ಭ್ರಷ್ಟಾಚಾರ ತಾಂಡವ, ಆರ್ ಕೆ ನಗರ ಉಪ ಚುನಾವಣೆ ರದ್ದು?
ತಮಿಳುನಾಡಿನ ಆರೋಗ್ಯ ಸಚಿವ ವಿಜಯ ಭಾಸ್ಕರ್ ಮನೆ ಮೇಲೆ ಐಟಿ ದಾಳಿ, ಭ್ರಷ್ಟಾಚಾರ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಡಾ.ರಾಧಾಕೃಷ್ಣನಗರ್ ಕ್ಷೇತ್ರದ ಉಪಚುನಾವಣೆ ನಡೆಯುವುದೆ ಅನುಮಾನವಾಗಿದೆ.
ಚೆನ್ನೈ, ಏಪ್ರಿಲ್ 09: ತಮಿಳುನಾಡಿನ ಆರೋಗ್ಯ ಸಚಿವ ವಿಜಯ ಭಾಸ್ಕರ್ ಮನೆ ಮೇಲೆ ಐಟಿ ದಾಳಿ, ಭ್ರಷ್ಟಾಚಾರ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಡಾ.ರಾಧಾಕೃಷ್ಣನಗರ್ ಕ್ಷೇತ್ರದ ಉಪಚುನಾವಣೆ ನಡೆಯುವುದೆ ಅನುಮಾನವಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಈ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ಸಿಬಿಡಿಟಿ ನೀಡಿದೆ. ವಿಶೇಷ ಚುನಾವಣಾ ಅಧಿಕಾರಿ ವಿಕ್ರಮ್ ಬಾತ್ರಾ ಅವರು ಚೆನ್ನೆಗೆ ಧಾವಿಸಿದ್ದಾರೆ.
ಎಐಎಡಿಎಂಕೆ ನಾಯಕಿ, ದಿವಂಗತ ಜೆ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಡಾ.ರಾಧಾಕೃಷ್ಣನಗರ್ ಕ್ಷೇತ್ರದ ಉಪಚುನಾವಣೆಯಲ್ಲಿ ಎಐಎಡಿಎಂಕೆಯಿಂದ ಟಿವಿವಿ ದಿನಕರನ್ ಅವರು ಸ್ಪರ್ಧಿಸಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಆರೋಗ್ಯ ಸಚಿವ ವಿಜಯ ಭಾಸ್ಕರ್, ನಟ ಶರತ್ ಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು. 83 ಕೋಟಿ ರು ಅಕ್ರಮ ಹಣ ಪತ್ತೆಯಾಗಿತ್ತು. ಸದ್ಯದ ಮಾಹಿತಿಯಂತೆ ಒಂದು ವೋಟಿಗೆ 4,000 ರುನಂತೆ ಟ್ರೆಂಡ್ ಓಡುತ್ತಿದೆ. ಭ್ರಷ್ಟಾಚಾರದ ಕೂಪವಾಗಿರುವ ಈ ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸುವ ತನಕ ಚುನಾವಣೆ ನಡೆಸದಿರುವಂತೆ ತೆರಿಗೆ ಇಲಾಖೆ ಸೂಚಿಸಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ, ತುರ್ತು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.