ಶಶಿಕಲಾ ಕಿತ್ತೊಗೆದರೆ ಮಾತ್ರ ಪಕ್ಷಕ್ಕೆ ಬರ್ತೇನೆ - ಪನ್ನೀರ್ ಸೆಲ್ವಂ
ಚೆನ್ನೈನಲ್ಲಿ ಮಾತನಾಡಿದ ಪನ್ನೀರ್ ಸೆಲ್ವಂ, ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ತಾವಿಟ್ಟಿರುವ ಯಾವುದೇ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೆನ್ನೈ, ಏಪ್ರಿಲ್ 18: ಎಐಎಡಿಎಂಕೆ ಅಮ್ಮ ಬಣದ ಜತೆ, ಪನ್ನೀರ್ ಸೆಲ್ವಂ ಬಣದ ವಿಲೀನ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ.
ಚೆನ್ನೈನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್ ಸೆಲ್ವಂ, "ವಿಲೀನಕ್ಕೆ ಸಂಬಂಧಿಸಿದಂತೆ ಮಾತುಕತೆ ಪ್ರಗತಿಯಲ್ಲಿದೆ. ಆದರೆ ಮಾತುಕತೆ ನಡೆಸಲು ರಚಿಸಲಾಗಿರುವ ಸಮಿತಿಯ ಮುಂದೆ ತಾವಿಟ್ಟಿರುವ ಯಾವುದೇ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ," ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.[ತಮಿಳುನಾಡಿನಲ್ಲಿ ಮತ್ತೊಂದು ಹೈಡ್ರಾಮ, ಎಐಎಡಿಎಂಕೆ ಬಣಗಳ ವಿಲೀನ?]
"ಜಯಲಲಿತಾ ಸಾವಿನ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂಬುದು ನಮ್ಮ ಮೊದಲ ಬೇಡಿಕೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನೇಮಕವಾಗಿರುವುದು ಕಾನೂನು ಬಾಹಿರ. ನಾವಿದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೌಟುಂಬಿಕ ರಾಜಕಾರಣವನ್ನು ಪಕ್ಷದಲ್ಲಿ ಒಪ್ಪಿಕೊಳ್ಳಲಾಗದು. ಟಿಟಿವಿ ದಿನಕರನ್ ಪಕ್ಷದ ಇಮೇಜ್ ಗೆ ದಕ್ಕೆ ತರುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ," ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.[ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಮೇಲೆ ಎಫ್ಐಆರ್]
ಮಾತ್ರವಲ್ಲ, 'ಪಕ್ಷವನ್ನು ಒಂದೇ ಕುಟುಂಬ ನಿಯಂತ್ರಿಸಬಾರದು. ಶಶಿಕಲಾ ಪಕ್ಷದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ,' ಎಂದು ಹೇಳಿರುವ ಪನ್ನೀರ್ ಸೆಲ್ವಂ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ತಾವು ಮುಂದೆಯೂ ದಿನಕರನ್ ಮತ್ತು ಶಶಿಕಲಾರನ್ನು ವಿರೋಧಿಸಲಿದ್ದೇವೆ ಎಂಬುದನ್ನು ಪನ್ನೀರ್ ಸೆಲ್ವಂ ಸೂಚಿಸಿದ್ದಾರೆ. ಮನ್ನಾರ್ ಗುಡಿ ಕುಟುಂಬವನ್ನು ಪಕ್ಷದಿಂದ ಹೊರದಬ್ಬಿದರೆ ಮಾತ್ರ ತಾವು ಪಕ್ಷಕ್ಕೆ ಬರುವುದಾಗಿ ಅವರು ತಮ್ಮ ಸ್ಪಷ್ಟ ನಿರ್ಧಾರವನ್ನು ಹೊರಹಾಕಿದ್ದಾರೆ. (ಒನ್ ಇಂಡಿಯಾ ಸುದ್ದಿ)