ಖ್ಯಾತ ಅಂಕಣಕಾರ, ಜಯಾ ಹಿತೈಷಿ ಚೋ ರಾಮಸ್ವಾಮಿ ಇನ್ನಿಲ್ಲ
"ನಿಮ್ಮಂಥ ಮಾರ್ಗದರ್ಶಿ, ಸ್ನೇಹಿತ, ತತ್ತ್ವಜ್ಞಾನಿಯ ಅಗತ್ಯ ನನಗಿದೆ. ಆರೋಗ್ಯವಂತರಾಗಿ ಆದಷ್ಟು ಬೇಗ ಬನ್ನಿ" ಎಂದು ಜಯಲಲಿತಾ ಚೋ ಅವರನ್ನು ಹಾರೈಸಿದ್ದರು. ಈಗ ಕಾಕತಾಳೀಯವೆಂಬಂತೆ, ಜಯಲಲಿತಾ ಅವರನ್ನು ಚೋ ರಾಮಸ್ವಾಮಿ ಹಿಂಬಾಲಿಸಿದ್ದಾರೆ.
ಚೆನ್ನೈ, ಡಿಸೆಂಬರ್ 07 : ಖ್ಯಾತ ಅಂಕಣಕಾರ, ರಾಜಕೀಯ ವಿಶ್ಲೇಷಣಕಾರ, ಪತ್ರಕರ್ತ, ನಟ, ಸಂಭಾಷಣಕಾರ, ಸಿನೆಮಾ ನಿರ್ದೇಶಕ ಎಲ್ಲವೂ ಆಗಿದ್ದ ಜಯಲಲಿತಾ ಹಿತೈಷಿ ಚೋ ರಾಮಸ್ವಾಮಿ (82) ಅವರು ಚೆನ್ನೈನಲ್ಲಿ ಬುಧವಾರ ಬೆಳಿಗ್ಗೆ 4.40ಕ್ಕೆ ಅಸುನೀಗಿದ್ದಾರೆ.
ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ ಅಯ್ಯರ್ ರಾಮಸ್ವಾಮಿ (ಅಕ್ಟೋಬರ್ 5, 1934 - ಡಿಸೆಂಬರ್ 7, 2016) ಹೃದಯಾಘಾತದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅವರು ಹೆಂಡತಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
2015ರಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದಾಗ, "ನಿಮ್ಮಂಥ ಮಾರ್ಗದರ್ಶಿ, ಸ್ನೇಹಿತ, ತತ್ತ್ವಜ್ಞಾನಿಯ ಅಗತ್ಯ ನನಗಿದೆ. ಆರೋಗ್ಯವಂತರಾಗಿ ಆದಷ್ಟು ಬೇಗ ಬನ್ನಿ" ಎಂದು ಜಯಲಲಿತಾ ಹಾರೈಸಿದ್ದರು. ಈಗ ಕಾಕತಾಳೀಯವೆಂಬಂತೆ, ಜಯಲಲಿತಾ ಅವರನ್ನು ಚೋ ರಾಮಸ್ವಾಮಿ ಹಿಂಬಾಲಿಸಿದ್ದಾರೆ. [ನಟಿ ಜಯಲಲಿತಾ ಮೋಹಿಸಿದ್ದ ಕ್ರಿಕೆಟರ್ ಯಾರು?]
ರಾಜಕೀಯ ಜೀವನದಲ್ಲಿ ಹಿತೈಷಿಗಳಿಗಿಂತ ಹೆಚ್ಚು ಶತ್ರುಗಳನ್ನೇ ಕಟ್ಟಿಕೊಂಡಿದ್ದ ಜಯಲಲಿತಾ ಅವರು ಚೋ ರಾಮಸ್ವಾಮಿ ಅವರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ಸಂದಿಗ್ಧತೆ ಉಂಟಾದಾಗ, ಮಾರ್ಗದರ್ಶನ ಬೇಕಾದಾಗ ಅವರು ಚೋ ರಾಮಸ್ವಾಮಿ ಅವರ ಸಲಹೆ ಪಡೆಯುತ್ತಿದ್ದರು.
ಕಟು ಟೀಕಾಕಾರ : ಮೊನಚಾದ, ಪಾರದರ್ಶಕ ಬರಹಗಳಿಂದ ರಾಜಕೀಯ ನಾಯಕರನ್ನು ಕಟುವಾಗಿ ಟೀಕಿಸುತ್ತಿದ್ದ ಚೋ ರಾಮಸ್ವಾಮಿ ಯಾವ ನಾಯಕರನ್ನೂ ಬಿಟ್ಟಿರಲಿಲ್ಲ. 'ತುಘಲಕ್' ಪತ್ರಿಕೆಯ ಸಂಪಾದಕರಾಗಿದ್ದ ಅವರ ಪೆನ್ನಿನ ಮೊನೆಯಿಂದ ತಿವಿಸಿಕೊಂಡವರಲ್ಲಿ ಇಂದಿರಾಗಾಂಧಿ, ವಾಜಪೇಯಿ, ಕರುಣಾನಿಧಿ, ಜಯಲಲಿತಾ, ಜೆಬಿ ಕೃಪಲಾನಿ, ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗಡೆಯವರು ಸೇರಿದ್ದಾರೆ. [ಉತ್ತಮ ಪತ್ರಕರ್ತನಿಗೆ ಸುದ್ದಿಮನೆಯಲ್ಲಿ ಸ್ಥಾನವೊಂದು ಸದಾ ಕಾದಿರುತ್ತದೆ!]