ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ಮುಹೂರ್ತ ನಿಗದಿ!
ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಗುರುವಾರ ಸಂಜೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈಗ ಪಳನಿಸ್ವಾಮಿ ಅವರು ಫೆಬ್ರವರಿ 18ರಂದು ಬಹುಮತ ಸಾಬೀತುಪಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ.
ಚೆನ್ನೈ, ಫೆಬ್ರವರಿ 16: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಗುರುವಾರ ಸಂಜೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರದ ಬೆಳವಣಿಗೆಯಲ್ಲಿ ಪಳನಿಸ್ವಾಮಿ ಅವರು ಬಹುಮತ ಸಾಬೀತುಪಡಿಸಲು ಮುಹೂರ್ತ ನಿಗದಿಯಾಗಿದ್ದು, ಫೆಬ್ರವರಿ 18ರ ಶನಿವಾರದಂದು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.
ಪಳನಿಸ್ವಾಮಿ ಅವರ ಜತೆಗೆ 30 ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸಂಪುಟ ರಚಿಸಲಾಗಿದೆ. ಹಂಗಾಮಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.[ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]
ಲೆಕ್ಕಾಚಾರ: ತಮಿಳುನಾಡಿನ ವಿಧಾನಸಭೆಯಲ್ಲಿ ಒಟ್ಟು 234 ಮಂದಿ ಸದಸ್ಯರಿದ್ದಾರೆ. ಬಹುಮತ ಸಾಬೀತುಪಡಿಸಲು ಸರಳ ಬಹುಮತಕ್ಕೆ118 ಸದಸ್ಯರ ಬೆಂಬಲ ಬೇಕು. ಎಐಎಡಿಎಂಕೆ 136 ಶಾಸಕರನ್ನು ಹೊಂದಿದೆ. ತನ್ನ ಬಳಿ 124 ಶಾಸಕರ ಬೆಂಬಲವಿದೆ ಎಂದು ಪಳನಿಸ್ವಾಮಿ ಅವರು ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಗುಂಪಿನಲ್ಲಿ 11 ಮಂದಿ ಶಾಸಕರು ಗುರುತಿಸಿಕೊಂಡಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಚೆನ್ನೈ ಇಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ತೆರಳುವುದಕ್ಕೂ ಮುನ್ನ ಇ ಪಳನಿಸ್ವಾಮಿ ಅವರನ್ನು ನಿಯೋಜಿತ ಸಿಎಂ ಆಗಿ ಆಯ್ಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು
ಒಂದು ವೇಳೆ ಓ ಪನ್ನೀರ್ ಸೆಲ್ವಂ ಬಣ ಕೂಡಾ ಸರ್ಕಾರ ರಚನೆಗೆ ಮುಂದಾದರೆ ಎರಡು ಬಣಕ್ಕೂ ಸಮಾನ ಅವಕಾಶ ನೀಡಲಾಗುತ್ತದೆ. ಅದರಂತೆ, ತಮಿಳುನಾಡು ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಬಹುಮತ ಸಾಬೀತುಪಡಿಸಲು ಉಭಯ ಬಣಕ್ಕೂ ಸಮಾನ ಅವಕಾಶ ನೀಡಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ಹೇಳಿದ್ದಾರೆ.