ಸೂರ್ಯ ಹಾಗೂ 8 ನಟರಿಗೆ ಶುಭ ಸುದ್ದಿ ಕೊಟ್ಟ ಹೈಕೋರ್ಟ್
ಚೆನ್ನೈ, ಜುಲೈ 13:2009ರಲ್ಲಿ ಊಟಿ(ಉದಕಮಂಡಲ)ಯ ಪತ್ರಕರ್ತರೊಬ್ಬರು ನಟ ಸೂರ್ಯ ಹಾಗೂ 8 ಮಂದಿ ಸೆಲೆಬ್ರಿಟಿಗಳ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ಗುರುವಾರದಂದು ರದ್ದುಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಊಟಿಯ ನೀಲಗಿರೀಸ್ ಕೋರ್ಟ್ ವಾರೆಂಟ್ ಜಾರಿಗೊಳಿಸಿತ್ತು. ತಮಿಳು ದೈನಿಕ ದಿನಮಲರ್ ನಲ್ಲಿ ನಟಿಯರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಪ್ರಕಟವಾಗಿದ್ದನ್ನು ಖಂಡಿಸಿ, ದಕ್ಷಿಣ ಭಾರತ ಸಿನಿತಾರೆಯರ ಸಂಘ(ನಡಿಗರ್ ಸಂಘಂ) 2009ರ ಅಗಸ್ಟ್7ರಂದು ಚೆನ್ನೈನಲ್ಲಿ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಪತ್ರಕರ್ತರ ವಿರುದ್ಧ ನಟ, ನಟಿಯರು ವಾಗ್ದಾಳಿ ನಡೆಸಿದ್ದರು. ಇದನ್ನು ಖಂಡಿಸಿ ಪತ್ರಕರ್ತರೊಬ್ಬರು ನಿಲಗೀರಿಸ್ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು.
2011ರ ಡಿಸೆಂಬರ್ 19ರಂದು ಸೂರ್ಯ, ಸತ್ಯರಾಜ್, ಶರತ್ ಕುಮಾರ್, ಶ್ರೀಪ್ರಿಯಾ, ವಿಜಯಕುಮಾರ್, ಅರುಣ್ ವಿಜಯ್, ವಿವೇಕ್ ಮತ್ತು ಚೇರನ್ ಅವರಿಗೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಇವರೆಲ್ಲರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ, ಅರ್ಜಿ ವಜಾಗೊಂಡಿತ್ತು. ನಿಲಗಿರೀಸ್ ಕೋರ್ಟಿಗೆ ಖುದ್ದು ಹಾಜರಾಗದ ತಮಿಳು ಚಿತ್ರತಾರೆಯರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈಗ ಪ್ರಕರಣವನ್ನೇ ಹೈಕೋರ್ಟ್ ರದ್ದುಗೊಳಿಸಿದೆ.(ಪಿಟಿಐ)