ಬಿರುಗಾಳಿಗೆ ಸಿಲುಕಿರುವ ತಮಿಳ್ನಾಡಲ್ಲಿ ಹೋಟೆಲ್ ರಾಜಕೀಯ
ಚೆನ್ನೈ, ಫೆಬ್ರವರಿ 08 : ಅಧಿಕಾರದ ಕಚ್ಚಾಟದಿಂದ ಬಿರುಗಾಳಿಗೆ ಸಿಲುಕಿರುವ ತಮಿಳುನಾಡಿನ ರಾಜಕೀಯದಲ್ಲಿ ಹೋಟೆಲ್ ರಾಜಕಾರಣ ಆರಂಭವಾಗಿದೆ. ಜಯಲಲಿತಾ ಕಾಲದಲ್ಲಿ ಜೇನುಗೂಡಿನಂತಿದ್ದ ಎಐಎಡಿಎಂಕೆ ಪಕ್ಷ ಕಲ್ಲಿನ ದಾಳಿಗೆ ತುತ್ತಾದಂತಿದೆ.
ವಿನಮ್ರ ನಾಯಕನಂತಿದ್ದ ಓ ಪನ್ನೀರ್ ಸೆಲ್ವಂ ಇದ್ದಕ್ಕಿದ್ದಂತೆ ರಿವರ್ಸ್ ಹೊಡೆದಿರುವುದರಿಂದ ಕಂಗೆಟ್ಟಿರುವ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು, ಕುದುರೆ ವ್ಯಾಪಾರ ತಪ್ಪಿಸಲೆಂದು ತಮ್ಮ ಬೆಂಬಲಿಗರನ್ನೆಲ್ಲ ಗುಂಪು ಕಟ್ಟಿಕೊಂಡು ಹೋಟೆಲುಗಳಿಗೆ ಹೊರಟಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಶಶಿಕಲಾ ಅವರದೇ ಮಾಲಿಕತ್ವದ ರೇನ್ ಟ್ರೀ ಹೋಟೆಲಿಗೆ ಅವರ ಬೆಂಬಲಿಗರು ಹೊರಟಿದ್ದು, ಬಸ್ಸುಗಳಲ್ಲಿ ಜಯಲಲಿತಾ ಮತ್ತು ಎಂಜಿ ರಾಮಚಂದ್ರನ್ ಅವರು ಚಲನಚಿತ್ರಗಳನ್ನು ನೋಡಿಕೊಂಡು ಮಜಾ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. [ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]
ಹೀಗೆ ಮಾಡಲು ಮೂಲ ಕಾರಣವೇನೆಂದರೆ, ರೆಬೆಲ್ ಸ್ಟಾರ್ ಓ ಪನ್ನೀರ್ ಸೆಲ್ವಂ ಅವರು ತಮ್ಮ ಬಳಿಯೂ ಸಾಕಷ್ಟು ಶಾಸಕರಿದ್ದು, ರಾಜ್ಯಪಾಲರು ಚೆನ್ನೈಗೆ ಮರಳಿದ ಕೂಡಲೆ ತಮ್ಮ ಶಕ್ತಿ ಪ್ರದರ್ಶನ ಮಾಡುವುದಾಗಿ ಶಶಿಕಲಾಗೆ ಚಾಲೆಂಜ್ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಶಶಿಕಲಾ ಬಣ ಸಿದ್ಧವಿಲ್ಲ. ಶಶಿಕಲಾ ಬಣದಲ್ಲಿ ಸಾಕಷ್ಟು ಎಂಎಲ್ಎಗಳು ಕಂಡುಬಂದರೂ, ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಸೂಚಿಸಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು ನೋಡಿದರೆ, ಪನ್ನೀರ್ ಕೂಡ ಕಡಿಮೆ ಆಸಾಮಿಯೇನಲ್ಲ ಎಂಬುದು ಶಶಿಕಲಾಗೆ ಮನದಟ್ಟಾಗಿದೆ.
ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಅವರು ಚೆನ್ನೈಗೆ ಮರಳಲು ತಡ ಮಾಡುತ್ತಿರುವುದು ಮತ್ತು ಪನ್ನೀರ್ ತಿರುಗೇಟು ನೀಡುವ ಮುನ್ನ ಜಯಲಲಿತಾ ಸಮಾಧಿಯ ಮುಂದೆ ಕಣ್ಣೀರು ಸುರಿಸಿದ ನಂತರ ಅವರ ಪರವೂ ಅನುಕಂಪ ಮೂಡಿರುವುದು ಶಶಿಕಲಾಗೆ ನುಂಗಲಾರದ ತುತ್ತಾಗಿದೆ. [ತಿರುಗಿ ಬಿದ್ದ ಪನ್ನೀರ್, ತ.ನಾಡು ರಾಜಕೀಯದ 8 ಸಾಧ್ಯತೆ]
ಈ ನಡುವೆ, ಪನ್ನೀರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದ ಎಐಎಡಿಎಂಕೆ ಪಕ್ಷದ ಐಟಿ ಘಟಕದ ಕಾರ್ಯದರ್ಶಿ ರಾಮಚಂದ್ರನ್ ಅವರನ್ನ ಶಶಿಕಲಾ ಕಿತ್ತು ಬಿಸಾಡಿದ್ದಾರೆ. ಈ ಘಟನೆಯ ನಂತರ ಇಡೀ ಐಟಿ ಘಟಕದ ಸದಸ್ಯರು ಶಶಿಕಲಾ ವಿರುದ್ಧ ತಿರುಗಿಬಿದ್ದು, ಸೋಷಿಯಲ್ ಮೀಡಿಯಾದಲ್ಲಿ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
234 ಸದಸ್ಯರಿರುವ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ 135 ಶಾಸಕರ ಬಲ ಹೊಂದಿದ್ದರೆ, ಡಿಎಂಕೆ 89 ಸದಸ್ಯರು, ಕಾಂಗ್ರೆಸ್ 8 ಮತ್ತು ಐಯುಎಂಎಲ್ ಪಕ್ಷ 1 ಸೀಟನ್ನು ಹೊಂದಿದೆ. ಭಾರತೀಯ ಜನತಾ ಪಕ್ಷ ಒಂದೇ ಒಂದು ಸೀಟನ್ನು ಗೆಲ್ಲಲು ಯಶಸ್ವಿಯಾಗಿಲ್ಲ. [ಶಶಿಕಲಾ ನಟರಾಜನ್ ಮತ್ತು ಮನ್ನಾರ್ ಗುಡಿ ಗ್ಯಾಂಗ್]