ಕೊಯಮುತ್ತೂರಿನಲ್ಲಿ ಐವರು ಶಂಕಿತ ನಕ್ಸಲರ ಬಂಧನ
ಚೆನ್ನೈ, ಮೇ 5 : ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಐವರನ್ನು ತಮಿಳುನಾಡು ಪೊಲೀಸರು ಕೊಯಮುತ್ತೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ. ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆ ಚುರುಕುಗೊಳಿಸಲು ಇವರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಬಂಧಿತ ಐವರ ಪೈಕಿ ಒಬ್ಬರು ಕೇರಳದ ಪ್ರಮುಖ ನಕ್ಸಲ್ ನಾಯಕರು ಮತ್ತು ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಆಂಧ್ರಪ್ರದೇಶದ ಪೊಲೀಸರು ತಮಿಳುನಾಡಿಗೆ ಆಗಮಿಸಿದ್ದು, ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ. ಐವರಿಗೆ ಆಂಧ್ರಪ್ರದೇಶದಲ್ಲಿ ಇರುವ ಸಂಪರ್ಕಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.
ಗುಪ್ತಚರ ಮಾಹಿತಿ ಇತ್ತು : ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಸಂಘಟನೆಯನ್ನು ಬಲಪಡಿಸಲು ನಕ್ಸಲರು ಪ್ರಯತ್ನ ನಡೆಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಲವು ತಿಂಗಳ ಹಿಂದೆ ಲಭ್ಯವಾಗಿತ್ತು. ಹಲವರು ನಕ್ಸಲರು ತಮಿಳುನಾಡಿನಲ್ಲಿ ಸೇರಲಿದ್ದು, ಮುಂದಿನ ಯೋಜನೆ ರೂಪಿಸಲಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು. [ಚಿಕ್ಕಮಗಳೂರಿನಲ್ಲಿ ಇಬ್ಬರು ನಕ್ಸಲರ ಶರಣಾಗತಿ]
ಛತ್ತೀಸ್ಗಢ ಮತ್ತು ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿ ಪ್ರಭಾವ ಹೊಂದಿರುವ ನಕ್ಸಲರು ದಕ್ಷಿಣದ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಆಂಧ್ರಪ್ರದೇಶ ಮತ್ತು ಕೇರಳದ ಪ್ರಮುಖ ನಾಯಕರು ಇವರೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. [ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆಂಧ್ರದ ನಕ್ಸಲ್ ದಂಪತಿ]
ಕಳೆದ ಕೆಲವು ದಿನಗಳಿಂದ ಕೇರಳ ಮತ್ತು ತಮಿಳುನಾಡಿನ ಗ್ರಾಮಾಂತರ ಪದೇಶಗಳಲ್ಲಿ ನಡೆಯುತ್ತಿರುವ ನಕ್ಸಲ್ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡಿದ್ದರು. ಕೊಯಮುತ್ತೂರಿನಲ್ಲಿ ಸೋಮವಾರ ಐವರನ್ನು ಬಂಧಿಸಿರುವುದು ಪೊಲೀಸರ ತನಿಖೆಗೆ ಸಹಕಾರಿಯಾಗಲಿದೆ.