ ದಾಳಿ ಆರಂಭಿಸಲಾಗಿದೆ.
ಪನ್ನೀರ್ ತುರ್ತು ಸಂಪುಟ ಸಭೆ
ಈ ದಾಳಿ ನಡೆಯುತ್ತಿದ್ದಂತೆ ಗಡಗಡಿಸುತ್ತಿರುವ ಓ ಪನ್ನೀರ್ ಸೆಲ್ವಂ ಅವರ ಸರಕಾರ ಸಂಪುಟ ಸಚಿವರ ತುರ್ತು ಸಭೆ ಕರೆದಿತ್ತು. ಕೋಲ್ಕತಾದಲ್ಲಿ ಐಟಿ ದಾಳಿ ನಡೆದಾಗ ಸೇನೆಯನ್ನು ಕರೆಸಿದಾಗ, ಮಮತಾ ಬ್ಯಾನರ್ಜಿ ಭಾರೀ ಹುಯಿಲೆಬ್ಬಿಸಿದ್ದರು. ಸೇನೆ ಸರಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.