ತಮಿಳುನಾಡಿನ ಹಲವೆಡೆ ಐಟಿ ದಾಳಿ: ಶಶಿಕಲಾ ಆಪ್ತ, ನಟ ಶರತ್ ಕುಮಾರ್ ಮನೆ ರೇಡ್
ಚೆನ್ನೈ, ಏಪ್ರಿಲ್ 7: ತಮಿಳುನಾಡು ಸರ್ಕಾರದ ಆರೋಗ್ಯ ಸಚಿವ ವಿಜಯ ಭಾಸ್ಕರ್, ವಿಶ್ವವಿದ್ಯಾಲಯವೊಂದರ ಕುಲಪತಿ, ಚಿತ್ರ ನಟ ಶರತ್ ಕುಮಾರ್ ಅವರ ನಿವಾಸ ಸೇರಿದಂತೆ ತಮಿಳುನಾಡಿನ ಹಲವೆಡೆ ಶುಕ್ರವಾರ (ಏಪ್ರಿಲ್ 7) ತೆರಿಗೆ ಅಧಿಕಾರಿಗಳ ದಾಳಿಗಳು ನಡೆದಿವೆ. ಒಟ್ಟಾರೆಯಾಗಿ 34 ಕಡೆ ಐಟಿ ರೇಡ್ ಆಗಿದೆ ಎಂದು ಹೇಳಲಾಗಿದೆ.
ಇವರಲ್ಲಿ ತಮಿಳುನಾಡು ಸರ್ಕಾರದ ಆರೋಗ್ಯ ಸಚಿವರಾದ ವಿಜಯ ಭಾಸ್ಕರ್ ಅವರು, ಎಐಎಡಿಎಂಕೆ ಪಕ್ಷದ ನಾಯಕಿಯಾದ ಶಶಿಕಲಾ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ. ಚೆನ್ನೈ ಹಾಗೂ ಪುದು ಕೋಟ್ಟೈನಲ್ಲಿರುವ ಇವರ ಕಚೇರಿ, ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.
ಇದರೊಂದಿಗೆ, ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಗೀತಾ ಲಕ್ಷ್ಮಿ ಅವರ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ರೈಡ್ ಏಕೆ?: ಇದೇ ತಿಂಗಳ 12ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಂದ ತೆರವಾಗಿ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಈ ಸಂದರ್ಭದಲ್ಲಿ ವಿಜಯ ಭಾಸ್ಕರ್ ಅವರು ಮತದಾರರಿಗೆ ಹಣ ಹಂಚಿದ್ದಾರೆನ್ನಲಾದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ದಾಳಿಗೆ ಕಾರಣ ಎನ್ನಲಾಗಿದೆ.
ಇನ್ನು, ಎಐಎಸ್ಎಂಕೆ ಪಕ್ಷದ ನಾಯಕ ಶರತ್ ಕುಮಾರ್ ಅವರು, ಈಗಾಗಲೇ ಈ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮತದಾರರಿಗೆ ಹಣ ಸಂದಾಯ ವಿಚಾರದಲ್ಲಿ ಅವರದ್ದೂ ಪಾತ್ರವಿದೆ ಎಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ರೈಡ್ ನಡೆಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಆರೋಪ ನಿರಾಕರಣೆ: ಆದರೆ, ಈ ಆರೋಪಗಳನ್ನು ಎಐಎಡಿಎಂಕೆಯ ಉಪಾಧ್ಯಕ್ಷ ಹಾಗೂ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿಯಾದ ದಿನಕರನ್ ಅವರು ತಳ್ಳಿಹಾಕಿದ್ದಾರೆ. ಹಣ ಹಂಚುವ ವೀಡಿಯೊ ಸುಳ್ಳು. ಇದೆಲ್ಲವೂ ವಿರೋಧ ಪಕ್ಷವಾದ ಡಿಎಂಕೆ ಕುತಂತ್ರ ಎಂದು ಅವರು ಆರೋಪಿಸಿದ್ದಾರೆ.