ಜಲ್ಲಿಕಟ್ಟು: ಮುಖ್ಯಮಂತ್ರಿಗೂ ತಟ್ಟಿದ ಪ್ರತಿಭಟನೆ; 8 ರೈಲು ಕ್ಯಾನ್ಸಲ್
ಚೆನ್ನೈ: ಜನವರಿ 22: ಜಲ್ಲಿಕಟ್ಟು ವಿಚಾರವಾಗಿ ಸರಕಾರ ಸುಗ್ರೀವಾಜ್ಞೆ ಜಾರಿಗೆ ತಂದರೂ ತಮಿಳುನಾಡಿಗರು ಮಾತ್ರ ತೃಪ್ತಿಯಾಗಿಲ್ಲ. ಶಾಶ್ವತ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತಷ್ಟು ಹೆಚ್ಚಾಗಿದ್ದು, ಮಧುರೈನಲ್ಲಿ ಜಲ್ಲಿಕಟ್ಟು ಉದ್ಘಾಟನೆ ಮಾಡಬೇಕಾಗಿದ್ದ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೇ ವಾಪಾಸಾಗಿದ್ದಾರೆ. ಇನ್ನು 10 ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ.[ಜಲ್ಲಿಕಟ್ಟು: ತಮಿಳುನಾಡಿನಿಂದ ಸುಪ್ರಿಂ ಕೋರ್ಟಿಗೆ ಕೇವಿಯಟ್ ಸಲ್ಲಿಕೆ]
ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಪ್ರತಿಭಟನೆಯ ಬಿಸಿ ಮುಖ್ಯಮಂತ್ರಿಗೂ ತಟ್ಟಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಮಧುರೈನ ಜಲ್ಲಿಕಟ್ಟನ್ನು ಪನ್ನೀರ್ ಸೆಲ್ವಂ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ವಿದ್ಯಾರ್ಥಿಗಳು ಸೇರಿ ಮುಖ್ಯಮಂತ್ರಿ ಬರಬೇಕಾಗಿದ್ದ ದಾರಿಯನ್ನು ಅಡ್ಡಕಟ್ಟಿದ್ದರಿಂದ ಅನಿವಾರ್ಯವಾಗಿ ಪನ್ನೀರ್ ಸೆಲ್ವಂ ಬಂದ ದಾರಿಗೆ ಸುಂಕವಿಲ್ಲ ಅಂತ ಚೆನ್ನೈಗೆ ವಾಪಾಸಾಗಿದ್ದಾರೆ.
ಇನ್ನು ತೀವ್ರ ಪ್ರತಿಭಟನೆಗಳ ಹಿನ್ನಲೆಯಲ್ಲಿ ಇಂದು ತಮಿಳುನಾಡಿನಲ್ಲಿ ಸಂಚರಿಸಬೇಕಾಗಿದ್ದ 8 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ನಾಳೆಯೂ ಎರಡು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಇದರಿಂದ ತಮಿಳುನಾಡಿನಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಹೋಗುವ ಜನರಿಗೆ ತೊಂದರೆಯಾಗಿದೆ.[ಜಲ್ಲಿಕಟ್ಟು: ಸುಗ್ರೀವಾಜ್ಞೆ ಜಾರಿಯಾದರೂ ನಿಲ್ಲದ ಪ್ರತಿಭಟನೆ]
ಪ್ರಾಣಿ ದಯಾ ಸಂಸ್ಥೆ ಪೇಟಾಗೆ ನಿಷೇಧ ಹೇರಬೇಕು ಮತ್ತು ಜಲ್ಲಿಕಟ್ಟು ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕು ಎಂದು ಕೋರಿ ಜನ ಪ್ರತಿಭಟನೆ ಮುಂದುವರಿಸಿದ್ದಾರೆ.
ಅಲಂಗಲ್ಲೂರಿನಲ್ಲಿ ಮಾತ್ರ ಜಲ್ಲಿಕಟ್ಟು
ಸರಕಾರದಿಂದ ಅಧಿಕೃತವಾಗಿ ಅಲಂಗಲ್ಲೂರಿನಲ್ಲಿ ಮಾತ್ರ ಜಲ್ಲಿಕಟ್ಟು ಆಯೋಜನೆಯಾಗಿತ್ತು. ಆದರೆ ಇಲ್ಲಿಯೂ ಜನ ಸಮರೋಪಾದಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಇದನ್ನು ಮುಖ್ಯಮಂತ್ರಿ ಉದ್ಘಾಟನೆ ಮಾಡುವುದು ಸಾಧ್ಯವಾಗಿಲ್ಲ. ಇಲ್ಲಿ ಜನ ಸಾಗರವೇ ಸೇರಿರುವುದರಿಂದ ರಸ್ತೆಗಳು ಬ್ಲಾಕ್ ಆಗಿದ್ದು ಟ್ರಾಫಿಕ್ನಲ್ಲಿ ಆ್ಯಂಬುಲೆನ್ಸ್ ಸೇರಿದಂತೆ ವಾಹನಗಳು ಸಿಕ್ಕಿ ಹಾಕಿಕೊಂಡಿವೆ.
ಇನ್ನು ಧರ್ಮಾಪುರಿ ಮತ್ತು ತಿರುಚರಾಪಲ್ಲಿಯ ಮನಪ್ಪರಾಯಿಯಲ್ಲಿ ಜಲ್ಲಿಕಟ್ಟು ನಡೆದಿದ್ದು ವರದಿಯಾಗಿದೆ. ಪುದುಕೊಟ್ಟೈನಲ್ಲಿ ರಾಜ್ಯ ಆರೋಗ್ಯ ಸಚಿವ ವಿಜಯಬಾಸ್ಕರನ್ ಜಲ್ಲಿಕಟ್ಟು ಉದ್ಘಾಟನೆ ಮಾಡಿದ್ದು ವರದಿಯಾಗಿದೆ.