ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?
ಜಯಲಲಿತಾ ಅವರ ಸಮಾಧಿಯ ಮುಂದೆ ಅರ್ಧ ಗಂಟೆ ಕುಳಿತು, ಕಣ್ಣು ಮುಚ್ಚಿ ಧ್ಯಾನ ಮುಗಿಸಿ ಬರುತ್ತಿದ್ದಂತೆ 'ಭಪ್ಪರೆ, ಇವರೇನಾ ಪನ್ನೀರ್' ಎನ್ನುವಂತೆ ಬದಲಾಗಿದ್ದಾರೆ. ಜಯಾ ಆತ್ಮ ಇದನ್ನೆಲ್ಲ ಮಾಡಿಸುತ್ತಿದೆಯಾ?
ಚೆನ್ನೈ, ಫೆಬ್ರವರಿ 08 : ತಮಿಳುನಾಡಿಗೆ ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಪನ್ನೀರ್ ಸೆಲ್ವಂಗೆ ಇದ್ದಕ್ಕಿದ್ದಂತೆ ಏನಾಗಿದೆ? ಪಕ್ಷದ ನಾಯಕಿ ನಕ್ಕರೆ ನಗುವ, ಕಷ್ಟಪಟ್ಟರೆ ಕಣ್ಣೀರು ಸುರಿಸುವ ಪನ್ನೀರ್ ಸೆಲ್ವಂ ಅವರು ಇದ್ದಕ್ಕಿದ್ದಂತೆ ಹೀಗೇಕೆ ಬದಲಾದರು?
ಜಯಲಲಿತಾ ಕಣ್ಸನ್ನೆ ತೋರಿಸಿದರೆ ಸಾಕು ರಾಜೀನಾಮೆ ಪತ್ರ ಹಿಡಿದು ಕೈಕಟ್ಟಿ ನಿಲ್ಲುತ್ತಿದ್ದ ಪನ್ನೀರ್, ಶಶಿಕಲಾ ನಟರಾಜನ್ ಅವರು ಕಣ್ಸನ್ನೆ ಮಾಡುವ ಮೊದಲೇ ರಾಜೀನಾಮೆ ಪತ್ರ ಹಿಡಿದು ನಿಂತಿದ್ದರು. ಒಂದೇ ಒಂದು ಮಾತನ್ನೂ ಆಡದೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.[ಪನ್ನೀರ್ ಸೆಲ್ವಂ ರಾಜೀನಾಮೆ, ಸಿಎಂ ಪಟ್ಟಕ್ಕೆ ಶಶಿಕಲಾ ನಟರಾಜನ್]
ಆದರೆ, ಜಯಲಲಿತಾ ಅವರ ಸಮಾಧಿಯ ಮುಂದೆ ಅರ್ಧ ಗಂಟೆ ಕುಳಿತು, ಕಣ್ಣು ಮುಚ್ಚಿ ಧ್ಯಾನ ಮುಗಿಸಿ ಬರುತ್ತಿದ್ದಂತೆ 'ಭಪ್ಪರೆ, ಇವರೇನಾ ಪನ್ನೀರ್' ಎನ್ನುವಂತೆ ಬದಲಾಗಿದ್ದಾರೆ. ಮೊಟ್ಟಮೊದಲ ಬಾರಿಗೆ ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಪಕ್ಷದ ನಾಯಕರ ವಿರುದ್ಧ ದನಿಯೆತ್ತಿದ್ದಾರೆ.
ಪನ್ನೀರ್ ಅವರು ತಿರುಗಿಬಿದ್ದಿರುವುದರಿಂದ ತಮಿಳುನಾಡು ರಾಜಕೀಯದ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅಚ್ಚರಿಯಿಲ್ಲ. ಇನ್ನೇನು ಮುಖ್ಯಮಂತ್ರಿ ಆಗೇಬಿಡುತ್ತೇನೆ ಎಂದು ಬೀಗುತ್ತಿದ್ದ ಶಶಿಕಲಾ ನಟರಾಜನ್ ಅವರ ಅಹಂಕಾರಕ್ಕೆ ಪನ್ನೀರ್ ಅವರ ನಡೆಯಿಂದ ಭಾರೀ ಹೊಡೆತ ಬಿದ್ದಿದೆ.[ಶಶಿಕಲಾ ಮುಖ್ಯಮಂತ್ರಿಯಾಗಬೇಕಂತೆ! ಅಯ್ಯೋ ಪಾಪ ಪನ್ನೀರ್!]
ಈ ನಡುವೆ, ಎಲ್ಲ 134 ಶಾಸಕರು ಪನ್ನೀರ್ ಸೆಲ್ವಂ ಅವರೊಂದಿಗಿದ್ದಾರೆ. ಈ ಕೂಡಲೆ ಪನ್ನೀರ್ ಅವರು ದೆಹಲಿಗೆ ಹೋಗಿ ರಾಷ್ಟ್ರಪತಿ ಮತ್ತು ಗೃಹ ಸಚಿವರನ್ನು ಭೇಟಿಯಾಗಲಿದ್ದಾರೆ. ಅವರೇ ಮಂತ್ರಿಮಂಡಲವನ್ನು ರಚಿಸಲಿದ್ದಾರೆ ಎಂದು ತಂಬಿದುರೈ ಅವರು ಹೇಳಿಕೆ ನೀಡಿದ್ದಾರೆ. [ಶಶಿಕಲಾ ನಟರಾಜನ್ ಮತ್ತು ಮನ್ನಾರ್ ಗುಡಿ ಗ್ಯಾಂಗ್]
ಪನ್ನೀರ್ ಅವರಾಡುತ್ತಿರುವ ಮಾತುಗಳು ಹೇಗಿವೆ ಕೆಳಗಡೆ ಓದಿರಿ...
ಸ್ವಂತ ಇಚ್ಛೆಯಿಂದ ರಾಜೀನಾಮೆಯನ್ನು ನೀಡಿಲ್ಲ
* ನಾನು ನನ್ನ ಸ್ವಂತ ಇಚ್ಛೆಯಿಂದ ರಾಜೀನಾಮೆಯನ್ನು ನೀಡಿಲ್ಲ. ಬಲವಂತವಾಗಿ ನನ್ನಿಂದ ರಾಜೀನಾಮೆಯನ್ನು ಪಡೆಯಲಾಗಿದೆ. (ಪನ್ನೀರ್ ಏನು ಹೇಳುತ್ತಿದ್ದಾರೆ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿಲ್ಲ ಅಂತಾರೆ ಶಶಿಕಲಾ)
ಅಮ್ಮನನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ
* 'ಅಮ್ಮ'ನವರು ಅಪೋಲೋ ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನವೂ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೆ. ಆದರೆ, ಒಂದೇ ಒಂದು ಬಾರಿಯೂ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ.
ಮುಂದೆ ಏನಾಗುತ್ತದೋ ಕಾದು ನೋಡಿ
* ನಾನು ಎಐಎಡಿಎಂಕೆ ಪಕ್ಷದ ಕಟ್ಟಾ ಅನುಯಾಯಿ, ಹಾಗು ಸದಸ್ಯನಾಗಿಯೇ ಇರುತ್ತೇನೆ. ಮುಂದೆ ಏನಾಗುತ್ತದೋ ಕಾದು ನೋಡಿ. (ಹೌದು ಪನ್ನೀರ್ ಅವರನ್ನು ಪಕ್ಷದಿಂದ ಕಿತ್ತು ಬಿಸಾಕುತ್ತೇವೆ ಎಂದಿದ್ದಾರೆ ಶಶಿಕಲಾ)
ಮುಗುಳ್ನಗುವುದು ಯಾವುದೇ ಅಪರಾಧವಲ್ಲ
* ವಿರೋಧ ಪಕ್ಷದ ನಾಯಕರನ್ನು ನೋಡಿ ಮುಗುಳ್ನಗುವುದು ಯಾವುದೇ ಅಪರಾಧವಲ್ಲ. (ವಿಧಾನಸಭೆ ಅಧಿವೇಶನದಲ್ಲಿ ಪನ್ನೀರ್ ವಿರೋಧಿ ನಾಯಕರನ್ನು ನೋಡಿ ನಗುತ್ತಿದ್ದರು ಎಂದು ಶಶಿಕಲಾ ಆರೋಪಿಸಿದ್ದಾರೆ.)
ಅಮ್ಮನವರೇ ಖಜಾಂಚಿಯನ್ನಾಗಿ ಮಾಡಿದ್ದು
* ಪಕ್ಷದ ಖಜಾಂಚಿಯ ಹುದ್ದೆಯನ್ನು ಅಮ್ಮನವರೇ ನನಗೆ ನೀಡಿದ್ದರು. ಅದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. (ಪನ್ನೀರ್ ಅವರಿಂದ ಖಜಾಂಚಿ ಹುದ್ದೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.)