ರಸ್ತೆ ಕುಸಿತವಾಯ್ತು, ಈಗ ಬಿರುಕು ಬಿಟ್ಟಿದೆ ಚೆನ್ನೈ ರಸ್ತೆ!
ಮೊನ್ನೆ ಚೆನ್ನೈನಲ್ಲಿ ರಸ್ತೆ ಕುಸಿತವಾಗಿದ್ದು ನಿಮಗೆ ನೆನಪಿರಬೇಕು. ಇದೀಗ ಆ ರಸ್ತೆಯ ಎದುರು ಬದಿಯ ರಸ್ತೆಯಲ್ಲೇ ಬಿರುಕು ಕಾಣಿಸಿಕೊಂಡಿದೆ. ಮೆಟ್ರೋ ಕಾಮಗಾರಿಯಿಂದ ಹೀಗಾಗುತ್ತಿದೆ ಎಂದು ತಮಿಳುನಾಡು ಹಣಕಾಸು ಸಚಿವರೇ ಅನುಮಾನ ವ್ಯಕ್ತಪಡಿಸಿದ್ದಾರೆ
ಚೆನ್ನೈ, ಏಪ್ರಿಲ್ 11: ತಮಿಳುನಾಡಿನ ಚೆನ್ನೈನಲ್ಲಿ ಮತ್ತೊಮ್ಮೆ ಆತಂಕ ಎದುರಾಗಿದೆ. ಮೊನ್ನೆಯಷ್ಟೇ ರಸ್ತೆ ಕುಸಿದು ಅದರಲ್ಲಿ ಬಸ್, ಕಾರು ಸಿಲುಕಿಕೊಂಡಿತ್ತು. ಅದಾಗಿ ಎರಡೇ ದಿನಕ್ಕೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದೂ ಅಣ್ಣಾ ಸಲೈ ಇರುವಂಥ ಚೆನ್ನೈ ನಗರದ ಹೃದಯ ಭಾಗದಲ್ಲಿ. ಆರು ಮೀಟರ್ ವಿಸ್ತೀರ್ಣದ ಉದ್ದಕ್ಕೂ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಭಾನುವಾರ ಎಲ್ಲಿ ರಸ್ತೆ ಕುಸಿತವಾಗಿತ್ತೋ ಅದೇ ಜಾಗದ ಎದುರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ತಜ್ಞರೇನೋ ರಸ್ತೆಯ ಕೆಳಗಿನ ಮಣ್ಣು ಸಡಿಲವಾಗಿಲ್ಲ ಎನ್ನುತ್ತಿದ್ದಾರೆ. ಮೆಟ್ರೋ ಕಾಮಗಾರಿಯಿಂದ ರಸ್ತೆ ದುರ್ಬಲವಾಗಿರಬೇಕು ಎಂಬ ಗುಮಾನಿ ಕೂಡ ಇದೆ. ಮೊನ್ನೆ ನಡೆದ ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರೇನೋ ಪಾರಾಗಿದ್ದರು.[ಚೆನ್ನೈನಲ್ಲಿ ಭೂಕುಸಿತ, ನಡುರಸ್ತೆಯಲ್ಲಿ ಹೂತು ಹೋದ ಬಸ್, ಕಾರ್]
ದೊಡ್ಡ ಕ್ರೇನ್ ಹಾಗೂ ಟ್ರಕ್ ಗಳ ಸಹಾಯದಿಂದ ವಾಹನಗಳನ್ನು ಹೊರತೆಗೆಯಲಾಗಿತ್ತು. ಆ ಪ್ರದೇಶದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಲಾಗಿತ್ತು. ಈ ಘಟನೆಗೆ ಒಳ ಸುರಂಗ ಮಾರ್ಗದ ಮೆಟ್ರೋ ಕಾಮಗಾರಿ ಕಾರಣ ಎಂದು ತಮಿಳುನಾಡಿನ ಹಣಕಾಸು ಸಚಿವ ಡಿ ಜಯಕುಮಾರ್ ಆರೋಪಿಸಿದ್ದಾರೆ.
"ಇದು ಮೆಟ್ರೋ ರೈಲು ಕಾಮಗಾರಿಯ ಪರಿಣಾಮದಂತೆ ಕಾಣುತ್ತಿದೆ. ಇದು ನಮಗೆ ಪಾಠ. ಶೀಘ್ರವಾಗಿ ರಸ್ತೆ ದುರಸ್ತೆ ಮಾಡಲಾಗುವುದು ಮತ್ತು ಸಂಚಾರ ಪುನರಾರಂಭವಾಗಲಿದೆ" ಎಂದು ಸಚಿವರು ಹೇಳಿದ್ದಾರೆ. ಡ್ರಿಲಿಂಗ್ ನಿಂದಾಗಿ ಮಣ್ಣು ಸಡಿಲವಾಗಿರಬಹುದು ಎಂದು ಮೆಟ್ರೋ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.