ವಿಧಾನಸಭೆಯಲ್ಲಿ ಚಿನ್ನಮ್ಮ-ಒಪಿಎಸ್ ಏಕಕಾಲಕ್ಕೆ ಸಂಖ್ಯಾ ಬಲ ಪ್ರದರ್ಶನ
ಇಬ್ಬರಿಗೂ ಅಂದರೆ ಶಶಿಕಲಾ ನಟರಾಜನ್ ಹಾಗೂ ಪನ್ನೀರ್ ಸೆಲ್ವಂಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಏಕಕಾಲಕ್ಕೆ ಅವಕಾಶ ದೊರೆಯಲಿದೆ. ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಈ ಬಗ್ಗೆ ಕೇಂದ್ರದಿಂದಲೇ ಸೂಚನೆ ಬಂದಿದೆ
ನವದೆಹಲಿ, ಫೆಬ್ರವರಿ 13: ಶಶಿಕಲಾ ನಟರಾಜನ್ ಹಾಗೂ ಒ.ಪನ್ನೀರ್ ಸೆಲ್ವಂ ಮಧ್ಯೆ ತಮಿಳುನಾಡು ವಿಧಾನಸಭೆಯಲ್ಲಿ ಏಕಕಾಲಕ್ಕೆ ಬಲಾಬಲ ಪ್ರದರ್ಶನ ನಡೆಯಲಿ ಎಂದು ಕೇಂದ್ರ ಸರಕಾರವು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸಲಹೆ ನೀಡಿದೆ. ಅಟಾರ್ನಿ ಜನರಲ್ ಆಫ್ ಇಂಡಿಯಾ ಮುಕುಲ್ ರೋಹ್ಟಗಿ ಈ ಸಲಹೆಯನ್ನು ನೀಡಿದ್ದಾರೆ.
ಶಶಿಕಲಾ ತಮಗೆ ಪಕ್ಷದ ಸದಸ್ಯರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು. ಅವರಿಗೆ ಎದುರಾಗಿ ಒ.ಪನ್ನೀರ್ ಸೆಲ್ವಂ ಕೂಡ ಅಖಾಡಕ್ಕೆ ಇಳಿದಿದ್ದರಿಂದ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಒಂದು ವಾರದೊಳಗೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯಿರಿ ಎಂದು ಕೂಡ ಸೂಚಿಸಲಾಗಿದೆ.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]
ಈ ಹಿಂದೆ ಅಂದರೆ 1990ರ ದಶಕದಲ್ಲಿ ಉತ್ತರಪ್ರದೇಶದಲ್ಲಿ ಜಗದಾಂಬಿಕಾ ಪಾಲ್ ಹಾಗೂ ಕಲ್ಯಾಣ್ ಸಿಂಗ್ ಅವರಿಗೆ ಇದೇ ರೀತಿ ಏಕಕಾಲಕ್ಕೆ ತಮ್ಮ ಬಹುಮತ ಸಾಬಿತು ಪಡಿಸಲು ಅವಕಾಶ ನೀಡಲಾಗಿತ್ತು. ಅದೇ ಸೂತ್ರವನ್ನು ಈಗ ತಮಿಳುನಾಡಿಗೆ ಅನ್ವಯ ಮಾಡುವಂತೆ ಹೇಳಲಾಗಿದೆ.
ಕಳೆದ ಬಾರಿ ಈ ರೀತಿಯ ಸಂಯುಕ್ತ ಬಹುಮತ ಸಾಬೀತು ಉತ್ತರಪ್ರದೇಶದಲ್ಲಿ 1998ರಲ್ಲಿ ನಡೆದಿತ್ತು. ಅಲ್ಲಿನ ರಾಜ್ಯಪಾಲರಾದ ರೋಮೇಶ್ ಬಂಡಾರಿ ಅವರು ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ವಜಾ ಮಾಡಿದ್ದರು. ಲೋಕತಾಂತ್ರಿಕ್ ಕಾಂಗ್ರೆಸ್ ನ ಜಗದಾಂಬಿಕಾ ಪಾಲ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು.[ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]
ವಿಧಾನಸಭೆಯಲ್ಲಿ ಕಲ್ಯಾಣ್ ಸಿಂಗ್ ಅವರು 29 ಮತಗಳ ಅಂತರದಿಂದ ಜಯ ಗಳಿಸಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಈ ರೀತಿ ಬಲಾಬಲ ಸಾಬೀತಿಗೆ ವಿಧಾನಸಭೆ ಸಾಕ್ಷಿಯಾಗಿತ್ತು. ಭಾರತದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಅದೇ ಮೊದಲ ಬಾರಿಗೆ ಆ ರೀತಿಯ ಬಲ ಪರೀಕ್ಷೆ ನಡೆದಿತ್ತು.
ಪ್ರತಿ ಸದಸ್ಯರು ತಮ್ಮ ಬೆಂಬಲವನ್ನು ಯಾರಿಗೆ ಅಂತ ಮತದ ಮೂಲಕ ತಿಳಿಸಬೇಕು. ಎಲ್ಲರೂ ಮತ ಪತ್ರಕ್ಕೆ ಸಹಿ ಹಾಕಬೇಕು. ಉತ್ತರ ಪ್ರದೇಶದಲ್ಲಿ 422 ಮತ ಚಲಾವಣೆಯಾಗಿದ್ದವು. ಒಂದು ಮತವನ್ನು ಅಸಿಂಧು ಅಂತ ಪರಿಗಣಿಸಲಾಯಿತು. ಏಕೆಂದರೆ, ಮತಪತ್ರಕ್ಕೆ ಸಹಿ ಹಾಕುವ ಬದಲಿಗೆ ಕಲ್ಯಾಣ್ ಸಿಂಗ್ ಹೆಸರಿನ ಮುಂದೆ ಮಾರ್ಕ್ ಹಾಕಲಾಗಿತ್ತು.