ಶಶಿಕಲಾಗೆ ಪರಪ್ಪನ ಅಗ್ರಹಾರಕ್ಕೆ ಚುನಾವಣೆ ಆಯೋಗದ ನೋಟಿಸ್
ಶಶಿಕಲಾ ನಟರಾಜನ್ ಎಐಎಡಿಎಂಕೆಗೆ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರಲ್ಲೇ ಪಕ್ಷದ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿತ್ತು. ಆ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಕಳುಹಿಸಲಾಗಿದೆ
ಚೆನ್ನೈ, ಫೆಬ್ರವರಿ 17: ವಿ.ಕೆ.ಶಶಿಕಲಾ ಅವರನ್ನು ಎಐಎಡಿಎಂಕೆ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ದೂರಿನ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಚುನಾವಣೆ ಆಯೋಗ ಶಶಿಕಲಾ ಅವರಿಗೆ ಶುಕ್ರವಾರ ನೋಟಿಸ್ ನೀಡಿದ್ದು, ಅದಕ್ಕಾಗಿ ಫೆಬ್ರವರಿ 28ರವರೆಗೆ ಕಾಲಾವಕಾಶ ನೀಡಿದೆ.
ಶಶಿಕಲಾ ಅವರ ಸದ್ಯದ ವಿಳಾಸ ಪರಪ್ಪನ ಅಗ್ರಹಾರದ ಜೈಲು, ಬೆಂಗಳೂರು ಇಲ್ಲಿಗೆ ಪತ್ರವನ್ನು ರವಾನಿಸಲಾಗಿದೆ. ಡಾ.ಮೈತ್ರೇಯನ್ ಮತ್ತು ಇತರ ಹನ್ನೊಂದು ಸಂಸದರು ಶಶಿಕಲಾ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ದೂರಿನ ಪ್ರತಿಯನ್ನು ಚುನಾವಣೆ ಆಯೋಗ ಕಳಿಸಿದೆ. ಪಕ್ಷದ ಕಾನೂನಿನ ವಿರುದ್ಧವಾಗಿ ಆಕೆಯ ಪದೋನ್ನತಿಗೆ ಅನುಮತಿ ನೀಡಬಾರದು ಎಂದು ಅರ್ಜಿ ಸಲ್ಲಿಸಲಾಗಿತ್ತು.[ಪಳನಿಸ್ವಾಮಿ ಬಹುಮತ ಸಾಬೀತಿಗೆ ಇಲ್ಲ ಚಿನ್ನಮ್ಮನ ಆಶಿರ್ವಾದ!]
ಎಐಎಡಿಎಂಕೆ ಪಕ್ಷದ ಕಾನೂನಿನ ಪ್ರಕಾರ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿಯು ಸತತವಾಗಿ ಐದು ವರ್ಷಗಳ ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು. ಶಶಿಕಲಾ ಅವರನ್ನು 2011ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅದರ ಮರುವರ್ಷ ವಾಪಸ್ ಕರೆತರಲಾಯಿತು.[ಶಶಿಕಲಾ ಮೂರುಬಾರಿ ಕುಟ್ಟಿದ್ದರ ಹಿಂದೆ ಸ್ವಾರಸ್ಯಕರ ಕಥೆ]
"ಆಯೋಗ ಈ ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿ 28ರೊಳಗೆ ನಿಮ್ಮ ಉತ್ತರವನ್ನು ನಿರೀಕ್ಷಿಸುತ್ತದೆ. ಒಂದು ವೇಳೆ ಉತ್ತರ ನೀಡದಿದ್ದಲ್ಲಿ ನೀವು ಹೇಳುವುದಕ್ಕೆ ಏನೂ ಇಲ್ಲ ಎಂದು ಭಾವಿಸಿ, ಈ ವಿಚಾರವಾಗಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ" ಎಂದು ನೋಟಿಸ್ ನಲ್ಲಿ ಚುನಾವಣೆ ಆಯೋಗ ತಿಳಿಸಿದೆ.