ಜಯಲಲಿತಾ ಆರೋಗ್ಯ ಮಾಹಿತಿಗಾಗಿ ಹೈಕೋರ್ಟ್ ಗೆ ಪಿಐಎಲ್
ಚೆನ್ನೈ, ಅಕ್ಟೋಬರ್ 4: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಆಸ್ಪತ್ರೆಯಿಂದ ಮತ್ತೊಮ್ಮೆ ಮಾಹಿತಿ ಹೊರಬಂದಿದೆ. ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಸೋಂಕಿಗೆ ರೋಗನಿರೋಧಕ ಔಷಧಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿನ ವೈದ್ಯರ ತಂಡ ಮುಖ್ಯಮಂತ್ರಿಗಳ ಆರೋಗ್ಯವನ್ನು ಪರಿಶೀಲಿಸುತ್ತಿದೆ. ಇನ್ನೂ ಕೆಲ ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸುಧಾರಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ಅಪೋಲೋ ಆಸ್ಪತ್ರೆ ವೈದ್ಯರ ತಂಡದೊಂದಿಗೆ ಲಂಡನ್ ನ ವೈದ್ಯ ರಿಚರ್ಡ್ ಬೇಲೆ ಚರ್ಚೆ ನಡೆಸಿದ್ದು, ಸೂಕ್ತ ಚಿಕಿತ್ಸೆ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ.[ಜಯಲಲಿತಾ ಆರೋಗ್ಯ ಮಾಹಿತಿ ಕೋರಿ ರಾಷ್ಟ್ರಪತಿಗೆ ಪತ್ರ]
ಸೆಪ್ಟೆಂಬರ್ 23ರಂದು ಅತಿಸಾರ ಹಾಗೂ ಜ್ವರದಿಂದ ಬಳಲುತ್ತಿದ್ದ ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ನಂತರ ಅವರ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳು ಹರಡಿದ್ದವು. ಅಭಿಮಾನಿಗಳು ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ ಪೂಜೆ-ಪುನಸ್ಕಾರಗಳನ್ನು ಸಹ ಮಾಡುತ್ತಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಜಯಲಲಿತಾ ಅವರನ್ನು ಸಿಂಗಾಪೂರ್ ಗೆ ಕರೆದುಕೊಂಡು ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.[ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್]
ತಮಿಳುನಾಡು ಸರಕಾರವು ಮುಖ್ಯಮಂತ್ರಿ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅವರ ಫೋಟೋ ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಒತ್ತಾಯಿಸಿದ್ದರು. ಆ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯಪಾಲ ವಿದ್ಯಾಸಾಗರ್ ರಾವ್, ಜಯಲಲಿತಾ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.
ಈ ಮಧ್ಯೆ ಟ್ರಾಫಿಕ್ ರಾಮಸ್ವಾಮಿ ಎಂಬುವರು ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.