ಭೂತಾಕಾರವಾಗಿ ಬೆಳೆಯುತ್ತಿರುವ ಐಐಟಿ ಮದ್ರಾಸ್ ವಿವಾದ
ಚೆನ್ನೈ, ಮೇ. 30 : ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಐಐಟಿ-ಮದ್ರಾಸ್ ವಿದ್ಯಾರ್ಥಿ ಸಂಘಟನೆಯನ್ನು ಅಮಾನ್ಯ ಮಾಡಿರುವ ವಿವಾದ ಭೂತಾಕಾರವಾಗಿ ಬೆಳೆಯುತ್ತಿದೆ. ಇದನ್ನು ವಿರೋಧಿಸಿ ಶನಿವಾರ ಹಲವಾರು ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈಗಾಗಲೆ ಡೆಮಾಕ್ರೆಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (DYFI), ದಿ ರ್ಯಾಡಿಕಲ್ ಸ್ಟುಡೆಂಟ್ಸ್ ಯೂಥ್ ಫ್ರಂಟ್ ಮತ್ತು ತಂತೈ ಪೆರಿಯಾರ್ ಗ್ರೂಪ್ ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದ ವಿರುದ್ಧ ಯುದ್ಧ ಸಾರಿವೆ. ಮೋದಿ ವಿರುದ್ಧ ಟೀಕಿಸಿದ್ದ ವಿದ್ಯಾರ್ಥಿ ಸಂಘಟನೆಯನ್ನು ಎಚ್ಆರ್ ಸಚಿವೆ ಸ್ಮೃತಿ ಇರಾನಿ ನಿಷೇಧಿಸಿದ್ದರು.
ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್ ಸಂಘಟನೆಯನ್ನು ಅಮಾನ್ಯ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಧರಣಿ ಕುಳಿತವರನ್ನು ನಿಯಂತ್ರಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.
ಡಿವೈಎಫ್ಐ ಸಂಘಟನೆಗೆ ಸೇರಿದೆ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದರು. ಅಚ್ಚರಿಯ ಸಂಗತಿಯೆಂದರೆ, ಇಷ್ಟೊಂದು ವಿವಾದ ಸೃಷ್ಟಿಯಾಗಿದ್ದರೂ, ಬೆಂಕಿ ಹೊತ್ತಿಕೊಳ್ಳುವಂಥ ಪ್ರತಿಭಟನೆ ನಡೆಯುತ್ತಿದ್ದರೂ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಯಾವ ಹೇಳಿಕೆಯನ್ನೂ ನೀಡಿಲ್ಲ.
ಐಐಟಿ ಮದ್ರಾಸ್ ವಿದ್ಯಾರ್ಥಿ ಸಂಘಟನೆಯನ್ನು ಅಮಾನ್ಯ ಮಾಡಿದ ಮೇಲೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟ್ವಿಟ್ಟರಿನಲ್ಲಿ ಟೀಕಾಪ್ರಹಾರ ನಡೆಯುತ್ತಿದೆ. ವಾಕ್ ಸ್ವಾತಂತ್ರ್ಯ ನಮ್ಮ ಹಕ್ಕು. ಅದನ್ನು ಹತ್ತಿಕ್ಕಲು ಯತ್ನಿಸಿದರೆ ನಾವು ಹೋರಾಡುತ್ತೇವೆ ಎಂದು ರಾಹುಲ್ ಅಬ್ಬರಿಸದರೆ, ಬೇಕಿದ್ದರೆ ಬನ್ನಿ ಮುಕ್ತವಾಗಿ ಚರ್ಚೆ ಮಾಡೋಣ ಅಂತ ಸ್ಮೃತಿ ಸವಾಲು ಎಸೆದಿದ್ದಾರೆ. [ರಾಹುಲ್ ಗಾಂಧಿ, ಸ್ಮೃತಿ ಇರಾನಿ ಟ್ವಿಟ್ವರ್ ವಾರ್!]