ಎಡಪ್ಪಾಡಿ ಪಳನಿಸ್ವಾಮಿ, ಜಯಲಲಿತಾ ಆಪ್ತ ವಲಯಕ್ಕೆ ಲಗ್ಗೆ ಇಟ್ಟಿದ್ದು ಹೀಗೆ!
1985ರಲ್ಲಿ ಎಂಜಿ ರಾಮಚಂದ್ರನ್ ಕೊನೆಯುಸಿರೆಳೆದರು. ಜಯಲಲಿತಾ ಎಐಎಡಿಎಂಕೆ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಬಿಂಬಿಸಲ್ಪಟ್ಟರು. ಆಗ ಪಳನಿಸ್ವಾಮಿ ಎಡಪ್ಪಾಡಿಯಲ್ಲಿ ಜಯಲಲಿತಾ ಚಿತ್ರವಿದ್ದ ಧ್ವಜವೊಂದನ್ನು ಹಾರಿಸಿದರು.
ಚೆನ್ನೈ, ಫೆಬ್ರವರಿ 17: ಸೇಲಂ ಜಿಲ್ಲೆಯ ಕೃಷಿಕ ಎಡಪ್ಪಾಡಿ ಕೆ ಪಳನಿಸ್ವಾಮಿ ಈಗ ತಮಿಳುನಾಡಿನ ಮುಖ್ಯಮಂತ್ರಿ. ಎಐಎಡಿಎಂಕೆ ಪಕ್ಷದಲ್ಲಿ ಅಮ್ಮ ಜೆ ಜಯಲಲಿತಾ ಕೃಪಾಕಟಾಕ್ಷ ಇಲ್ಲದೆ ಉನ್ನತ ಹುದ್ದೆಗೇರಲು ಸಾಧ್ಯವೇ ಇಲ್ಲ. ಅಂಥಹದ್ದರಲ್ಲಿ ಸಾಮಾನ್ಯ ಕೃಷಿಕರೊಬ್ಬರು ಬಂದು ಇವತ್ತು ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂತಿದ್ದರ ಹಿಂದೆ ರೋಚಕ ಕಥೆಯೊಂದಿದೆ.
ಪಳನಿಸ್ವಾಮಿ ಎಐಎಡಿಎಂಕೆ ಪಕ್ಷದ ದೀರ್ಘಕಾಲದ ಕಾರ್ಯಕರ್ತರಲ್ಲಿ ಒಬ್ಬರು. ಪಳನಿಸ್ವಾಮಿ ಎಐಎಡಿಎಂಕೆ ಪಕ್ಷ ಸೇರಿದ್ದು 1974ರಲ್ಲಿ. ಅವತ್ತಿಗಿನ್ನೂ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿರಲಿಲ್ಲ. ದೇಶದಲ್ಲಿ ಇಂದಿರಾ ಗಾಂಧಿ ಆಳ್ವಿಕೆ ಇತ್ತು. ಇಂಥ ಸಂದರ್ಭದಲ್ಲಿ ಪಳನಿಸ್ವಾಮಿ ತಮ್ಮ ಒಂದೇ ಒಂದು ತಂತ್ರದಿಂದ ಜಯಲಲಿತಾರ ಗಮನ ಸೆಳೆದರು.[ಜಯಾ ಪ್ರಕರಣ: ತಮಿಳುನಾಡಿಗೆ 12 ಕೋಟಿ ಬಿಲ್ ಕಳುಹಿಸಿದ ಕರ್ನಾಟಕ]
ಪ್ರತ್ಯೇಕ ಬಾವುಟ
1985ರಲ್ಲಿ ಎಂಜಿ ರಾಮಚಂದ್ರನ್ ಕೊನೆಯುಸಿರೆಳೆದರು. ಅವತ್ತು ಎಐಎಡಿಎಂಕೆ ಪಕ್ಷದಲ್ಲಿ ಉತ್ತರಾಧಿಕಾರಿ ಕಲಹ ಹತ್ತಿಕೊಂಡಿತ್ತು. ಜಯಲಲಿತಾ ಎಐಎಡಿಎಂಕೆ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಬಿಂಬಿಸಲ್ಪಟ್ಟರು. ಆಗ ಸಾಮಾನ್ಯ ಕೆಳಹಂತದ ಕಾರ್ಯಕರ್ತರಾಗಿದ್ದ ಪಳನಿಸ್ವಾಮಿ ತಮ್ಮ ಕ್ಷೇತ್ರ ಎಡಪ್ಪಾಡಿಯಲ್ಲಿ ಧ್ವಜವೊಂದನ್ನು ಹಾರಿಸಿದರು. ಅದರಲ್ಲಿ ಜಯಲಲಿತಾ ಚಿತ್ರ ಇತ್ತು.[ಪಳನಿಸ್ವಾಮಿ ಮುಖ್ಯಮಂತ್ರಿಯಾಗದಂತೆ ಕೊನೆಯ ಹಂತದ ಹೈಡ್ರಾಮ]
ಪುರಚ್ಚಿ ತಲೈವಿ ಅಮ್ಮ
ಚಿತ್ರದ ಜತೆಗೆ ಬಾವುಟದಲ್ಲಿ ಇನ್ನೂ ಒಂದು ಸಾಲು ಬರೆದಿತ್ತು. ಅದೇ "ಪುರಚ್ಚಿ ತಲೈವಿ ಅಮ್ಮ" (ಕ್ರಾಂತಿಕಾರಿ ನಾಯಕಿ ಅಮ್ಮ). ಮುಂದೆ ಇದೇ ಜಯಲಲಿತಾರ ಟ್ಯಾಗ್ ಲೈನ್ ರೀತಿ ಆಗಿ ಹೋಯಿತು. ಅವರ ಪಕ್ಷದ ನಾಯಕರೆಲ್ಲಾ ಪುರುಚ್ಚಿ ತಲೈವಿ ಅಮ್ಮ ಎಂದೇ ಜಯಲಲಿತಾರನ್ನು ಸಂಬೋಧಿಸಲು ಆರಂಭಿಸಿದರು. ಇಂಥಹದ್ದೊಂದು ಕೊಡುಗೆ ನೀಡಿದವರು ಎಡಪ್ಪಾಡಿ ಕೆ ಪಳನಿಸ್ವಾಮಿ.[ನಿಯೋಜಿತ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]
ನೀಲಿ ಕಂಗಳ ಹುಡುಗ
ಪ್ರತ್ಯೇಕ ಬಾವುಟ ಹಾರಿಸಿದ ಪಳನಿಸ್ವಾಮಿ ಬಹುಬೇಗ ಅಮ್ಮನ ದಿವ್ಯ ದೃಷ್ಟಿಗೆ ಬಿದ್ದರು. ಅಲ್ಲಿಂದ ನೇರ ಅಮ್ಮನ ಆಪ್ತ ವಲಯಕ್ಕೆ ಲಗ್ಗೆ ಇಟ್ಟರು ಪಳನಿಸ್ವಾಮಿ. ಜಯಲಲಿತಾ ಪಾಲಿನ ನೀಲಿ ಕಣ್ಣಿನ ಹುಡುಗನಾಗಿ ಪಳನಿಸ್ವಾಮಿ ಕಾಣಿಸಿಕೊಂಡರು.
ಶಶಿಕಲಾಗೆ ಬೆಂಬಲ
ಕಳೆದ 40 ವರ್ಷಗಳಿಂದ ಎಐಎಡಿಎಂಕೆ ಮತ್ತು ಜಯಲಲಿತಾ ಬೆಳವಣಿಗೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು ಪಳನಿಸ್ವಾಮಿ. ಯಾವಾಗ ಜಯಲಲಿತಾ ಇಹಲೋಕ ತ್ಯಜಿಸಿದರೋ ಪಳನಿಸ್ವಾಮಿ ಶಶಿಕಲಾಗೆ ಬೆನ್ನಿಗೆ ನಿಂತುಬಿಟ್ಟರು. ಪರಿಣಾಮ ಅವರಿವತ್ತು ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ.
ಜಾತಿ ರಾಜಕಾರಣ
ಮುಖ್ಯಮಂತ್ರಿ ಗದ್ದುಗೆ ಏರುವಲ್ಲಿ ಪಳನಿಸ್ವಾಮಿ ಅವರ ನಿಷ್ಠೆ ಮತ್ತು ಜಾತಿಯೂ ಕೆಲಸ ಮಾಡಿತು ಎನ್ನಬಹುದು. ಪಳನಿಸ್ವಾಮಿ ಗೊಂಡಾರ್ ಜಾತಿಗೆ ಸೇರಿದವರು. ಎಐಎಡಿಎಂಕೆ ಯಾವತ್ತಿಗೂ ತೇವರ್ ಜಾತಿಗೆ ಮಾತ್ರ ಮೀಸಲಾದ ಪಕ್ಷ ಎಂಬ ಅಪವಾದವನ್ನು ಹೊತ್ತುಕೊಂಡಿತ್ತು. ಇದನ್ನು ಹೋಗಲಾಡಿಸಲು ಶಶಿಕಲಾ ಗೊಂಡಾರ್ ಜಾತಿಗೆ ಸೇರಿದವರನ್ನು ಆಯ್ಕೆ ಮಾಡಿದರು. ಈ ಮೂಲಕ ಪಕ್ಷದೊಳಗೆ ಹೊಸ ರಾಜಕೀಯ ಸಮೀಕರಣ ಹೆಣೆದರು.
ಎರಡನೇ ಹಂತದ ನಾಯಕ
ಹಾಗೆ ನೋಡಿದರೆ ಎಐಎಡಿಎಂಕೆ ಪಕ್ಷದಲ್ಲಿ ಪಳನಿಸ್ವಾಮಿ ಅವರದ್ದು ಏನಿದ್ದರೂ ಒ ಪನ್ನೀರ್ ಸೆಲ್ವಂ, ನಥಂ ವಿಶ್ವನಾಥನ್ ಮತ್ತು ಆರ್ ವೈದ್ಯಲಿಗಂ ನಂತರದ ಸ್ಥಾನ. ಆದರೆ ಅಮ್ಮಿನಿಗೆ ನಿಷ್ಠರಾಗಿದ್ದುದರಿಂದ ಜಯಲಲಿತಾ ಅಧಿಕಾರಕ್ಕೆ ಬಂದಾಗಲೆಲ್ಲಾ ಅವರಿಗೆ ಉನ್ನತ ಸ್ಥಾನಗಳನ್ನು ಕರುಣಿಸಿದ್ದರು. 2016ರಲ್ಲೂ ಪಳನಿಸ್ವಾಮಿಯವರಿಗೆ ಲೋಕೋಪಯೋಗಿ ಖಾತೆ ಜತೆಗೆ ಸಮಾಜ ಕಲ್ಯಾಣ ಹೊಣೆಯನ್ನೂ ನೀಡಲಾಗಿತ್ತು.