ಜಲ್ಲಿಕಟ್ಟು: ಪ್ರತಿಭಟನೆ ತಡೆಗೆ ಸರಕಾರ ಮಧ್ಯಪ್ರವೇಶ
ಚೆನ್ನೈ, ಜನವರಿ, 18: ತಮಿಳರ ಭಾವನಾತ್ಮಕ ಕ್ರೀಡೆ ಜಲ್ಲಕಟ್ಟಿಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ಬಂಧ ವಿರುದ್ಧ ತಮಿಳುನಾಡಿನಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನಕ್ಕೆ ತಮಿಳುನಾಡು ಸರಕಾರ 500 ವರ್ಷ ಇತಿಹಾಸವಿರುವ ಜಲ್ಲಿಕಟ್ಟನ್ನು ಮುಂದುವರೆಸಲು ಬದ್ಧವಿರುವುದಾಗಿ ತಿಳಿಸಿದೆ.[ಜಲ್ಲಿಕಟ್ಟು; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ]
ಚೆನ್ನೈನ ಮರೀನಾ ಬೀಚ್ನಲ್ಲಿ ಮಂಗಳವಾರ 5,000ಕ್ಕೂ ಹೆಚ್ಚು ಮಂದಿ ಮೇಣದ ಬತ್ತಿಗಳನ್ನು ಹಿಡಿದು ಜಲ್ಲಿಕಟ್ಟು ಆಚರಿಸುವಂತೆ ಅಹೋರಾತ್ರಿ ಧರಣಿ ನಡೆಸಿದರು. ಪೊಲೀಸರು ನೂರಕ್ಕೂ ಹೆಚ್ಚು ಮಂದಿಯನ್ನು ಸೆರೆಹಿಡಿದ ಪರಿಣಾಮ, ಬುಧವಾರವೂ ಕಾಂಚಿಪುರಂ, ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನಾದ್ಯಂತ ಯುವಕರು ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆ ಕಾವು ಏರುತ್ತಿದ್ದಂತೆ ಮೀನುಗಾರಿಕೆ ಸಚಿವ ಡಿ. ಜಯಕುಮಾರ್ ಮತ್ತು ಹಿರಿಯ ಸಚಿವ ಕೆ ಪಾಂಡ್ಯರಾಜನ್ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆಗೆ ಚ್ಯುತಿ ಬಾರದಂತೆ ಮುಂದು ವರೆಸಲು ಸರ್ಕಾರ ಬದ್ಧವಿರುವುದಾಗಿ ಆಶ್ವಾಸನೆ ನೀಡಿದ್ದಾರೆ.[ಜಲ್ಲಿಕಟ್ಟು ಕ್ರೀಡೆ ಬಗ್ಗೆ ಸುಗ್ರೀವಾಜ್ಞೆ ತನ್ನಿ: ಶಶಿಕಲಾ ಆಗ್ರಹ]
ಸಂಕ್ರಾಂತಿಯಿಂದಲೂ ಮಧುರೈ ಇತರೆಡೆ ಗುಪ್ರಗಾಮಿನಿಯಾಗಿ ಧರಣಿ ನಡೆಯುತ್ತಾ ಬುಧವಾರಕ್ಕೆ ಪ್ರತಿಭಟನೆ ಭುಗಿಲೆದ್ದಿದೆ. ಕೆಲವೆಡೆ ಪೊಲೀಸರು ಲಾಠಿ ಪ್ರಹಾರವನ್ನೂ ಮಾಡಿದ್ದಾರೆ. ಆದರೆ ಪ್ರತಿಭಟನೆಗೆ ಭಾಗಿಯಾರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಉದ್ರಿಕ್ತರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ಈ ನಡುವೆ ಮಂಗಳವಾರ ವೆಲ್ಲೂರಿನ ವಿಲ್ಲುಕೊಟೈನಲ್ಲಿ ಜಲ್ಲಿ ಕಟ್ಟು ಆಚರಣೆ ವೇಳೆ ಗೂಳಿ ಗುದ್ದಿ ಯುವಕನೋಬ್ಬ ಮೃತಪಟ್ಟಿದ್ದಾನೆ.