ಪಳನಿಗೆ ಬಹುಮತ: ಶನಿವಾರದ 10 ಪ್ರಮುಖ ಬೆಳವಣಿಗೆಗಳು
ಡಿಎಂಕೆ ಗದ್ದಲ ನಡುವೆಯೂ ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ ಪಳನಿ ಸ್ವಾಮಿ; ಬಹುಮತ ಸಾಬೀತುಪಡಿಸಿದ ನಂತರ ಜಯಲಲಿಯಾ ಸ್ಮಾರಕ್ಕೆ ತೆರಳಿ ನಮನ
ಚೆನ್ನೈ, ಫೆಬ್ರವರಿ 18: ಪ್ರಮುಖ ಪ್ರತಿಪಕ್ಷವಾದ ಡಿಎಂಕೆಯ ಗದ್ದಲ, ಹರತಾಳದ ನಡುವೆಯೂ ತಮಿಳುನಾಡಿನ ನೂತನ ಮುಖ್ಯಮಂತ್ರಿ, ಎಐಎಡಿಎಂಕೆ ಪಕ್ಷದ ನೂತನ ಶಾಸಕಾಂಗ ನಾಯಕ ಪಳನಿ ಸ್ವಾಮಿ, ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಿದರು.
122 ಶಾಸಕರು ಪಳನಿ ಪರವಾಗಿ ಮತದಾನ ಮಾಡಿದರೆ, ಅವರ ವಿರುದ್ಧ ಬಂಡಾಯವೆದ್ದಿದ್ದ ಎಐಎಡಿಎಂಕೆಯ ಮತ್ತೊಬ್ಬ ನಾಯಕ ಪನ್ನೀರ್ ಸೆಲ್ವಂ ಅವರ ಬಣದ 11 ಶಾಸಕರು ಪಳನಿ ಸರ್ಕಾರದ ವಿರುದ್ಧ ಮತ ಚಲಾಯಿಸಿದರು. ಇದರಿಂದಾಗಿ, ಪಳನಿ ಸರ್ಕಾರಕ್ಕೀಗ ಸ್ಥಿರತೆ ಸಿಕ್ಕಂತಾಗಿದೆ.[ಶಶಿಕಲಾ ಮುಖ್ಯಮಂತ್ರಿ ಆಗಲ್ಲ ಅಂತ ಭವಿಷ್ಯ ನುಡಿದಿದ್ದ ಜ್ಯೋತಿಷಿ]
ಅಲ್ಲದೆ, ತಮಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಯಾಗಿ ಮುಖ್ಯಮಂತ್ರಿ ಸ್ಥಾನ ತಪ್ಪಿಹೋದರೂ, ತಮ್ಮ ಅನುಯಾಯಿಯನ್ನು ಪಟ್ಟಕ್ಕೇರಿಸುವ ಮೂಲಕ ತಮ್ಮ ವಿರುದ್ಧ ಸಡ್ಡು ಹೊಡೆದಿದ್ದ ಪನ್ನೀರ್ ಸೆಲ್ವಂ ಅವರ ಮುಖ್ಯಮಂತ್ರಿಯಾಗುವ ಯತ್ನವನ್ನು ವಿಫಲವಾಗಿಸುವಲ್ಲಿ ಶಶಿಕಲಾ ಯಶಸ್ವಿಯಾಗಿದ್ದಾರೆ.
ಬಹುಮತ ಸಾಬೀತಿನ ನಂತರ ಜಯಲಲಿತಾ ಅವರ ಸ್ಮಾರಕಕ್ಕೆ ತೆರಳಿದ ಪಳನಿ ಸ್ವಾಮಿ, ಸ್ಮಾರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಡಿಎಂಕೆ ಗದ್ದಲ
ಕಲಾಪ ಶುರುವಾದ ನಂತರ, ಪ್ರಮುಖ ಪ್ರತಿಪಕ್ಷವಾದ ಡಿಎಂಕೆಯ ಸದಸ್ಯರು ಬಹುಮತ ಸಾಬೀತು ಕಲಾಪ ಆರಂಭವಾಗುತ್ತಿದ್ದಂತೆ ಡಿಎಂಕೆ ಸದಸ್ಯರು ಇತ್ತೀಚೆಗೆ ಎಐಎಡಿಎಂಕೆ ನಾಯಕಿ ಶಶಿಕಲಾ ಅವರು ಬೆಂಬಲಿಗರ ರೆಸಾರ್ಟ್ ರಾಜಕಾರಣದ ಬಗ್ಗೆ ಚರ್ಚೆ ಹಾಗೂ ಬಹುಮತ ಸಾಬೀತಿಗೆ ಗೌಪ್ಯ ಮತದಾನಕ್ಕಾಗಿ ಆಗ್ರಹಿಸಿದರು. ಇದಕ್ಕೆ ಸ್ಪೀಕರ್ ಧನರಾಜ್ ಒಪ್ಪದಿದ್ದಾಗ ಗಲಾಟೆ ಮಾಡಿದರು.[ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಗಳಿಸಲಿರುವ ಹಣವೆಷ್ಟು?]
ಮತದಾನಕ್ಕೆ ಚಾಲನೆ
ಈ ಗಲಾಟೆ ನಡುವೆಯೇ, ಸ್ಪೀಕರ್ ಅವರು ಬಹುಮತದ ಪ್ರಕ್ರಿಯೆಗೆ ಚಾಲನೆ ನೀಡಿ ಸದನದಲ್ಲಿದ್ದ ಶಾಸಕರನ್ನು ಎಣಿಸುವ ಮೂಲಕ ಒಟ್ಟು ಶಾಸಕರ ಲೆಕ್ಕ ಪಡೆದು ಧ್ವನಿ ಮತದ ಮೂಲಕ ಬಹುಮತ ಸಾಬೀತುಪಡಿಸುವಂತೆ ಆಜ್ಞಾಪಿಸಿದರು.
ಮೇಜು, ಕುರ್ಚಿ ಧ್ವಂಸ
ಇದರಿಂದ ಮತ್ತಷ್ಟು ಕೆರಳಿದ ಡಿಎಂಕೆ ಸದಸ್ಯರು, ತೀವ್ರ ಪ್ರತಿಭಟನೆ ನಡೆಸಿದರು. ಇದು ತಾರಕ್ಕೇರಿತು. ಶಾಸಕರ ಆಸನಗಳ ಮುಂದಿದ್ದ ಮೈಕುಗಳನ್ನು ಕಿತ್ತೆಸೆದ ಶಾಸಕರು, ಮೇಜು, ಕುರ್ಚಿಗಳನ್ನು ಉರುಳಿಸಿ ದಾಂಧಲೆ ನಡೆಸಿದರು. ಫೈಲುಗಳನ್ನು ಹರಿದು ಸ್ಪೀಕರ್ ಮೇಲೆ ತೂರಿದರು. ಹಾಗಾಗಿ, ಸ್ಪೀಕರ್ ಧನರಾಜ್, ಸದನದ ಕಲಾಪವನ್ನು ಮಧ್ಯಾಹ್ನ ಒಂದು ಗಂಟೆಗೆ ಮುಂದೂಡಿದರು.
ಸ್ಪೀಕರ್ ತಳ್ಳಾಡಿದ ಶಾಸಕರು
ಮಧ್ಯಾಹ್ನ ಕಲಾಪ ಮತ್ತೆ ಶುರುವಾದಾಗ ಪುನಃ ಡಿಎಂಕೆ ಪಕ್ಷದ ದಾಂಧಲೆ ಮುಂದುವರಿಯಿತು. ಸ್ಪೀಕರ್ ಅವರ ಸ್ಥಾನದ ಬಳಿಗೆ ಸಾಗಿ ಹೋಗಿ ಅವರನ್ನು ಘೆರಾವ್ ಮಾಡಿ ಬಹುಮತ ಸಾಬೀತು ಕಲಾಪ ಮುಂದೂವಂತೆ ಒತ್ತಡ ಹೇರಿದರು. ಇದಕ್ಕೆ ಸ್ಪೀಕರ್ ಒಪ್ಪದಿದ್ದಾಗ ಸ್ಪೀಕರ್ ಅವರನ್ನು ತಳ್ಳಾಡಿದರು. ಇದರಿಂದಾಗಿ, ಸ್ಪೀಕರ್ ಬಿಗಿ ಭದ್ರತೆಯಲ್ಲಿ ತಮ್ಮ ಕೊಠಡಿಗೆ ತೆರಳಬೇಕಾಯಿತು.
ಸ್ಪೀಕರ್ ತಕ್ಕಶಾಸ್ತಿ ನೀಡಿದರು
ಆನಂತರ, ಸ್ಪೀಕರ್ ಸ್ಥಾನದ ಮೇಜು ಉರುಳಿಸಿ ದಾಂಧಲೆ ನಡೆಸಿದ ಡಿಎಂಕೆ ಶಾಸಕರು, ಮೇಜಿನ ಮೇಲಿದ್ದ ಮೈಕು ಕಿತ್ತು ಸ್ಪೀಕರ್ ಕುರ್ಚಿಯ ಮೇಲೆ ಕುಳಿತು ಸಭಾ ಮರ್ಯಾದೆಗೆ ಧಕ್ಕೆ ತಂದರು. ಇದರಿಂದಾಗಿ, ಸ್ಪೀಕರ್ ಗಲಾಟೆ ಎಬ್ಬಿಸಿದ ಎಲ್ಲಾ 88 ಡಿಎಂಕೆ ಶಾಸಕರನ್ನು ಕಲಾಪದಿಂದ ಉಚ್ಛಾಟಿಸಿದರು.
ಪಳನಿ ಹಾದಿ ಸುಗಮ
ಡಿಎಂಕೆ ಶಾಸಕರ ಉಚ್ಛಾಟನೆ ನಂತರ, ತಮಿಳುನಾಡು ಸರ್ಕಾರದ ಕಾರ್ಯದರ್ಶಿ ಗಿರಿಜಾ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು, ಡಿಎಂಕೆ ಸದಸ್ಯರು ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗಿರುವ ಶಾಸಕರ ಸಂಖ್ಯೆ ಇಳಿಮುಖವಾಗಿರುವುದರಿಂದ ಬಹುಮತ ಸಾಬೀತುಪಡಿಸಲು ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರು 77 ಶಾಸಕರ ಬೆಂಬಲ ತೋರಿಸಿದರೂ ಸಾಕು ಎಂದು ವಿವರಿಸಿದರು.
ಕೂಗಾಟ, ಹಾರಾಟ
ಇತ್ತ ಡಿಎಂಕೆ ಸದಸ್ಯರು ಸದನ ಬಿಟ್ಟು ಹೊರಹೋಗಲು ಸಿದ್ಧರಿರಲಿಲ್ಲ. ಸ್ಪೀಕರ್ ಅವರು ತಮ್ಮ ಮನವಿಗೆ ಸ್ಪಂದಿಸದೇ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆಂದು ಸದಸದಲ್ಲೇ ಪ್ರತಿಭಟನೆಗೆ ಮುಂದಾದರು.
ಕ್ಷಿಪ್ರ ಕಾರ್ಯಾಚರಣೆ ಪಡೆಯೂ ಆಗಮನ
ಪರಿಸ್ಥಿತಿ ಉದ್ವಿಗ್ನಗೊಂಡು, ಹೆಚ್ಚಿನ ಪೊಲೀಸರನ್ನು ವಿಧಾನಸಭೆಯ ಕಟ್ಟಡದ ಸುತ್ತಲೂ ನಿಯೋಜಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ಕರೆಸಿಕೊಳ್ಳಲಾಯಿತು. ಸದನದ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
ಡಿಎಂಕೆ ಶಾಸಕರ ತೆರವು
ಇತ್ತ, ಸದನ ಬಿಡದೇ ಪಟ್ಟು ಹಿಡಿದ ಡಿಎಂಕೆ ಸದಸ್ಯರನ್ನು ಪೊಲೀಸರ ಸಹಾಯದಿಂದ ಹೊರಹಾಕಲಾಯಿತು. ಇದರಿಂದ ಕೆಂಡಾಮಂಡಲವಾದ ಡಿಎಂಕೆ ಸದಸ್ಯರು ರಾಜ್ಯಪಾಲರ ಬಳಿ ದೂರು ನೀಡುವುದಾಗಿ ಘೋಷಿಸಿದರು.
ಬಹುಮತದಲ್ಲಿ ಗೆದ್ದ ಪಳನಿ
ಈ ಎಲ್ಲಾ ಘಟನೆಗಳ ತರುವಾಯ ಮಧ್ಯಾಹ್ನ 3 ಗಂಟೆಗೆ ಸದನ ಮತ್ತೆ ಆರಂಭವಾಗಿ ಧ್ವನಿ ಮತದಾನಕ್ಕೆ ಚಾಲನೆ ನೀಡಲಾಯಿತು. ಪಳನಿ ಪರವಾಗಿ 112 ಶಾಸಕರು ಮತ ಚಲಾಯಿಸಿದರೆ, ಅವರ ವಿರುದ್ಧವಾಗಿ ಪನ್ನೀರ್ ಸೆಲ್ವಂ ಸೇರಿದಂತೆ ಅವರ ಬಣದ 11 ಶಾಸಕರು ಮತ ಚಲಾಯಿಸಿದರು. ಹೀಗಾಗಿ, ಬಹುಮತದೊಂದಿಗೆ ಪಳನಿ ಸರ್ಕಾರ ಸದನದಲ್ಲಿ ಮುಂದುವರಿಯುವುದಾಗಿ ಸ್ಪೀಕರ್ ಘೋಷಿಸಿದರು.