ಚಂಡಿ ಹಿಡಿದ ಚಂಡಮಾರುತಕ್ಕೆ ಚೆನ್ನೈ ಚೆಲ್ಲಾಪಿಲ್ಲಿ
ಚೆನ್ನೈಗೆ ಈಗ ವರ್ಧಾ ಚಂಡಮಾರುತದ ಅನಾಹುತದ ಹೊಡೆತ. ಏನೇನು ಕೊಚ್ಚಿಹೋಗಿದೆಯೋ-ಹೋಗುತ್ತದೋ, ಉರುಳಿಹೋಗಿದೆಯೋ- ಹೋಗುತ್ತದೋ ಒಟ್ಟಿನಲ್ಲಿ ನಷ್ಟದ ಲೆಕ್ಕಾಚಾರ ತಿಳಿಯುವುದಕ್ಕೆ ಸಮಯವಂತೂ ಬೇಕು. ಸಾವು-ನೋವು ಸಂಭವಿಸಿದೆ. ಜನರ ಬದುಕು ಅಕ್ಷರಶಃ ಬಿರುಗಾಳಿಗೆ ಸಿಲುಕಿದೆ, ಮಳೆಯಲ್ಲಿ ಸಿಕ್ಕಿಕೊಂಡೀರಿ, ಮನೆಯಿಂದ ಅಚೆ ಬರಲೇಬೇಡಿ ಎಂದು ತಮಿಳುನಾಡು ಸರಕಾರವೇ ಅಲ್ಲಿನ ಜನರಿಗೆ ಮನವಿ ಮಾಡಿದೆ.
ಶಿಕ್ಷಣ ಸಂಸ್ಥೆಗೆ ರಜಾ ಘೋಷಿಸಿಯಾಗಿದೆ, ಖಾಸಗಿ ಕಂಪನಿಯವರೂ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಬೇಕು. ಅದು ಸಾಧ್ಯವಾಗದಿದ್ದರೂ ರಜಾ ಘೋಷಿಸಬೇಕು ಎಂದು ಸಲಹೆ ನೀಡಲಾಗಿದೆ. ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಎದುರಿಗೆ ಈಗ ದೊಡ್ಡ ಸವಾಲಂತೂ ಇದೆ.[ವರ್ದಾ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಪಾಕಿಸ್ತಾನ!]
ಜಯಲಲಿತಾ ಅವರು ಇದ್ದಿದ್ದರೆ ಏನು ಕ್ರಮ ತೆಗೆದುಕೊಳ್ಳುತ್ತಿದ್ದರು, ಏನೆಲ್ಲ ಮಾಡುತ್ತಿದ್ದರು ಎಂಬ ಹೋಲಿಕೆ ಅಲ್ಲಿನ ಜನರಲ್ಲಿ ಸಹಜವಾಗಿಯೇ ಶುರುವಾಗುತ್ತದೆ. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಚೆನ್ನೈನಲ್ಲಿ ಅಪ್ಪಳಿಸಲಿದೆ ಎಂಬ ಎಚ್ಚರಿಕೆ ನಿಜವಾಗಿದೆ. ಚಂಡಮಾರುತದ ಪರಿಣಾಮ ತಮಿಳುನಾಡು, ಅಂಧ್ರ ಹಾಗೂ ಪುದುಚೆರಿಗಳಲ್ಲಿ ಅನುಭವಕ್ಕೆ ಬರುತ್ತಿದೆ.
ಅಲ್ಲಿನ ಕರಾವಳಿ ಭಾಗದ ಬಹುತೇಕ ಕಡೆ ಭಾರೀ ಗಾಳಿ ಬೀಸುತ್ತಿದೆ, ಮಳೆಯಾಗುತ್ತಿದೆ. ಭಾರೀ ಗಾಳಿಯ ಕಾರಣಕ್ಕೆ ಮರಗಳು ನೆಲಕ್ಕೆ ಉರುಳುತ್ತಿವೆ. ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಗಾಯಾಳುಗಳ ಬಗ್ಗೆಯೂ ವರದಿಯಾಗುತ್ತಿದೆ. ತಮಿಳುನಾಡು ಸರಕಾರದ ಅಧಿಕೃತ ಪ್ರಕಟಣೆ ಪ್ರಕಾರವೇ ಚಂಡಮಾರುತಕ್ಕೆ ಅದಾಗಲೇ ಇಬ್ಬರು ಬಲಿಯಾಗಿದ್ದಾರೆ.[LIVE ವರ್ಧಾ ಅಬ್ಬರ: ಆಂಧ್ರದೆಡೆಗೆ ದಿಕ್ಕು ಬದಲಿಸಿದ ಮಾರುತ]
ಧಾರಾಕಾರ ಮಳೆ, ವಿಪರೀತ ಗಾಳಿ
ಚೆನ್ನೈ ನಗರದಲ್ಲಿ ಧಾರಾಕಾರ ಮಳೆ. ಬಾಗಿ ಬಳುಕುತ್ತಿರುವ ಮರಗಳು ಜನರ ಎದೆ ಬಡಿತವನ್ನು ಹೆಚ್ಚಿಸುತ್ತಿವೆ. ಎಲ್ಲಿ, ಏನು ಅನಾಹುತ ಸಂಭವಿಸಿದೆಯೋ ಎಂಬ ದುಗುಡ. ಇನ್ನೂ ಯಾವ ಪ್ರಮಾಣದಲ್ಲಿ ಗಾಳಿ ಬೀಸುತ್ತದೋ ಎಂಥ ಮಳೆ ಆಗುತ್ತದೋ ಎಂಬ ಭಯ ಇದ್ದೇ ಇದೆ.
ಎತ್ತರದ ಅಲೆಗಳು
ಸಮುದ್ರದ ಅಲೆಗಳು ಎತ್ತರ ಎತ್ತರಕ್ಕೆ ಏಳುತ್ತಿವೆ. ಒಂದು ಮೀಟರ್ ನಿಂದ ಮೂರು ಮೀಟರ್ ಎತ್ತರಕ್ಕೆ ಏಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆ ಪ್ರಕಾರ ಹೇಳುವುದಾದರೆ, ಒಂದು ಮೀಟರ್ ಗೆ ಮೂರು ಅಡಿಗಿಂತ ಸ್ವಲ್ಪ ಜಾಸ್ತಿ. ಮೂರು ಮೀಟರ್ ಅಂದರೆ ಹತ್ತು ಅಡಿ ಎತ್ತರ.
ಮರಗಳ ತೆರವು
ಮಳೆ-ಗಾಳಿಯ ಹೊಡೆತಕ್ಕೆ ನೆಲಕ್ಕುರುಳಿದ ಮರಗಳ ತೆರವು ಕಾರ್ಯಾಚರಣೆ ಚಿತ್ರ.
ಸಂಚಾರ ಸಮಸ್ಯೆ
ಚೆನ್ನೈನಲ್ಲಿ ಸಂಚಾರವೇ ಸಮಸ್ಯೆಯಾಗಿದೆ. ಕೆಲವೆಡೆ ಮರ ಉರುಳಿ ದಟ್ಟಣೆಯಾಗಿದ್ದರೆ, ವಾಹನ ಚಾಲನೆಯೇ ಕಷ್ಟವಾಗಿದೆ.
ಚೆಲ್ಲಾಪಿಲ್ಲಿ
ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬ್ಯಾರಿಕೇಡ್, ತಗಡಿನ ಅಡೆ-ತಡೆಗಳು ಗಾಳಿ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಗಾಳಿ ರಭಸ
ಗಾಳಿಯ ರಭಸಕ್ಕೆ ಉರುಳಿರುವ ಮರವೊಂದು ವಾಹನದ ಮೇಲೆ ಆತುಕೊಂಡಿದೆ.
ದ್ವಿಚಕ್ರ ವಾಹನಗಳು ಜಖಂ
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ಉರುಳಿದ ಮರ.
ಬುಡ ಸಮೇತ ಉರುಳಿಬಿದ್ದ ಮರ
ಚಂಡಮಾರುತದ ಆರ್ಭಟಕ್ಕೆ ಬುಡ ಸಮೇತ ಉರುಳಿ ಬಿದ್ದಿರುವ ಮರ.
ಗಾಳಿ ತಂದ ಅನಾಹುತ
ಗಾಳಿ-ಮಳೆಯ ಅಬ್ಬರಕ್ಕೆ ಮರದ ರೆಂಬೆ-ಕೊಂಬೆಗಳು ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ, ಮರಗಳು ಬುಡಸಮೇತ ಕಳಚಿಬಿದ್ದವು.