ಶಶಿಕಲಾರ 'ಬೇನಾಮಿ' ಸರಕಾರಕ್ಕೆ ಪೋಯಸ್ ಬಂಗಲೆ ಮೇಲೆ ಯಾವ ಹಕ್ಕಿದೆ?: ದೀಪಾ
ಚೆನ್ನೈ, ಮೇ 26 : ಪೋಯಸ್ ಗಾರ್ಡನ್ ನಲ್ಲಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾರ ಮನೆ ನಾನು ಹಾಗೂ ಸೋದರ್ ದೀಪಕ್ ಗೆ ಸೇರಿದ್ದು ಎಂದು ಜಯಾ ಸೋದರ ಸಂಬಂಧಿ ಹಾಗೂ ಎಂಜಿಆರ್ ಅಮ್ಮ ದೀಪಾ ಪೆರವೈನ ನಾಯಕಿ ದೀಪಾ ಜಯಕುಮಾರ್ ಶುಕ್ರವಾರ ಹೇಳಿದ್ದಾರೆ.
ಇದೇ ವೇಳೆ ಪೋಯಸ್ ಗಾರ್ಡನ್ ಮನೆಯನ್ನು ಸ್ಮಾರಕವಾಗಿ ಮಾಡುವ ಬಗ್ಗೆ ಎಐಎಡಿಎಂಕೆ ಎರಡೂ ಬಣದ ಯೋಜನೆಗಳು ಏನಿವೆ ಎಂದು ಕೂಡ ಪ್ರಶ್ನಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ದೀಪಾ, ಬಂಗಲೆಯನ್ನು ಸ್ಮಾರಕ ಮಾಡುವ ಹಿಂದೆ ಜಯಲಲಿತಾ ಅವರ ರಕ್ತ ಸಂಬಂಧಿಗಳಾದ ನಮ್ಮಿಬ್ಬರ ವಿರುದ್ಧ ದ್ವೇಷ ತೀರಿಸಿಕೊಳ್ಳುವ ಹುನ್ನಾರ ಇದೆ ಎಂದಿದ್ದಾರೆ.[ಪೋಯಸ್ ಗಾರ್ಡನ್ ಬಂಗಲೆಗಾಗಿ ಶುರುವಾಯಿತು ಮಹಾಕದನ!]
ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ಇಂಥ ಯೋಜನೆ ಮಾಡಿದ್ದಾರೆ ಎಂದು ಆರೋಪಿಸಿರುವ ದೀಪಾ, ಆಕೆಯ ಎಲ್ಲ ಆಸ್ತಿಗಳ ಕಾನೂನುಬದ್ಧ ವಾರಸುದಾರರು ನಾನು ಹಾಗೂ ದೀಪಕ್. ಆ ಬಂಗಲೆಯನ್ನು ನಮ್ಮ ಒಪ್ಪಿಗೆ ಇಲ್ಲದೆ ಸ್ಮಾರಕವಾಗಿ ಮಾಡುವುದು ಕಾನೂನಾತ್ಮಕವಾಗಿ ಹಾಗೂ ನೈತಿಕವಾಗಿ ತಪ್ಪು ಎಂದಿದ್ದಾರೆ.[]
ಶಶಿಕಲಾರ 'ಬೇನಾಮಿ' ಆಗಿರುವ ಈ ಸರಕಾರಕ್ಕೆ ಇಂಥ ನಿರ್ಧಾರ ತೆಗೆದುಕೊಳ್ಳುವ ಯಾವ ಹಕ್ಕಿದೆ? ಶಶಿಕಲಾ ನಾಟಕ ಮಾಡಿದರೆ ನಾನು ಕಾನೂನು ಕ್ರಮ ತೆಗೆದುಕೊಳ್ಳಲು ಸಿದ್ಧಳಾಗಿದ್ದೇನೆ. ಜಯಲಲಿತಾ ಅವರಿಗಾಗಿ ಮತ ಹಾಕಿದ್ದಾರೆ. ಜನರಿಗಾಗಿ ಕೆಲಸ ಮಾಡಿ ಎಂದು ಈ ಬೇನಾಮಿ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ.