ಕಾವೇರಿಗಾಗಿ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ವಿಘ್ನೇಶ್!
ಚೆನ್ನೈ, ಸೆ. 16: ಕರ್ನಾಟಕದಲ್ಲಿ ತಮಿಳರ ಮೇಲೆ ಕನ್ನಡಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಕನ್ನಡಿಗರ ವಿರುದ್ಧ ಘೋಷಣೆ ಕೂಗಿ ಬೆಂಕಿ ಹಚ್ಚಿಕೊಂಡಿದ್ದ ನಾಮ್ ತಮಿಳರ್ ಕಚ್ಚಿಯ ಕಾರ್ಯಕರ್ತ ಬಿ ವಿಘ್ನೇಶ್ ಶುಕ್ರವಾರ ಸಾವನ್ನಪ್ಪಿದ್ದಾರೆ.
ನಾಮ್ ತಮಿಳರ್ ಪಕ್ಷದ ಕಾರ್ಯಕರ್ತ ವಿಘ್ನೇಶ್ ಗುರುವಾರ ನಡೆದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.[ಚೆನ್ನೈ: ಕನ್ನಡಿಗರಿಗೆ ಧಿಕ್ಕಾರ ಕೂಗಿ, ಬೆಂಕಿ ಹಚ್ಚಿಕೊಂಡ ಪ್ರಜೆ!]
ತಂಜಾವೂರು ಬಳಿಯ ಮಣ್ಣಾರ್ ಗುಡಿ ಎಂಬ ಊರಿನ ನಿವಾಸಿ ವಿಘ್ನೇಶ್ ಅವರನ್ನು ಗುರುವಾರ ಸಂಜೆ 4.40ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೈಮೇಲೆ ಶೇ 93ರಷ್ಟು ಬೆಂಕಿಯಿಂದ ಸುಟ್ಟ ಗಾಯಗಳಾಗಿತ್ತು. ವಿಘ್ನೇಶ್ ಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಕಿಲ್ಪಾಕ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ನಟ ಕಮ್ ರಾಜಕಾರಣಿ ಸೀಮಾನ್ ನಾಯಕತ್ವದ ನಾಮ್ ತಮಿಳರ್ ಕಚ್ಚಿಯ ಕಾರ್ಯಕರ್ತ ವಿಘ್ನೇಶ್ ಸಾವಿನ ಸುದ್ದಿಯನ್ನು ಪಕ್ಷ ಕೂಡಾ ದೃಢಪಡಿಸಿ, ವಿಷಾದ ವ್ಯಕ್ತಪಡಿಸಿದೆ.
'ಗುರುವಾರ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಫೇಸ್ ಬುಕ್ಕಿನಲ್ಲಿ ಮುಂಚಿತವಾಗಿ ಪ್ರಕಟಿಸಿದ್ದ ಎನ್ನಲಾಗಿದೆ. ಈ ಘಟನೆಯನ್ನು ನೇರವಾಗಿ ಟೆಲಿಕಾಸ್ಟ್ ಮಾಡಿದರೆ ನಿಮ್ಮ ವಾಹಿನಿಯ ಟಿಆರ್ ಪಿ ಹೆಚ್ಚುತ್ತದೆ ಎಂದು ಮಾಧ್ಯಮಗಳಿಗೆ ಹೇಳಿದ್ದನಂತೆ. ಆದರೆ, ಯಾರೂ ಈ ಬಗ್ಗೆ ಗಮನಹರಿಸಿರಲಿಲ್ಲ' ಎಂದು ಆಪ್ತರು ನೋವು ತೋಡಿಕೊಂಡಿದದಾರೆ.(ಒನ್ಇಂಡಿಯಾ ಸುದ್ದಿ)