ಜಯಾ ಫೋಟೋ ತೆಗೆಸಿ, ಯಾವ ಯೋಜನೆಗೂ ಆಕೆ ಹೆಸರು ಬೇಡ
ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ದೋಷಿ ಎಂದು ಘೋಷಣೆ ಆಗಿರುವುದರಿಂದ ಸರ್ಕಾರಿ ಕಚೇರಿಗಳು ಹಾಗೂ ಸ್ಥಳೀಯ ಸಂಸ್ಥೆ ಕಾರ್ಯಾಲಯಗಳಿಂದ ಜಯಲಲಿತಾ ಫೋಟೋ ತೆಗೆಸಬೇಕು ಎಂದು ಡಿಎಂಕೆ ಮುಖಂಡ ಸ್ಟಾಲಿನ್ ಆಗ್ರಹಿಸಿದ್ದಾರೆ
ಚೆನ್ನೈ, ಫೆಬ್ರವರಿ 25: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಆದ್ದರಿಂದ ಆಕೆ ಹೆಸರಿನಲ್ಲಿರುವ ಸರಕಾರಿ ಯೋಜನೆಗಳ ಹೆಸರು ಬದಲಿಸಬೇಕು. ಕಚೇರಿಗಳಿಂದ ಆಕೆಯ ಫೋಟೋಗಳನ್ನು ತೆಗೆಯಬೇಕು ಎಂದು ವಿಪಕ್ಷದ ನಾಯಕ, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಪ್ರತಿಭಟನೆ ನಡೆಸಿದ್ದಾರೆ.
ತೆರಿಗೆದಾರರ ಹಣವನ್ನು ಜಯಲಲಿತಾ ಅವರ ಜನ್ಮದಿನ (ಫೆಬ್ರವರಿ 24) ಆಚರಿಸಲು ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ದೋಷಿ. ಈಗಾಗಲೇ ಆಕೆ ಹೆಸರಿನಲ್ಲಿ ಸರಕಾರಿ ಯೋಜನೆಗಳಿವೆ. ಇನ್ನು ಮುಂದೆ ಸರಕಾರದಿಂದ ಜಯಲಲಿತಾ ಹೆಸರಿನ್ನು ಯಾವುದೇ ಯೋಜನೆಗೂ ಇಡಬಾರದು" ಎಂದು ಚೆನ್ನೈನಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.[ಕೇಂದ್ರ ಸರ್ಕಾರ ಜಯಾ ಸಾವಿನ ತನಿಖೆ ನಡೆಸಲಿ: ಪನ್ನೀರ್ ಸೆಲ್ವಂ ಆಗ್ರಹ]
ಮುಖ್ಯಮಂತ್ರಿ ಕಚೇರಿ, ಸ್ಥಳೀಯ ಸಂಸ್ಥೆಗಳ ಕಚೇರಿ ಹಾಗೂ ಕಾರ್ಯಾಲಯದಲ್ಲಿ ಇರುವ ಜಯಲಲಿತಾ ಫೋಟೋಗಳನ್ನು ಕೂಡಲೇ ತೆಗೆಯಬೇಕು. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇವೆ. ಈಗಾಗಲೇ ಸರಕಾರದ ಮುಖ್ಯಕಾರ್ಯದರ್ಶಿ ಗಿರಿಜಾ ವೈದ್ಯನಾಥನ್ ಅವರ ಗಮನಕ್ಕೆ ಈ ವಿಚಾರ ತಂದಿದ್ದೇವೆ. ಅದನ್ನು ಗಮನಿಸುವುದಾಗಿ ಹೇಳಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಜಯಲಲಿತಾ 69ನೇ ಜನ್ಮದಿನದ ಪ್ರಯುಕ್ತ ಸರಕಾರದಿಂದ ಜಾಹೀರಾತು ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಸ್ಟಾಲಿನ್, ಅದೇ ದಿನ ಮರ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಇತರ ಸಚಿವರು ಹಾಗೂ ಮುಖ್ಯಕಾರ್ಯದರ್ಶಿ ಅದರಲ್ಲಿ ಭಾಗವಹಿಸಿದ್ದನ್ನು ಟೀಕಿಸಿದ್ದಾರೆ.[ಪೋಯಸ್ ಗಾರ್ಡನ್ ಬಂಗಲೆಗಾಗಿ ಶುರುವಾಯಿತು ಮಹಾಕದನ!]
ಆದರೆ, ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಐಎಡಿಎಂಕೆ, ಸ್ಟಾಲಿನ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ. ಜಯಲಲಿತಾ ಸಾವಿನ ದುಃಖದಲ್ಲಿರುವ ಅವರ ಬೆಂಬಲಿಗರಿಗೆ ಮತ್ತೆ ಈ ರೀತಿ ಬೇಸರ ಮಾಡುವುದು ಸರಿಯಲ್ಲ ಎಂದು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.