ಜಯಲಲಿತಾ ಸಾವು: ತನಿಖೆಗಾಗಿ ಪ್ರಧಾನಿಗೆ ನಟಿ ಗೌತಮಿ ಪತ್ರ
ಚೆನ್ನೈ, ಡಿಸೆಂಬರ್ 9: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಗೂಢ ಕೊನೆ ದಿನಗಳು ಮತ್ತು ಸಾವಿನ ಸತ್ಯಾಂಶ ಬಹಿರಂಗವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಚಿತ್ರನಟಿ ಗೌತಮಿ ಪತ್ರ ಬರೆದಿದ್ದಾರೆ.
ಜಯಲಲಿತಾ ಅವರ ಕೊನೆಯದಿನಗಳು ಮತ್ತು ಸಾವಿನ ಸುತ್ತ ಅನೇಕ ಅನುಮಾನಗಳು, ಸಂಶಯಗಳು ನಾಗರಿಕ ವಲಯದಲ್ಲಿ ಹರಿದಾಡತ್ತಿವೆ. ಆಸ್ಪತ್ರೆಯ ವೈದ್ಯರು ಕೆಲವೊಮ್ಮೆ ಹುಷಾರಾಗಿದ್ದಾರೆ ಎಂದು, ಕೆಲವೊಮ್ಮೆ ಸ್ಥಿತಿ ವಿಷಮವಾಗಿದೆ ಎಂದು ಬಿಂಬಿಸುತ್ತಿದ್ದರು. ಸಾವಿನ ಸುದ್ದಿ ಹೇಳುವಾಗ ಆದ ಗೊಂದಲ ಎಲ್ಲದರ ಬಗ್ಗೆ ಗೌತಮಿಯವರು ಪತ್ರದಲ್ಲಿ ವಿವರಿಸಿದ್ದಾರೆ.[ಜಯಾ ಹುಚ್ಚು ಅಭಿಮಾನದ ಹತ್ತೆಂಟು ಮುಖಗಳು]
ಜಯಲಲಿತಾ ಅವರು ಅಸ್ವಸ್ಥಗೊಂಡು ಬಹಳ ದಿನಗಳಾದರೂ ಏಕೆ ಗಣ್ಯರಿಗೆ, ಅಭಿಮಾನಿಗಳಿಗೆ ಅವರೊಂದಿಗೆ ಮಾತನಾಡಲು ಬಿಡಲಿಲ್ಲ? ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ ಚಿಕಿತ್ಸೆ ವಿಧಿವಿಧಾನಗಳು ರಹಸ್ಯವಾಗಿತ್ತು ಏಕೆ? ಕೆಲವು ದಿನಗಳ ಹಿಂದೆ, ಕೆಲವೇ ದಿನಗಳಲ್ಲಿ ಅವರು ಮನೆಗೆ ತೆರಳಲಿದ್ದಾರೆ ಎಂದರು ಮತ್ತೆ ಹೃದಯಾಘಾತವಾಗಿದೆ ಎಂದು ತಿಳಿಸಿದರು. ಇದೇ ಸಾವಿನಲ್ಲಾದ ಗೊಂದಲಕ್ಕೆ ಕಾರಣವಾಯಿತು. ಖಚಿತ ತನಿಖೆಯಾದರೆ ಮಾತ್ರ ಎಲ್ಲ ವಿಷಯಗಳು ಜನರಿಗೆ ತಿಳಿಯಲಿವೆ. ಹೀಗಾಗಿ ತನಿಖೆ ನಡೆಸಬೇಕೆಂದು ಪ್ರಧಾನಿಯವರಿಗೆ ನಟಿ ಗೌತಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಜಯಲಲಿತಾ ಅವರು ಅಪೋಲೋ ಅಸ್ಪತ್ರೆಗೆ ದಾಖಲಾಗಿ 72 ದಿನಗಳಿದ್ದರು. ಅಂದರೆ ಸುಮಾರು ಎರಡೂವರೆ ತಿಂಗಳು. ಪಕ್ಷದ ಸದಸ್ಯರೊಂದಿಗೆ, ಆಪ್ತರೊಂದಿಗೆ ಏನು ಮಾತನಾಡಿದ್ದರು? ಚುನಾವಣಾ ಸಂದರ್ಭದಲ್ಲಿ ಅವರು ಅರ್ಜಿಗಳಿಗೆ ಹೆಬ್ಬೆಟ್ಟನ್ನು ಒತ್ತಿದ್ದು ಯಾಕೆ? ಚಿಕಿತ್ಸೆ ಸಮಯದ ಹಲವಾರು ಪ್ರಶ್ನೆಗಳಿಗೆ ಗೌತಮಿಯವರಂತೆ ತಮಿಳುನಾಡಿನ ನಾಗರಿಕರ ಮನದಲ್ಲಿ ಉತ್ತರಕ್ಕಾಗಿ ಕಾತುರತೆಯಿದೆ. ತನಿಖೆ ನಡೆದರೆ ಸತ್ಯ ಹೊರಬೀಳಲಿದೆ.