ಜಯಲಲಿತಾ ಎಸ್ಟೇಟ್ ನ ಉದ್ಯೋಗಿ ಆತ್ಮಹತ್ಯೆ
ಚೆನ್ನೈ, ಜುಲೈ 4: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾಗೆ ಸೇರಿದ ಕೊಡನಾಡು ಎಸ್ಟೇಟ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ.
ಕಂಪ್ಯೂಟರ್ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಕುಮಾರ್ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ವಿಚಾರಣಾಧಿಕಾರಿ ಮುರಳಿ ಅವರು ಹೇಳಿರುವ ಪ್ರಕಾರ, ದಿನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಪ್ಪತ್ತು ದಿನಗಳ ಹಿಂದಷೇ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ನೋವು ಸಹಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರಬೇಕು. ದಿನೇಶ್ ಮೂಲತಃ ನಡುಗೆಟ್ಟಿಯವರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಸೋಮವಾರ ಬೆಳಗ್ಗೆ ಹತ್ತು ಗಂಟೆ ವೇಳೆಗೆ ದಿನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯಾ ಬಂಗಲೆ ಪೊಯೆಸ್ ಗಾರ್ಡನ್ ನಲ್ಲಿ ರಾತ್ರಿ ಅಳುವ ಹೆಂಗಸಿನ ಧ್ವನಿ!
ಕಳೆದ ನಾಲ್ಕೈದು ವರ್ಷದಿಂದ ದಿನೇಶ್ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಶಸ್ತ್ರಚಿಕಿತ್ಸೆ ಆಗಿದ್ದರಿಂದ ಇಪ್ಪತ್ತು ದಿನಗಳಿಂದ ಕೆಲಸ ಮಾಡಲು ಆಗುತ್ತಿರಲಿಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಜಯಲಲಿತಾ ಅವರ ಒಡೆತನದ ಎಸ್ಟೇಟ್ ನಲ್ಲಿ ನಡೆದ ದರೋಡೆ ಯತ್ನದಲ್ಲಿ ಭದ್ರತಾ ಸಿಬ್ಬಂದಿ ಕೊಲೆ ಆಗಿದ್ದರು. ಆ ನಂತರ ಎರಡು ಸಾವು ಸಂಭವಿಸಿತ್ತು. ಆ ಕಾರಣಕ್ಕೆ ಎಸ್ಟೇಟ್ ಬಗ್ಗೆ ಜನರ ಗಮನ ಸೆಳೆದಿತ್ತು.