ಜಿಎಸ್ ಟಿ ಎಫೆಕ್ಟ್ː ಕಾರ್ಮಿಕರಿಗಾಗಿ ಮರುಗಿದ ರಜನಿಕಾಂತ್
ಚೆನ್ನೈ, ಜುಲೈ 05: ಸೂಪರ್ ಸ್ಟಾರ್ ರಜನಿಕಾಂತ್ ಅವರು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ಈ ಬಾರಿ ಸರಕು ಮತ್ತು ಸೇವಾ ತೆರಿಗೆಯಿಂದಾಗಿ ತಮಿಳುನಾಡಿನ ಚಿತ್ರೋದ್ಯಮದಲ್ಲಿ ಉಂಟಾಗಿರುವ ಅತಂತ್ರ ಸ್ಥಿತಿ ಬಗ್ಗೆ ಮರುಗಿದ್ದಾರೆ. ಲಕ್ಷಾಂತರ ಮಂದಿ ಕಾರ್ಮಿಕರ ದೈನಂದಿನ ಬದುಕಿಗೆ ವ್ಯವಸ್ಥೆ ಬೇಕಿದೆ ಎಂದಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜತೆಗೆ ಸ್ಥಳೀಯ ಆಡಳಿತ ಕೂಡಾ ತೆರಿಗೆ ವಿಧಿಸಿದೆ. ಹೆಚ್ಚುವರಿಯಾಗಿ ಶೇ 30ರಷ್ಟು ತೆರಿಗೆ ವಿಧಿಸಿರುವ ತಮಿಳುನಾಡು ಸರ್ಕಾರದ ಕ್ರಮ ವಿರೋಧಿಸಿ, ಸಾವಿರಾರು ಚಲನಚಿತ್ರ ಮಂದಿರಗಳು ಕಳೆದ ಮೂರು ದಿನಗಳಿಂದ ಮುಷ್ಕರ ಹೂಡಿವೆ.
ದಿನವೊಂದಕ್ಕೆ 20 ಕೋಟಿ ರುಗೂ ಅಧಿಕ ನಷ್ಟವಾಗುತ್ತಿದೆ. ಸಿನಿಮಾ ಟಿಕೆಟ್ಗಳ ಮೇಲಿನ ತೆರಿಗೆ ಶೇ 58 ವಿಧಿಸಲಾಗಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆಯಾಗಿದೆ. ಸಿನಿಮಾ ವೀಕ್ಷಕರ ಮೇಲೂ ಇದು ಹೊರೆಯಾಗಿದೆ. ಎಂದು ಚಲನಚಿತ್ರ ಮಾಲೀಕರು ಹಾಗೂ ವಿತರಕರ ಸಂಘದ ಅಧ್ಯಕ್ಷ ಅಬಿರಾಮಿ ರಾಮನಾಥನ್ ತಿಳಿಸಿದ್ದಾರೆ.
Keeping in mind the livelihood of Lakhs of people in the tamil film industry, I sincerely request the TN GOVT to seriously consider our plea
— Rajinikanth (@superstarrajini) July 4, 2017
ಜಿಎಸ್ಟಿ ಬಂದ ನಂತರ 100 ರೂಪಾಯಿ ಒಳಗಿನ ಟಿಕೆಟ್ಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. 100ಕ್ಕಿಂತ ಹೆಚ್ಚಿರುವ ಮಲ್ಟಿಪ್ಲೆಕ್ಸ್ ಟಿಕೆಟ್ಗಳಿಗೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ಜಿಎಸ್ಟಿ ಜತೆಗೆ ಸ್ಥಳೀಯಾಡಳಿತ ತೆರಿಗೆ ಹೇರಿದರೆ, ಟಿಕೆಟ್ ಮೌಲ್ಯದ ಅರ್ಧದಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ನಟ ಕಮಲ್ ಹಾಸನ್ ಕೂಡಾ ಈ ಹೆಚ್ಚುವರಿ ಮನರಂಜನಾ ತೆರಿಗೆ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳಗಳಲ್ಲಿ ಅಲ್ಲಿನ ಸರ್ಕಾರಗಳು ಮನರಂಜನಾ ತೆರಿಗೆ ತಗ್ಗಿಸುವ, ಸಬ್ಸಿಡಿ ನೀಡುವ ಬಗ್ಗೆ ಉತ್ಸುಕವಾಗಿವೆ, ಆದರೆ, ತಮಿಳು ನಾಡಿನಲ್ಲಿ ಹೆಚ್ಚುವರಿ ತೆರಿಗೆ ವಿಧಿಸಿರುವುದನ್ನು ಸ್ಟಾರ್ ನಟರು ವಿರೋಧಿಸಿದ್ದಾರೆ.