ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ
ಚೆನ್ನೈ, ಡಿಸೆಂಬರ್ 6: ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ. ಆಕೆ ಜನಪ್ರಿಯ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಆಕೆ ಮುಖ್ಯಮಂತ್ರಿಯಾದ ಅವಧಿಯಲ್ಲೆಲ್ಲ ಹಲವು ಯೋಜನೆಗಳನ್ನು ಜಾರಿಗೆ ತಂದರು. ತೀರಾ ಇತ್ತೀಚೆಗೆ ಹೆರಿಗೆಗಾಗಿ ಒಂಬತ್ತು ತಿಂಗಳು ರಜೆ ಘೋಷಿಸಿದ್ದರು. ಮನೆ ಕಟ್ಟುವುದಕ್ಕಾಗಿ ಅಮ್ಮ ಸಿಮೆಂಟ್, ಅಮ್ಮ ನೀರಿನ ಯೋಜನೆ, ಕ್ಯಾಂಟೀನ್ ಹೀಗೆ ನೆನಪು ಮಾಡಿಕೊಳ್ಳುವುದಕ್ಕೆ ಹಲವಾರು ಯೋಜನೆಗಳಿವೆ.[68 ರೀಲಿನ 'ಅಮ್ಮ' ಸಿನಿಮಾ ಮತ್ತು ಕನ್ನಡ ದಿನಪತ್ರಿಕೆಗಳು]
ಮದುವೆ ವೇಳೆ ತಾಳಿ ನೀಡುವಂಥ ಯೋಜನೆಗೆ ಅಪಾರ ಮನ್ನಣೆ ದೊರೆಯಿತು. ಇವೆಲ್ಲ ಸರಕಾರದ ಹಣ ಪೋಲು ಮಾಡುವ ಯೋಜನೆಗಳು ಎಂಬ ಟೀಕೆಗಳೇನಿದ್ದರೂ ಅವುಗಳು ಬಡವರ ಪಾಲಿಗೆ ವರದಂತಾಗಿದ್ದವು, ಜಯಲಲಿತಾ ದೇವತೆಯಾಗಿ ಕಂಡರು. ಆ ಕಾರಣಕ್ಕೆ ಅಮ್ಮನ ಅಂತಃಕರಣ ಆಕೆಯಲ್ಲಿ ಕಂಡುಬಂತು.
ಮಳೆ ನೀರು ಸಂಗ್ರಹ ಕಡ್ಡಾಯ, ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಜಾರಿಗೆ ತಂದ ಯೋಜನೆಗಳು ಕೆಲ ವರ್ಷಗಳಲ್ಲೇ ಸಕಾರಾತ್ಮಕ ಬದಲಾವಣೆಗಳನ್ನು ತಂದವು. ಅಂದಹಾಗೆ, ಜಯಲಲಿತಾ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ.[ಸದನದಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ]
ಎಲ್ಲ ಮಹಿಳೆಯರೇ ಇರುವ ಪೊಲೀಸ್ ಠಾಣೆ
ಮಹಿಳೆಯರೇ ಇರುವ ಪೊಲೀಸ್ ಠಾಣೆಯನ್ನು ಮೊದಲಿಗೆ 1992ರಲ್ಲಿ ಆರಂಭಿಸಲಾಯಿತು. ಸದ್ಯಕ್ಕೆ ಅಂಥ 200 ಪೊಲೀಸ್ ಠಾಣೆ ತಮಿಳುನಾಡಿನಲ್ಲಿ ಇವೆ. ಶೇ 40ರಷ್ಟು ಅಂಥ ಪೊಲೀಸ್ ಠಾಣೆಗಳು ತಮಿಳುನಾಡಿನಲ್ಲಿವೆ.
ಮಗು ತೊಟ್ಟಿಲು ಯೋಜನೆ
ಈ ಯೋಜನೆ 1992ರಲ್ಲಿ ಸೇಲಂನಲ್ಲಿ ಆರಂಭಿಸಲಾಯಿತು. ಈ ಯೋಜನೆ ಉದ್ದೇಶವು ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದಾಗಿತ್ತು. ಹೆಣ್ಣುಮಕ್ಕಳ ಭ್ರೂಣ ಹತ್ಯೆ ತಡೆಯುವುದಾಗಿತ್ತು. 2011ರ ವೇಳೆಗೆ ತಮಿಳುನಾಡಿನಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಏರಿಕೆ ಕಾಣಿಸಿಕೊಂಡಿತು.
ಕುಡಿಯುವ ನೀರಿನ ಯೋಜನೆ
ಚೆನ್ನೈನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದ್ದು 2004ರಲ್ಲಿ. ಈ ಯೋಜನೆಯನ್ನು ಮೊದಲಿಗೆ ಪರಿಚಯಿಸಿದವರು ಸಿ.ಎನ್.ಅಣ್ಣಾದುರೈ, ಆ ನಂತರ ಕರುಣಾನಿಧಿ ಮುಂದುವರಿಸಿದರು. ಆ ನಂತರ ಈ ಯೋಜನೆಗೆ ಮರುಜೀವ ನೀಡಿದವರು ಜಯಲಲಿತಾ. 2001ರಲ್ಲಿ ಈ ಯೋಜನೆಗೆ ನ್ಯೂ ವೀರಣಂ ಎಂಬ ಹೆಸರು ಕೊಡಲಾಯಿತು.
ಮಳೆ ನೀರು ಸಂಗ್ರಹ
2001ರ ನಂತರ ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹವನ್ನು ಎಲ್ಲ ಕಟ್ಟಡದಲ್ಲಿಯೂ ಕಡ್ಡಾಯ ಮಾಡಲಾಯಿತು. ಈ ಯೋಜನೆ ಜಾರಿಗೆ ತಂದ ನಂತರ ಚೆನ್ನೈನಲ್ಲಿ ಅಂತರ್ಜಲ ಮಟ್ಟದಲ್ಲಿ ಗುರುತಿಸುವಂಥ ಬದಲಾವಣೆ ಕಾಣಿಸಿಕೊಂಡಿತು.
ಪುಕ್ಕಟೆ ಲ್ಯಾಪ್ ಟಾಪ್
2011ರಲ್ಲಿ ಈ ಯೋಜನೆಯನ್ನು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿಚಯಿಸಲಾಯಿತು. ಇದರಿಂದ 3.25 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಅಮ್ಮ ಕ್ಯಾಂಟೀನ್
2013ರಲ್ಲಿ ಈ ಯೋಜನೆ ಪರಿಚಯಿಸಲಾಯಿತು. ಅಗ್ಗದ ದರಕ್ಕೆ ಆಹಾರ ಒದಗಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಇಡ್ಲಿಗೆ 1, ಪೊಂಗಲ್ 5 ಹಾಗೂ ಮೊಸರನ್ನಕ್ಕೆ 3 ರುಪಾಯಿ ಇದೆ.
ಅಮ್ಮ ಬೇಬಿ ಕೇರ್ ಕಿಟ್ಸ್
ಹೆರಿಗೆ ನಂತರ ತಾಯಂದಿರು ಹಾಗೂ ನವಜಾತ ಶಿಶುಗಳ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಈ ಯೋಜನೆ ಪರಿಚಯಿಸಲಾಯಿತು. ಈ ಯೋಜನೆ ಪ್ರಕಾರ ನೀಡುವ ಕಿಟ್ ನಲ್ಲಿ ಟವೆಲ್, ಬಟ್ಟೆ, ಹಾಸಿಗೆ, ಸೊಳ್ಳೆ ಪರದೆ, ಎಣ್ಣೆ, ಮಕ್ಕಳ ಸೋಪು, ಶಾಂಪೂ, ಗೊಂಬೆ ಸೇರಿದಂತೆ ಹದಿನಾರು ವಸ್ತುಗಳು ಇರುತ್ತವೆ.