ಸಿಸಿಬಿ ಪೊಲೀಸರನ್ನೇ ಅರೆಸ್ಟ್ ಮಾಡಿದ ಚೆನ್ನೈ ಪೊಲೀಸರು!
ಬೆಂಗಳೂರು/ ಚೆನ್ನೈ, ಮಾರ್ಚ್, 22: ಪೊಲೀಸರೇ ಪೋಲೀಸರನ್ನು ವಶಕ್ಕೆ ಪಡೆದ ಸುದ್ದಿ ಕೇಳಿದ್ದೀರಾ? ಇಲ್ಲವಾದರೆ ಈ ಸುದ್ದಿಯನ್ನು ಓದಿಕೊಳ್ಳಿ.
ಬೆಂಗಳೂರು ಮಲ್ಲೆಶ್ವರಂ ಬಾಂಬ್ ಬ್ಲಾಸ್ಟ್ ಸಂಬಂಧ ತನಿಖೆಗೆಂದು ಚೆನ್ನೈಗೆ ತೆರಳಿದ್ದ ಬೆಂಗಳೂರು ಕೇಂದ್ರ ಅಪರಾಧ ದಳದ ಪೊಲೀಸರನ್ನು ಅಪಹರಣಕಾರರು ಎಂದು ತಿಳಿದ ಚೆನ್ನೈ ಪೊಲೀಸರು ಬಂಧಿಸಿದ್ದಾರೆ![ಸಿಸಿಬಿ ಪೊಲೀಸರೆ ಕಿಡ್ನಾಪರ್ಗಳಾದಾಗ!]
ಆದದ್ದು ಇಷ್ಟೆ: ಪ್ರಕರಣದ ತನಿಖೆಗೆಂದು ಚೆನ್ನೈ ಗೆ ತೆರಳಿದ್ದ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿ ಕರೆದುಕೊಂಡು ಬರುತ್ತಿದ್ದರು. ಆದರೆ ಬೆಂಗಳೂರು ಪೊಲೀಸರು ಬಂಧಿಸಿದ್ದ ಇಬ್ಬರ ಕುಟುಂಬದವರು ನಮ್ಮ ಮನೆಯವರನ್ನುಯಾರೋ ಅಪಹರಣ ಮಾಡಿದ್ದಾರೆ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯನಿರತರಾದ ಚೆನ್ನೈ ಪೊಲೀಸರು ಬೆಂಗಳೂರಿನ ಕಡೆ ಬರುತ್ತಿದ್ದ ಸಿಸಿಬಿ ಪೊಲೀಸರನ್ನು ಸಿನಿಮೀಯ ರೀತಿಯಲ್ಲಿ ಓವರ್ ಟೇಕ್ ಮಾಡಿ ಹಿಡಿದಿದ್ದಾರೆ.
ಅಲ್ಲದೇ ಬೆಂಗಳೂರು ಪೊಲೀಸರನ್ನು ದಸ್ತಗಿರಿ ಮಾಡಲಾಗಿದ್ದು ರಿವಾಲ್ವಾರ್ ಸಹ ಸಿಕ್ಕಿದೆ. ಇವರು ಮಫ್ತಿಯಲ್ಲಿದ್ದ ಕಾರಣ ಚೆನ್ನೈ ಪೊಲೀಸರಿಗೆ ನಂಬಿಕೆ ಬಂದಿಲ್ಲ. ಎಸಿಪಿ ಗ್ರೇಡ್ ನ ಕರ್ನಾಟಕದ ಅಧಿಕಾರಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.[ಬೆಂಗಳೂರಿಗೂ ಕಾಲಿಟ್ಟಿತೆ ರಕ್ತ ಚಂದನ ಕಳ್ಳ ಸಾಗಣೆ?]
ಇದಾದ ನಂತರ ಎರಡು ರಾಜ್ಯದ ಇಲಾಖೆಗಳ ನಡುವೆ ಮಾತುಕತೆ ನಡೆದಿದ್ದು ಗೊಂದಲ ಬಗೆಹರಿದಿದೆ. ಮಲ್ಲೆಶ್ವರಂ ಬಾಂಬ್ ಬ್ಲಾಸ್ಟ್ ತನಿಖೆಯನ್ನು ನಡೆಸುತ್ತಿರುವ ಸಿಸಿಬಿ ಪೊಲೀಸರು ಅನೇಕ ಸಾರಿ ಚೆನ್ನೈ ಗೆ ಭೇಟಿ ನೀಡಿ ಬರುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತರುವ ಬರದಲ್ಲಿ ಇವರೇ ಅಲ್ಲಿನ ಪೊಲೀಸರ ವಶಕ್ಕೆ ಸಿಕ್ಕಿದ ಪ್ರಕರಣವೂ ಇದೀಗ ನಡೆದು ಹೋಗಿದೆ.