ತಮಿಳುನಾಡಿನಲ್ಲಿ ಮತ್ತೊಂದು ಹೈಡ್ರಾಮ, ಎಐಎಡಿಎಂಕೆ ಬಣಗಳ ವಿಲೀನ?
ಸದ್ಯ ತಮಿಳುನಾಡಿನಲ್ಲಿ ಆಡಳಿತರೂಢ ಪಕ್ಷವಾಗಿರುವ 'ಎಐಎಡಿಎಂಕೆ ಅಮ್ಮ' ಬಣ ಒ ಪನ್ನೀರ್ ಸೆಲ್ವಂ ಬಣದ ಜತೆ ವಿಲೀನವಾಗುವ ಸಂಬಂಧ ಚರ್ಚೆ ನಡೆಯಲಿದೆ.
ಚೆನ್ನೈ, ಏಪ್ರಿಲ್ 18: ಹಲವು ಹೈಡ್ರಾಮಗಳನ್ನು ಕಂಡ ತಮಿಳುನಾಡು ರಾಜಕಾರಣದಲ್ಲಿ ಇದೀಗ ಮತ್ತೊಂದು ಸುತ್ತಿನ ಬೃಹನ್ನಾಟಕ ಆರಂಭವಾಗಿದೆ.
ಸದ್ಯ ತಮಿಳುನಾಡಿನಲ್ಲಿ ಆಡಳಿತರೂಢ ಪಕ್ಷವಾಗಿರುವ 'ಎಐಎಡಿಎಂಕೆ ಅಮ್ಮ' ಬಣ ಒ ಪನ್ನೀರ್ ಸೆಲ್ವಂ ಬಣದ ಜತೆ ವಿಲೀನವಾಗುವ ಸಂಬಂಧ ಚರ್ಚೆ ನಡೆಯಲಿದೆ.[ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?]
ವಿಶೇಷ ಎಂದರೆ ಹೆಚ್ಚಿನ ಸಚಿವರು ವಿಕೆ ಶಶಿಕಲಾ ಮತ್ತು ಅವರ ಸಂಬಂಧಿ ಸದ್ಯ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಟಿಟಿವಿ ದಿನಕರನ್ ರಾಜೀನಾಮೆ ನೀಡಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸದ್ಯ ಶಶಿಕಲಾರನ್ನು ಕಾಣಲು ಬೆಂಗಳೂರಿಗೆ ಬಂದಿದ್ದ ಟಿಟಿವಿ ದಿನಕರನ್ ಮತ್ತೆ ಚೆನ್ನೈಗೆ ವಾಪಾಸಾಗಲಿದ್ದಾರೆ. ದಿನಕರನ್ ಶಶಿಕಲಾ ದರ್ಶನ ಪಡೆಯದೇ ಚೆನ್ನೈಗೆ ಮರಳಲಿದ್ದು ಅವರ ಆಗಮನಕ್ಕಾಗಿ ಮುಖ್ಯಮಮತ್ರಿ ಹಾಗೂ ಎಐಡಿಎಂಕೆ ಅಮ್ಮ ಬಣದ ಮುಂದಾಳು ಎಡಪ್ಪಾಡಿ ಪಳನಿಸ್ವಾಮಿ ಹಾಗೂ ವಿರೋಧಿ ಬಣದ ಒ ಪನ್ನೀರ್ ಸೆಲ್ವಂ ಕಾಯುತ್ತಿದ್ದಾರೆ.[ಶಶಿಕಲಾರನ್ನು ಜೈಲಿನಿಂದ ಹೊರತರಬಲ್ಲೆ : ಡೀಲರ್]
ಮುಖ್ಯಮಂತ್ರಿ ಗಾದಿಗೆ ಪೈಪೋಟಿ
ವಿಲೀನ ಪ್ರಕ್ರಿಯೆ ಚಾಲ್ತಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಆರಂಭವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎನ್ನಲಾಗಿದೆ. ಆದರೆ ಒ ಪನ್ನೀರ್ ಸೆಲ್ವಂ ಬೆಂಬಲಿಗರು ಮಾತ್ರ ಅವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳುತ್ತಿದ್ದಾರೆ. ಜತೆಗೆ ಪಕ್ಷದ ಮಖ್ಯಸ್ಥ ಹುದ್ದೆಗೂ ಅವರೇ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪಕ್ಷದ ಮುಖ್ಯಸ್ಥರಾಗಿ ಪನ್ನೀರ್ ಸೆಲ್ವಂ
ಮುಖ್ಯಮಂತ್ರಿ ಹುದ್ದೆ ನೀಡುತ್ತಾರೋ ಬಿಡುತ್ತಾರೋ ಆದರೆ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೂರು ದಶಕಗಳ ಕಾಲ ಜಯಲಲಿತಾ ಆಪ್ತರಾಗಿ ಹಲವು ಬಾರಿ ಹಂಗಾಮಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದ ಪನ್ನೀರ್ ಸೆಲ್ವಂ ಪಕ್ಷದ ಮುಖ್ಯಸ್ಥರಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.[ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಮೇಲೆ ಎಫ್ಐಆರ್]
ವಿಲೀನ ಯಾಕೆ?
ಮುಖ್ಯವಾಗಿ ಪಕ್ಷದ ಚಿಹ್ನೆ ಪಡೆಯಲು ಟಿಟಿವಿ ದಿನಕರನ್ ಲಂಚ ನೀಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಎಲ್ಲಿ ಪಕ್ಷಕ್ಕೇ ತೊಂದರೆಯಾಗುತ್ತೋ ಎಂಬ ಭಯದಲ್ಲಿ ಎರಡೂ ಬಣದವರು ವಿಲೀನ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡೆಲೆಯ ಚಿಹ್ನೆಯನ್ನು ಮರಳಿ ಪಡೆಯುವುದು ಇವರ ಯೋಜನೆಯಾಗಿದೆ. ಮಾತುಕತೆಗೆ ಎಐಎಡಿಎಂಕೆ ಅಮ್ಮ ಬಣ 10 ಜನರ ತಂಡ ರಚಿಸಿದ್ದು ಪನ್ನೀರ್ ಸೆಲ್ವಂ ಬಣದ ಜತೆ ಮಾತುಕತೆ ನಡೆಸಲಿದೆ.[ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?]
ಶಶಿಕಲಾ, ದಿನಕರನ್ ಉಚ್ಛಾಟನೆ
ಪಕ್ಷ ವಿಲೀನಗೊಳ್ಳುತ್ತಿದ್ದಂತೆ ಶಶಿಕಲಾ ಮತ್ತು ದಿನಕರನ್ ರನ್ನು ಪಕ್ಷದಿಂದ ವಿಲೀನ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇದಕ್ಕೆ ಎಷ್ಟು ಜನ ಬೆಂಬಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಪಳನಿಸ್ವಾಮಿ ಬೆಂಬಲವಿದ್ಯಾ?
ಇಲ್ಲಿಯವರೆಗೆ ಎಡಪ್ಪಾಡಿ ಪಳನಿಸ್ವಾಮಿಯವರನ್ನು ಶಶಿಕಲಾ ಕೈಗೊಂಬೇ ಎಂದುಕೊಳ್ಳಲಾಗಿದೆ. ಪಕ್ಷ ವಿಲೀನವಾಗುತ್ತಿದ್ದಂತೆ ಅವರು ಶಶಿಕಲಾ ಉಚ್ಛಾಟನೆಗೆ ಒಪ್ಪುತ್ತಾರೋ ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ. ಸದ್ಯ ಶಶಿಕಲಾ ಜೈಲಿನಿಂದಲೇ ಪಕ್ಷ ಹಾಗೂ ಸರಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು ವಿಲೀನ ಮತ್ತು ಶಶಿಕಲಾ ಉಚ್ಛಾಟನೆ ಕುತೂಹಲ ಹುಟ್ಟಿಸಿದೆ.
ಮಾತುಕತೆಗೆ ಸ್ವಾಗತ
ಪನ್ನೀರ್ ಸೆಲ್ವಂ ಬಳಗದ ಮಾತುಕತೆ ಆಹ್ವಾನ ನೀಡುತ್ತಿದ್ದಂತೆ 25 ಶಾಸಕರು ಸೋಮವಾರ ಚೆನ್ನೈನಲ್ಲಿ ತುರ್ತು ಸಭೆ ನಡೆಸಿದ್ದಾರೆ. ಸಭೆಯ ನಂತರ ಮಾತನಾಡಿದ ಹಣಕಾಸು ಸಚಿವ ಡಿ ಜಯಕುಮಾರ್, "ಪನ್ನೀರ್ ಸೆಲ್ವಂ ಬಣದ ಮಾತುಕತೆ ಆಹ್ವಾನವನ್ನು ನಾವು ಒಪ್ಪಿಕೊಳ್ಳುತ್ತೇವೆ," ಎಂದು ಹೇಳಿದ್ದಾರೆ. ಹೀಗಾಗಿ ಮಾತುಕತೆ ನಡೆಯುವುದು ನಿಶ್ಚಿತವಾಗಿದೆ. ಆದರೆ ಮಾತುಕತೆಯ ನಿರ್ಧಾರದ ಬಗ್ಗೆ ಇನ್ನೂ ಗೊಂದಲಗಳಿವೆ.
ಎರಡೆಲೆ ಗುರುತು ಮತ್ತೆ ಬೇಕು.
ವಿಲೀನ ಪ್ರಕ್ರಿಯೆಯ ಉದ್ದೇಶ ಬೇರೇನೂ ಅಲ್ಲ. "ನಮಗೆ ಪಕ್ಷದ ಎರಡೆಲೆ ಗುರುತು ಮತ್ತೆ ಬೇಕು,"ಎಂದು ಡಿ ಜಯಕುಮಾರ್ ಹೇಳಿದ್ದಾರೆ. ಸದ್ಯ ಈ ಚಿನ್ಹೆಯನ್ನು ಚುನಾವಣಾ ಆಯೋಗ ತಡೆ ಹಿಡಿದಿದೆ. "ನಾವು ಪಕ್ಷನ್ನು ಒಂದಾಗಿ ಇಡುತ್ತೇವೆ. 172 ಶಾಸಕರು ಜತೆಗಿದ್ದಾರೆ. ಅವರೆಲ್ಲಾ ಮುಂದುವರಿಯಬೇಕಾದರೆ ಮೊದಲು ಪಕ್ಷ ಉಳಿಯಬೇಕು," ಎಂದು ಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಆಯೋಗದತ್ತ ಎಲ್ಲರ ಚಿತ್ತ
ಇಂದು ಎಐಎಡಿಎಂಕೆ ಸಂಸತ್ ಸದಸ್ಯ, ಹಿರಿಯ ನಾಯಕ ಎಂ ತಂಬಿದೊರೈ ಚುನಾವಣಾ ಆಯೋಗಕ್ಕೆ ತೆರಳಿ ಮಾತುಕತೆ ನಡೆಸಲಿದ್ದಾರೆ. ಹಾಗಾಗಿ ಎಲ್ಲರೂ ಚುನಾವಣಾ ಆಯೋಗದತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನೊಂದು ಕಡೆ ಶಶಿಕಲಾರನ್ನು ಪಕ್ಷದ ಮುಖ್ಯಸ್ಥರನ್ನಾಗ ನೇಮಿಸಿದ್ದರ ವಿರುದ್ಧ ಪನ್ನೀರ್ ಸೆಲ್ವಂ ಚುನಾವಣಾ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು ಅದರ ಭವಿಷ್ಯವೂ ನಿರ್ಧಾರವಾಗಬೇಕಿದೆ.
ದಿನಕರನ್ ಉಚ್ಛಾಟಿಸಿದ್ದ ಜಯಾ
ಹಾಗೇ ನೋಡಿದರೆ ಟಿಟಿವಿ ದಿನಕರನ್ ರನ್ನು ದಿವಂಗತ ಜಯಲಲಿತಾ 2011ರಲ್ಲಿ ಉಚ್ಛಾಟನೆ ಮಾಡಿದ್ದರು. ತಾವು ಬದುಕಿರುವವರೆಗೂ ಅವರನ್ನು ಜಯಾ ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ ಯಾವಾಗ ಶಶಿಕಲಾ ಪಕ್ಷದ ಚುಕ್ಕಾಣಿ ಹಿಡಿದರೋ ಅವರ ಸಂಬಂಧಿ ದಿನಕರನ್ ಕೂಡಾ ಪಕ್ಷಕ್ಕೆ ಸೇರ್ಪಡೆಯಾದರು. ಇದನ್ನು 'ಅಮ್ಮಗೆ ಮಾಡಿದ ಅವಮಾನ' ಎಂದು ವಿರೋಧಿ ಬಣ ಹೇಳುತ್ತಾ ಬಂದಿದೆ.
ಅರೋಪಗಳಲ್ಲಿ ಮುಳುಗೇಳುತ್ತಿರುವ ದಿನಕರನ್
ಸದ್ಯ ಎಐಎಡಿಎಂಕೆಯ ಎರಡೆಲೆಯ ಗುರುತು ಪಡೆದುಕೊಳ್ಳಲು ಲಂಚ ನೀಡಿದ ಆರೋಪವನ್ನು ದಿನಕರನ್ ಎದುರಿಸುತ್ತಿದ್ದಾರೆ. ಇದೇ ವೇಳೆ ಆರ್.ಕೆ ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಿದ ಆರೋಪವೂ ದಿನಕರನ್ ಮೇಲಿದೆ. ಕೆಲವು ದಿನಗಳ ಹಿಂದೆ ಇಲ್ಲಿನ ಚುನಾವಣೆಯನ್ನು ಆಯೋಗ ರದ್ದು ಪಡಿಸಿತ್ತು.