ಶಶಿಕಲಾಗೆ 'ಅಮ್ಮ'ನ ಪಟ್ಟ, ಚೆನ್ನೈನ ಸಭೆಯತ್ತ ಎಲ್ಲರ ನೋಟ
ಚೆನ್ನೈ, ಡಿಸೆಂಬರ್ 29: ಎಐಎಡಿಎಂಕೆಗೆ ಹೊಸ ನಾಯಕತ್ವ ತರುವ ಲಕ್ಷಣಗಳು ಗೋಚರಿಸುತ್ತಿವೆ. ಪಕ್ಷದ ಕಾರ್ಯಕರ್ತರು ಕುತೂಹಲದ ಕಣ್ಣಿನಿಂದ ಎದುರು ನೋಡುತ್ತಿರುವ ನಿರ್ಧಾರವೊಂದು ಹೊರಬೀಳುವ ಸಾಧ್ಯತೆಗಳು ಕಾಣುತ್ತಿವೆ. ಚೆನ್ನೈನ ಹೊರವಲಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನವೊಂದು ಕೈಗೊಳ್ಳುತ್ತಾರೆ ಎಂಬುದು ಸದ್ಯಕ್ಕೆ ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ.
ಎಐಎಡಿಎಂಕೆ ಅಯ್ದ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ. ಪಕ್ಷದ ಕಚೇರಿ ಹೊರಭಾಗದಲ್ಲಿ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗಿತ್ತು. ಈ ಸಬೆ ಸೇರುತ್ತಿರುವ ಉದ್ದೇಶವೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ. ನಿರೀಕ್ಷಿತ ನಿರ್ಧಾರಗಳೇ ಸಭೆಯಲ್ಲಿ ಹೊರಬರುತ್ತವೆ ಎಂಬುದನ್ನೇ ತಿಳಿಯುವುದಕ್ಕೆ ರಾಜಕೀಯ ವಿಶ್ಲೇಷಕರೇ ಬೇಕು ಎಂದೇನಿಲ್ಲ.
ಅದರೆ, ನಿರ್ಧಾರಗಳ ಪೈಕಿ ಒಂದು, ಜಯಲಲಿತಾ ಅವರಿಗೆ ಭಾರತ ರತ್ನ ಗೌರವಕ್ಕಾಗಿ ಒತ್ತಾಯಿಸುವುದು. ಮತ್ತೊಂದು ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸುವುದು. ಪಕ್ಷದ ಕಾರ್ಯಕರ್ತರು ಶಶಿಕಲಾ ಅವರನ್ನು ನೇತೃತ್ವ ವಹಿಸಲು ಆಯ್ಕೆ ಮಾಡುವುದಕ್ಕೆ ನಿಶ್ಚಿಯಿಸಿ ಆಗಿದೆ. ಆದರೆ ಶಶಿಕಲಾ ಅವರು ಮಾತ್ರ ತುಟಿ ಬಿಚ್ಚಿಲ್ಲ.