ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?
ಎಐಎಡಿಎಂಕೆ ಪಕ್ಷಕ್ಕೆ ಮಾತ್ರವಲ್ಲ ಇಡೀ ತಮಿಳುನಾಡಿಗೆ ಶಶಿಕಲಾ ಅವರು ಅನಭಷಿಕ್ತ ಸಾಮ್ರಾಜ್ಞಿಯಾಗುವ ಎಲ್ಲ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಜಯಾ ಬದುಕಿದ್ದಾಗ ಅವರ ಸೆರಗಿನಂತಿದ್ದ ಶಶಿಕಲಾ, ಈಗ ಅವರನ್ನೇ ಮೀರಿಸುವಂತೆ ಬೆಳೆಯುತ್ತಿದ್ದಾರೆ.
ಚೆನ್ನೈ, ಡಿಸೆಂಬರ್ 24 : ಮರೀನಾ ಬೀಚ್ ನಲ್ಲಿ ಮಣ್ಣಾಗಿರುವ ಜಯಲಲಿತಾ ಅವರ ಶವ ಮಲಗಿದಲ್ಲೇ ಕನಲುವಂಥ, ಮಗ್ಗಲು ಬದಲಿಸುವಂಥ, ಬೆಚ್ಚಿಬೀಳುವಂಥ ಚಟುವಟಿಕೆಗಳು ಚೆನ್ನೈನ ಪೋಯೆಸ್ ಗಾರ್ಡನ್ ನಲ್ಲಿ ನಡೆಯುತ್ತಿವೆ.
ಜಯಲಲಿತಾ ಅವರ ಕುತೂಹಲದ ನಿಧನದ ನಂತರ ಅವರ ನಿವಾಸ ಪೋಯೆಸ್ ಗಾರ್ಡನ್ ನಲ್ಲಿ ನೀರವ ಸ್ಮಶಾನ ಮೌನ ಆವರಿಸಿದೆ ಎಂದುಕೊಂಡವರಿಗೆ ಅಲ್ಲಿ ನಡೆಯುತ್ತಿರುವ ಕಲರವ ಕೇಳಿ ಅಚ್ಚರಿ ಮೂಡುತ್ತದೆ. ಜಯಲಲಿತಾ ಅವರ ನೆರಳಿನಿಂದ ಹೊರಬಂದಿರುವ ಶಶಿಕಲಾ ಅವರು ಹೊಸ ಮಾಸ್ಟರ್ ಆಗಿ, ಕಿಂಗ್ ಮೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ.
ಎಐಎಡಿಎಂಕೆ ಪಕ್ಷಕ್ಕೆ ಮಾತ್ರವಲ್ಲ ಇಡೀ ತಮಿಳುನಾಡು ರಾಜ್ಯಕ್ಕೆ ಶಶಿಕಲಾ ನಟರಾಜನ್ ಅವರು ಅನಭಷಿಕ್ತ ಸಾಮ್ರಾಜ್ಞಿಯಾಗುವ ಎಲ್ಲ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಜಯಾ ಬದುಕಿದ್ದಾಗ ಅವರ ಸೆರಗಿನಂತಿದ್ದ ಶಶಿಕಲಾ, ಈಗ ಅವರನ್ನೇ ಮೀರಿಸುವಂತೆ ಬೆಳೆಯುತ್ತಿದ್ದಾರೆ. [ಜಯಾ ಉಯಿಲಿನಲ್ಲೇನಿದೆ, ಪೋಯೆಸ್ ಗಾರ್ಡನ್ ಯಾರಿಗೆ?]
ಇದೆಲ್ಲಾ ಆಗುತ್ತಿರುವುದು ಹೇಗೆ?
ರಾಜಕೀಯ ಚದುರಂಗದಾಟದ ದಾಳಗಳನ್ನು ಹೇಗೆ ಉರುಳಿಸುವುದೆಂದು ಜಯಲಲಿತಾಗಿಂತಲೂ ಚೆನ್ನಾಗಿ ಅರಿತಿರುವ ಶಶಿಕಲಾ ಅತ್ಯಂತ ವೃತ್ತಿಪರತೆಯಿಂದಲೇ ಉರುಳಿಸುತ್ತಿದ್ದಾರೆ. ಶಶಿಕಲಾ ಅವರನ್ನು ಬಿಟ್ಟರೆ ಮತ್ತಾರೂ ಇಲ್ಲ ಎಂಬಂಥ ಸನ್ನಿವೇಶ ಸೃಷ್ಟಿಸಿಬಿಟ್ಟರೆ ಸಾಕು ಎಲ್ಲರೂ ತಮಗೇ ಡೊಗ್ಗು ಸಲಾಂ ಹೊಡೆಯುತ್ತಾರೆ ಎಂಬುದನ್ನು ಶಶಿಕಲಾ ಚೆನ್ನಾಗಿ ಅರಿತಿದ್ದಾರೆ. ಅಂತೆಯೇ ನಡೆದುಕೊಳ್ಳುತ್ತಿದ್ದಾರೆ. ಶಾಸಕರೂ ಹಾಗೆಯೇ ಸಲಾಂ ಬಾರಿಸುತ್ತಿದ್ದಾರೆ. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ]
ತಮ್ಮ ಸುಪರ್ದಿಗೆ ತೆಗೆದುಕೊಂಡ ಚಿನ್ನಮ್ಮ
ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗ ಕ್ಷಣದಿಂದಲೇ ಶಶಿಕಲಾ ಎಲ್ಲವನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಎಪ್ಪತ್ತು ಚಿಲ್ರೆ ದಿನಗಳ ಕಾಲ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಇದ್ದಾಗಲೇ ಶಶಿಕಲಾ ಪಕ್ಷದ ಪ್ರತಿಯೊಂದು ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಜಯಾರಂತೆ ಕಾಣುವ ಅವರ ತಂಗಿಯ ಮಗಳನ್ನು ಕೂಡ ಈ ಪರಿಧಿಯಿಂದ ದೂರವಿಟ್ಟು ಶಶಿಕಲಾ ಜಾಣ್ಮೆ ಮೆರೆದಿದ್ದಾರೆ. [ಜಯಲಲಿತಾ ಮಗಳ ಫೋಟೋ ಎಲ್ಲಾ ಫೇಕ್ ನಂಬಬೇಡಿ!]
ಮನ್ನಾರ್ ಗುಡಿ ಗ್ಯಾಂಗ್ ಹೊರಗಿಟ್ಟ ಶಶಿಕಲಾ
'ಅಮ್ಮ'ನ ಅವಸಾನದಿಂದ ಉಂಟಾದ ನಿರ್ವಾತವನ್ನು ತಕ್ಷಣದಿಂದಲೇ ತುಂಬಿದ 'ಚಿನ್ನಮ್ಮ', ತನ್ನ ಗಂಡ ನಟರಾಜನ್ ಸೇರಿದಂತೆ 'ಮನ್ನಾರ್ ಗುಡಿ ಗ್ಯಾಂಗ್' ಎಂದೇ ಕುಖ್ಯಾತಿ ಪಡೆದಿರುವ ತಂಡವನ್ನು ದೂರವಿಟ್ಟರು, ಪಕ್ಷದ ಕಾರ್ಯಕರ್ತರ ಒಲವು ಮತ್ತು ವಿಶ್ವಾಸವನ್ನು ಮತ್ತೆ ಪಡೆದುಕೊಂಡರು ಶಶಿಕಲಾ. ಕೆಲವರು ಈ ಬಲೆಯಲ್ಲಿ ತಾವಾಗಿಯೇ ಬಿದ್ದರೆ, ಉಳಿದವರಿಗೆ ಬಲೆಯಲ್ಲಿ ಸಿಲುಕಿಕೊಳ್ಳದೆ ಅನ್ಯ ಮಾರ್ಗವಿರಲಿಲ್ಲ. [ಜಯಲಲಿತಾ ಆತ್ಮ ಅಂತರ್ಪಿಶಾಚಿಯಾಗಿ ಅಲೆದಾಡತ್ತೆ!]
ಜಯಾ ಟಿವಿಯಲ್ಲೂ ಶಶಿ ಜೈಜೈಕಾರ
ಇದು ಯಾವ ಮಟ್ಟಿಗೆ ಆವರಿಸಿಕೊಂಡಿದೆಯೆಂದರೆ, ಜಯಾ ಒಡೆತನದ ಟಿವಿ ಚಾನಲ್ ಕೂಡ ಶಶಿಕಲಾ ಜೈಜೈಕಾರದಲ್ಲಿ ತೊಡಗಿದೆ. ಅವರ ಸಂದರ್ಶನ, ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುತ್ತಿದೆ. ಮುಂದೆ, ಅವರೇ ಎಲ್ಲ ಒಡೆತನವನ್ನು ತೆಗೆದುಕೊಳ್ಳಬೇಕು ಎಂಬಂತಹ ಕೂಗು ಟಿವಿಯಲ್ಲಿ ಮೊಳಗುತ್ತಿದೆ. ಪಕ್ಷದ ಸೋಷಿಯಲ್ ಮೀಡಿಯಾವನ್ನೂ ಅವರೇ ಆವರಿಸಿಕೊಂಡಿದ್ದಾರೆ.
ಶಶಿಕಲಾ ಮುಂದೆ ಹಿರಿಯ ಪತ್ರಕರ್ತರ ಪರೇಡ್
ಜಯಲಲಿತಾ ಅವರ ಸರಕಾರ ಹೇರಿದ್ದ ಮಾನನಷ್ಟ ಮೊಕದ್ದಮೆಯಿಂದ ಬಳಲಿ ಬೆಂಡಾಗಿದ್ದ ಹಿರಿಯ ಪತ್ರಕರ್ತರ ದಂಡು, ಜಯಲಲಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಶಶಿಕಲಾ ಅವರ ಮುಂದೆ ಪರೇಡ್ ಮಾಡಿತು. ಉಪಕುಲಪತಿಗಳು, ಶಿಕ್ಷಣತಜ್ಞರು ಶಶಿಕಲಾ ಮುಂದೆ ಕೈಮುಗಿದು ನಿಂತಿದ್ದು ಭಾರೀ ಟೀಕೆಗೆ ಗುರಿಯಾದವು.
ಉಘೇಉಘೇ ಅಂದ ತಮಿಳು ಚಿತ್ರರಂಗ
ಇದೆಲ್ಲಕ್ಕಿಂತಲೂ ನಾಚಿಕೆಗೇಡಿನ ಸಂಗತಿಯೆಂದರೆ, ತಮಿಳು ಚಿತ್ರರಂಗವೂ ಚಿನ್ನಮ್ಮನಿಗೆ ಉಘೇ ಉಘೇ ಅಂದಿದ್ದು. ನೀವೇ ನಮ್ಮೆಲ್ಲರ ಸರ್ವಸ್ವ, ನೀವೇ ಪಕ್ಷವನ್ನು, ರಾಜ್ಯವನ್ನು ಮುನ್ನಡೆಸಬೇಕು ಎಂಬಷ್ಟರ ಮಟ್ಟಿಗೆ ತಮಿಳು ಚಿತ್ರರಂಗದ ಘಟಾನುಘಟಿಗಳು ಶಶಿಕಲಾ ಅವರ ದುಂಬಾಲು ಬಿದ್ದರು. ಇಷ್ಟು ವರ್ಷ ಚಿತ್ರರಂಗದಲ್ಲಿ ಆಕೆಯ ಹೆಸರೇ ಸುಳಿದಾಡುತ್ತಿರಲಿಲ್ಲ. [ಜಯಲಲಿತಾ 'ಕೊಹಿನೂರ್ ವಜ್ರ': ರಜನಿಕಾಂತ್]
ಶಶಿಕಲಾ ಅವರ ಏರುತ್ತಿರುವ ಜನಪ್ರಿಯತೆಗೆ ಸಾಕ್ಷಿ
ಆಕೆಯನ್ನು ಭೇಟಿಯಾಗಲು ಬಂದವರು ನಾಟಕೀಯವಾಗಿ ಗೋಳೋ ಅಂದು ಅಳುತ್ತ, ನೀವೇ ನಮ್ಮನ್ನು ಸಲುಹಬೇಕೆಂದು ಬೇಡಿಕೊಳ್ಳುತ್ತಿರುವುದು ಶಶಿಕಲಾ ಅವರ ಏರುತ್ತಿರುವ ಜನಪ್ರಿಯತೆಗೆ ಸಾಕ್ಷಿ. ಶಶಿಕಲಾ ಕೂಡ, ನಾನಿದ್ದೇನೆ, ನೀವೇನೂ ಚಿಂತೆ ಮಾಡಬೇಡಿ ಎಂಬಂತಹ ಪೋಸು ಕೊಡುತ್ತಿದ್ದಾರೆ. [ಜಯಾ ಹುಚ್ಚು ಅಭಿಮಾನದ ಹತ್ತೆಂಟು ಮುಖಗಳು!]
ಪನ್ನೀರ್ ಕೂಡ ಹೋಳು ಉಪ್ಪಿನಕಾಯಿ
ಪ್ರಶಸ್ತಿ ವಿತರಣೆಯಲ್ಲಿ, ಪಕ್ಷದ ಬ್ಯಾನರುಗಳಲ್ಲಿ ಶಶಿಕಲಾ ಅವರ ಬೃಹದಾಕಾರವಾದ ಪೋಸ್ಟರುಗಳು ರಾರಾಜಿಸುತ್ತಿವೆ. ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಕರೆದ ಮೊದಲ ಕ್ಯಾಬಿನೆಟ್ ಸಭೆಗಿಂತ ಮೊದಲೇ ಶಶಿಕಲಾ ಅವರು ಪಕ್ಷದ ಸಭೆಯನ್ನು ಕರೆದು ಆಗಬೇಕಾದುದನ್ನು ವಿವರಿಸಿದ್ದರು. ಶಶಿಕಲಾ ಮುಂದೆ ಪನ್ನೀರ್ ಕೂಡ ಹೋಳು ಉಪ್ಪಿನಕಾಯಿಯಂತೆ ಕಂಗೊಳಿಸುತ್ತಿದ್ದಾರೆ. [ಅಂತೂ ಧೈರ್ಯ ಮಾಡಿ ಜಯಾ ಕುರ್ಚಿಯಲ್ಲಿ ಕುಳಿತ ಪನ್ನೀರ್!]