25 ಕೋಟಿ ದಂಡ ಹಾಕಿಸಿಕೊಂಡ ದಿನಕರನ್ AIADMK ಆರ್ ಕೆ ನಗರ್ ಅಭ್ಯರ್ಥಿ!
ಜಯಲಲಿತಾ ನಿಧನದಿಂದ ತೆರವಾದ ಆರ್ ಕೆ ನಗರ್ ವಿಧಾನಸಭಾ ಕ್ಷೇತ್ರಕ್ಕೆ ಟಿಟಿವಿ ದಿನಕರನ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಆತ ಫೆರಾ ಕಾಯ್ದೆ ಅಡಿ ಆರೋಪಿ. ಹಾಗಿದ್ದರೆ ಮುಂದಿನ ನಡೆ ಏನಾಗಬಹುದು?
ಚೆನ್ನೈ, ಮಾರ್ಚ್ 16: ಜಯಲಲಿತಾ ನಿಧನದಿಂದ ತೆರವಾದ ಆರ್ ಕೆ ನಗರ್ ವಿಧಾನಸಭೆ ಕ್ಷೇತ್ರದಿಂದ ಎಐಎಡಿಎಂಕೆ ಅಭ್ಯರ್ಥಿಯಾಗಿ ಶಶಿಕಲಾ ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಈ ದಿನಕರನ್ ಇತ್ತೀಚೆಗಷ್ಟೇ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ 25 ಕೋಟಿ ರುಪಾಯಿ ಜುಲ್ಮಾನೆ ಹಾಕಿಸಿಕೊಂಡವರು.
ಮದ್ರಾಸ್ ಹೈಕೋರ್ಟ್ ಆದೇಶದ ಪ್ರಕಾರ ಇದು ಶಿಕ್ಷೆಗೆ ಸಮಾನವಾದದ್ದು. ಭಾರತದಿಂದ ಹೊರಗೆ ಅಂದರೆ ವಿದೇಶದ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಹಣ ಇರಿಸಿಕೊಂಡಿದ್ದಕ್ಕೆ ದಂಡ ವಿಧಿಸಲಾಗಿತ್ತು. ಮೊದಲಿಗೆ 31 ಕೋಟಿ ರುಪಾಯಿ ದಂಡ ಹಾಕಲಾಗಿತ್ತು. ಆ ನಂತರ ಮೇಲ್ಮನವಿ ಸಲ್ಲಿಸಿದ್ದರಿಂದ 28 ಕೋಟಿಗೆ ಇಳಿಸಲಾಯಿತು.[ಇದ್ಯಾರ್ರೀ ಜಯಲಲಿತಾರ ಹೊಸ ಮಗ, ಆಕೆ ಎಲ್ಲ ಆಸ್ತಿಯ ವಾರಸುದಾರ!]
ದಂಡ ಮೊತ್ತ ಕಟ್ಟಲೇಬೇಕು ಎಂದು ಮದ್ರಾಸ್ ಹೈ ಕೋರ್ಟ್ ಖಾತ್ರಿ ಪಡಿಸಿದರೆ ಅದರರ್ಥ ಆರೋಪ ಸಾಬೀತಾಯಿತು ಅಂತಲ್ಲವೆ? ಆಗ ಜನಪ್ರತಿನಿಧಿಗಳ ಕಾಯ್ದೆ ದಿನಕರನ್ ಗೆ ಅನ್ವಯಿಸುತ್ತದೆಯೆ? ಆ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಗೆ ಶಿಕ್ಷೆಯಾದರೆ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಆದರೆ ಈ ಪ್ರಕರಣದಲ್ಲಿ ಪ್ರಶ್ನೆ ಏನೆಂದರೆ 'ಫೆರಾ' ಕಾಯ್ದೆ ಅಡಿ ಶಿಕ್ಷೆಯಾಗಿರುವುದು ಜನಪ್ರತಿನಿಧಿಗಳ ಕಾಯ್ದೆಗೆ ಅನ್ವಯ ಆಗುತ್ತಾ? ಅಂದಹಾಗೆ ಜನಪ್ರತಿನಿಧಿಗಳ ಕಾಯ್ದೆ ಅಡಿ ಅನರ್ಹಗೊಳಿಸಬಹುದಾದ ಅಪರಾಧ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಆ ಪ್ರಕಾರ ವಿದೇಶಿ ವಿನಿಮಯ ನಿಯಮಾವಳಿ ಕಾಯ್ದೆ, 26-1973ರ ಅಡಿ ಶಿಕ್ಷೆಯಾಗಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.[ಶಶಿಕಲಾ ಗ್ಯಾಂಗ್ ನಿಂದ ನಿರಂತರ ಬೆದರಿಕೆ : ದೀಪಾ ಜಯಕುಮಾರ್]
ದಂಡವಷ್ಟೇ ವಿಧಿಸಿದ್ದರೂ ಆ ವ್ಯಕ್ತಿ ಸ್ಪರ್ಧೆಯಿಂದ ಅನರ್ಹರೇ ಎಂಬ ಪ್ರಶ್ನೆ ಬರುತ್ತದೆ. ದಂಡ ವಿಧಿಸಿ ತೀರ್ಪು ನೀಡಿದ ದಿನದಿಂದ ಆತ ಚುನಾವಣೆಗೆ ಸ್ಪರ್ಧಿಸುವ ಹಾಗಿಲ್ಲ ಎಂದು ಕಾಯ್ದೆ ಹೇಳುತ್ತದೆ. ಶಶಿಕಲಾ ಮತ್ತು ಇತರರು ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪೂರ್ಣಗೊಂಡು, ಆ ದಿನದಿಂದ ಆರು ವರ್ಷಗಳ ಕಾಲ ಆಕೆ ಯಾವುದೇ ಚುನಾವಣೆಗೂ ಸ್ಪರ್ಧಿಸುವಂತಿಲ್ಲ.