'ಅಮ್ಮ'ನ ನಿಷ್ಠ ಒ.ಪನ್ನೀರ್ ಸೆಲ್ವಂಗೆ ಮುಖ್ಯಮಂತ್ರಿ ಪಟ್ಟ?
ಚೆನ್ನೈ, ಡಿಸೆಂಬರ್ 5: ಜಯಲಲಿತಾ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿರುವುದರಿಂದ 'ಅಮ್ಮ'ನ ನಿಷ್ಠ ಒ.ಪನ್ನೀರ್ ಸೆಲ್ವಂಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದು ನಿಕ್ಕಿಯಾಗಿದೆ. ಅದಕ್ಕಾಗಿ ಎಐಎಡಿಎಂಕೆ ಶಾಸಕರನ್ನು ಕರೆಸಿ, ಘೋಷಣಾ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ಚಾಲನೆ ಸಿಕ್ಕಿದೆ.
ಇದೀಗ ಮೂರನೇ ಸಲಕ್ಕೆ ಪನ್ನೀರ್ ಸೆಲ್ವಂಗೆ ಪಟ್ಟ ಕಟ್ಟುವುದಕ್ಕೆ ಪಕ್ಷದ ಒಳಗೆ ಒಪ್ಪಿಗೆ ಸಿಕ್ಕಂತಾಗಿದೆ. ಜಯಲಲಿತಾ ಆರೋಗ್ಯ ಸ್ಥಿತಿಯಲ್ಲಿ ನಿರೀಕ್ಷಿತ ಚೇತರಿಕೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಗಾದಿ ಮೇಲೆ ಕೂರುವುದು ಖಚಿತವಾದಂತಾಗಿದೆ. ಪಕ್ಷದ ಶಾಸಕರನ್ನೆಲ್ಲ ಅಪೋಲೋ ಆಸ್ಪತ್ರೆಯ ಅಂಗಳಕ್ಕೆ ಕರೆದು ಘೋಷಣಾ ಪತ್ರಕ್ಕೆ ಸಹಿ ಪಡೆಯಲಾಗುತ್ತಿದೆ.[ಸ್ವಾಮಿನಿಷ್ಠೆಯ ಪ್ರತೀಕ ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]
ಆಸ್ಪತ್ರೆಗೆ ತೆರಳುವ ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಶಾಸಕರೆಲ್ಲ ಸೇರಿ ಪತ್ರವನ್ನು ನೀಡುವ ಸಾಧ್ಯತೆಗಳಿವೆ. ಜಯಲಲಿತಾ ಅವರ ನಿಷ್ಠರೆಂದೇ ಗುರುತಿಸಿಕೊಂಡಿರುವ ಪನ್ನೀರ್ ಸೆಲ್ವಂ ಈ ಸನ್ನಿವೇಶದ ಸಹಜ ಆಯ್ಕೆ ಎಂಬಂತಾಗಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.[ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ]
ಸೋಮವಾರ ಬೆಳಗ್ಗೆ 11ಕ್ಕೆ ಎಐಎಡಿಎಂಕೆ ಶಾಸಕರ ಸಭೆ ಕರೆಯಲಾಗಿತ್ತು. ಅ ನಂತರ ಹನ್ನೆರಡು ಗಂಟೆಗೆ ಮುಂದೂಡಲಾಯಿತು. ಅಂತಿಮವಾಗಿ ಒಮ್ಮತದ ತೀರ್ಮಾನಕ್ಕೆ ಬಂದು, ಒ.ಪನ್ನೀರ್ ಸೆಲ್ವಂ ಅವರಿಗೆ ಮುಖ್ಯಮಂತ್ರಿ ಹೊಣೆಗಾರಿಕೆ ವಹಿಸಲು ಒಪ್ಪಲಾಗಿದೆ ಎಂಬುದು ಸದ್ಯಕ್ಕೆ ಪಕ್ಷದ ನಂಬಲರ್ಹ ಮೂಲಗಳ ಮಾಹಿತಿ.