ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ಶಶಿಕಲಾ ಫೊಟೋಗೂ ಜಾಗವಿಲ್ಲ!
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾರನ್ನು ನೇಮಿಸಿದ ನಂತರ ಪಕ್ಷದ ಕಚೇರಿಯಲ್ಲಿ ಅವರ ಚಿತ್ರಗಳನ್ನು ಹಾಕಲಾಗಿತ್ತು. ಆದರೆ ವಿಲೀನ ಮಾತುಕತೆಗಳು ಆರಂಭವಾಗುತ್ತಿದ್ದಂತೆ ಭಾವಚಿತ್ರಗಳನ್ನು ಕಸದಬುಟ್ಟಿಗೆ ಎಸೆಯಲಾಗಿದೆ.
ಚೆನ್ನೈ, ಏಪ್ರಿಲ್ 26: ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ನಟರಾಜನ್ ಮತ್ತು ಅವರ ಸಂಬಂಧಿಗಳನ್ನು ಹೊರಗಟ್ಟಿಯಾಗಿದೆ. ಇದೀಗ ಕೇಂದ್ರ ಕಚೇರಿಯಿಂದ ಅವರ ಭಾವಚಿತ್ರಗಳನ್ನೂ ಕಿತ್ತೆಸೆಯಲಾಗಿದೆ.
ಕಳೆದೆರಡು ದಿನಗಳಿಂದ ಕಚೇರಿಯಲ್ಲಿರುವ ಶಶಿಕಲಾ ಚಿತ್ರಗಳನ್ನು ತೆಗೆಯುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. 2016ರಲ್ಲಿ ಹಂಗಾಮಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾರನ್ನು ನೇಮಿಸಿದ ನಂತರ ಪಕ್ಷದ ಕಚೇರಿಯಲ್ಲಿ ಎಂಜಿ ರಾಮಚಂದ್ರನ್ ಹಾಗೂ ಜಯಲಲಿತಾ ಚಿತ್ರಗಳ ಪಕ್ಕದಲ್ಲಿ ಶಶಿಕಲಾ ಚಿತ್ರಗಳನ್ನೂ ತಂದು ಕೂರಿಸಲಾಗಿತ್ತು.[ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಅರೆಸ್ಟ್]
ಆದರೆ ಯಾವಾಗ ಒ ಪನ್ನೀರ್ ಸೆಲ್ವಂ ಬಣ ವಿಲೀನ ಮಾತುಕತೆಗೆ ಮುಂದಾಯಿತೋ ಇದೀಗ ಈ ಭಾವಚಿತ್ರಗಳನ್ನೂ ಕಸದಬುಟ್ಟಿಗೆ ಎಸೆಯಲಾಗಿದೆ.
ವಿಲೀನ ಮಾತುಕತೆ ಆರಂಭಿಸಬೇಕಾದರೆ ಪಕ್ಷದ ಮುಖವಾಣಿಯಲ್ಲಿ ಶಶಿಕಲಾ ನಟರಾಜನ್ ಸಂಬಂಧಿತ ವರದಿ ಪ್ರಸಾರ ನಿಲ್ಲಿಸಬೇಕು. ಕೇಂದ್ರ ಕಚೇರಿಯಲ್ಲಿರುವ ಶಶಿಕಲಾ ಭಾವಚಿತ್ರಗಳನ್ನು ಕಿತ್ತೆಸೆಯಬೇಕು ಎಂಬ ಷರತ್ತನ್ನು ಒ ಪನ್ನೀರ್ ಸೆಲ್ವಂ ಬಣ ಮುಂದಿಟ್ಟಿತ್ತು. ಅದರಂತೆ ಎಡಪ್ಪಾಡಿ ಪಳನಿಸ್ವಾಮಿ ಬಣ ಈ ಕೆಲಸ ಕೈಗೆತ್ತಿಕೊಂಡಿದೆ.
Posters of #SasikalaNatarjan removed from AIADMK HQ in Chennai pic.twitter.com/RZP9OVlPzU
— ANI (@ANI_news) April 26, 2017
ಹೀಗೆ ಪೋಸ್ಟರ್ ಗಳನ್ನು ಕಿತ್ತೆಸೆದು, ಟಿಟಿವಿ ದಿನಕರನ್ ಮತ್ತು ಶಶಿಕಲಾರನ್ನೂ ಪಕ್ಷದಿಂದ ಹೊರ ಹಾಕಿ ಎರಡೂ ಬಣಗಳು ವಿಲೀನ ಪ್ರಕ್ರಿಯೆಗೆ ಇನ್ನೇನು ಸಿದ್ದವಾಗಿವೆ. ಅಂತಿಮ ಹಂತದ ವಿಲೀನ ಮಾತ್ರ ಬಾಕಿ ಉಳಿದುಕೊಂಡಿದೆ. (ಒನ್ ಇಂಡಿಯಾ ಸುದ್ದಿ)