ಮುಂದಿನ ವಾರ ರಜನಿಕಾಂತ್, ಮೋದಿ ಮಹತ್ವದ ಭೇಟಿ
ಚೆನ್ನೈ, ಮೇ 21 : ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಕುರಿತು ಸಣ್ಣ ಸೂಚನೆ ನೀಡಿರುವ ಸ್ಟೈಲ್ ಕಿಂಗ್ ರಜನಿಕಾಂತ್ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವುದು ಭಾರೀ ಕುತೂಹಲ ಕೆರಳಿಸಿದೆ.
ಮುಂದಿನ ವಾರ ಅವರು ದೆಹಲಿಗೆ ಹಾರಲಿದ್ದು, ಮೋದಿಯವರನ್ನು ಭೇಟಿಯಾಗಲಿರುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಈ ಸಂಗತಿಯನ್ನು ರಜನಿಕಾಂತ್ ಅವರ ಹತ್ತಿರದ ಮೂಲಗಳು ಕೂಡ ಖಚಿತಪಡಿಸಿವೆ.
ರಜನಿಕಾಂತ್ ಅವರು ಭಾರತೀಯ ಜನತಾ ಪಕ್ಷ ಸೇರುವುದಾದರೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ. ಅವರು ಬಿಜೆಪಿ ಸೇರುತ್ತಾರೋ ಬಿಡುತ್ತಾರೋ ಮೊದಲು ಅವರು ರಾಜಕೀಯಕ್ಕೆ ಧುಮುಕಬೇಕು ಎಂಬ ಮಾತನ್ನೂ ಅವರು ಸೇರಿದ್ದಾರೆ.
ಜಯಲಲಿತಾ ಅವರ ಸಾವಿನ ನಂತರ ಕಲಸುಮೇಲೋಗರವಾಗಿರುವ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ತನ್ನ ಅಸ್ವಿತ್ವವನ್ನು ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ಮುಖವಿಲ್ಲದಿರುವುದು ಭಾರೀ ಕೊರತೆಯಾಗಿದೆ. ಆ ಕೊರತೆಯನ್ನು ರಜನಿ ತುಂಬಬಹುದು ಎಂಬುದು ಬಿಜೆಪಿ ಆಶಯ.
ರಜನಿಕಾಂತ್ ಅವರು ರಾಜಕೀಯ ಸೇರುವುದು ಜೋಕ್ ಎಂದು ಅಪಹಾಸ್ಯ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಅವರನ್ನು ಹೊರತುಪಡಿಸಿದರೆ, ತಮಿಳುನಾಡಿನ ಬಹುತೇಕ ರಾಜಕಾರಣಿಗಳು ರಜನಿ ರಾಜಕೀಯಕ್ಕೆ ಬರುವುದನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಅಲ್ಲದೆ, ದೈವೇಚ್ಛೆ ಇದ್ದರೆ ರಾಜಕೀಯಕ್ಕೆ ಧುಮುಕುತ್ತೇನೆ ಎಂದು ರಜನಿಕಾಂತ್ ಹೇಳಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಕುಲಾವಿ ಕಟ್ಟಲು ಆರಂಭಿಸಿದೆ. ಮುಂದಿನ ರಾಜಕೀಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿ ಮುಳುಗಿದೆ.
ಆದರೆ, ರಾಷ್ಟ್ರಪತಿ ಚುನಾವಣೆ ನಡೆಯುವುದಕ್ಕೆ ಮೊದಲು ಬಿಜೆಪಿಯಾಗಲಿ, ರಜನಿಕಾಂತ್ ಆಗಲಿ ಯಾವುದೇ ಘೋಷಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ. ಇದು ಕೇವಲ ಸೌಹಾರ್ದಯುವ ಭೇಟಿಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಬೆಳವಣಿಗೆ ಮುಂದಿನ ಮಹತ್ವದ ರಾಜಕೀಯ ನಡೆಗಳಿಗೆ ಶ್ರೀಕಾರ ಹಾಕಲಿದೆ.