ಕರುಣಾನಿಧಿ ಪತ್ನಿಗೆ ಆಟಿಕೆ ಪಿಸ್ತೂಲು ತೋರಿ ಬೆದರಿಸಿದ ಬೆಂಗಳೂರಿಗನ ಬಂಧನ
ಬೆಂಗಳೂರಿನ ರಾಜೇಂದ್ರ ಪ್ರಸಾದ್ ಎಂಬಾತ ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಮನೆಗೆ ನುಗ್ಗಿ ಪತ್ನಿ ರಾಜಾತಿ ಅಮ್ಮಾಳ್ ರನ್ನು ಆಟಿಕೆ ಪಿಸ್ತೂಲು ತೋರಿಸಿ ಹಣ-ಒಡವೆ ನೀಡುವಂತೆ ಬೆದರಿಸಿದ್ದಾನೆ.
ಚೆನ್ನೈ, ಫೆಬ್ರವರಿ 13: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಮನೆಗೆ ನುಗ್ಗಿದ್ದ ಕಳ್ಳನೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಕ್ಕಳಾಟಿಕೆಯ ಪಿಸ್ತೂಲು ಇಟ್ಟುಕೊಂಡಿದ್ದ ಆತ, ಕರುಣಾನಿಧಿ ಅವರ ಪತ್ನಿ ರಾಜತಿ ಅಮ್ಮಾಳ್ ಅವರನ್ನು ಬೆದರಿಸಿ, ಹಣ ನೀಡುವಂತೆ ಕೇಳಿದ್ದಾನೆ.
ಹಾಗೆ ಒಳನುಗ್ಗಿ ಬೆದರಿಸಿದವನನ್ನು ಬೆಂಗಳೂರು ಮೂಲದ ರಾಜೇಂದ್ರ ಪ್ರಸಾದ್ (30) ಎಂದು ಗುರುತಿಸಲಾಗಿದೆ. ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ಕರುಣಾನಿಧಿ ಅವರ ಮನೆಯಲ್ಲಿ ರಾಜತಿ ಅಮ್ಮಾಳ್ ಮತ್ತು ರಾಜ್ಯಸಭಾ ಸದಸ್ಯೆ ಕನಿಮೊಳಿ ಇದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕನಿಮೊಳಿ ಅವರು ತಕ್ಷಣವೇ ಮನೆಗೆ ಹಿಂತಿರುಗಿದ್ದಾರೆ.[2ಜಿ : ಎ ರಾಜಾ, ಕನಿಮೋಳಿ, ಅಮ್ಮಾಳ್ ಗೆ ಬೇಲ್]
ಆಕೆ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಅದು ಮುಗಿದ ಕೂಡಲೇ ಮನೆಗೆ ಹಿಂತಿರುಗಿದ್ದಾರೆ. ರಾಜತಿ ಅಮ್ಮಾಳ್ ಅವರು ಕಳ್ಳನ ಬಗ್ಗೆ ತಕ್ಷಣವೇ ಸುಳಿವು ಕೊಟ್ಟಿದ್ದರಿಂದ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮನೆಯೊಳಗೆ ಹೊಕ್ಕಿದ ಕಳ್ಳ ಹಣ ನೀಡುವಂತೆ ರಾಜತಿ ಅಮ್ಮಾಳ್ ಅವರನ್ನು ಕೇಳಿದ್ದಾನೆ.
ಕೋಣೆಯಲ್ಲಿ ಹಣವಿದೆ. ಅಲ್ಲಿಂದ ತರಬೇಕು ಎಂದು ಹೇಳಿ ಹೊರಬಂದವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಅವನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದಿದ್ದು ಆಟಿಕೆ ಪಿಸ್ತೂಲು ಎಂದು ಗೊತ್ತಾಗಿದೆ.