ಕಾವೇರಿಗಾಗಿ ಹಿಂಸಾಚಾರ ಖಂಡಿಸಿ, ತಮಿಳುನಾಡು ಬಂದ್
ಚೆನ್ನೈ, ಸೆ.15: ಕಾವೇರಿಗಾಗಿ ಕರ್ನಾಟಕದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ತಮಿಳುನಾಡಿನಲ್ಲಿ ಶುಕ್ರವಾರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಮತ್ತೊಮ್ಮೆ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.
ಬಂದ್ ಏತಕ್ಕೆ?: ಕಾವೇರಿಗಾಗಿ ಬೆಂಗಳೂರು, ಮಂಡ್ಯ ಸೇರಿದಂತೆ ಕರ್ನಾಟಕದಲ್ಲಿ ನಡೆದ ಹಿಂಸಾಚಾರದಲ್ಲಿ ತಮಿಳರ ಮೇಲೆ ಕನ್ನಡಿಗರು ಹಲ್ಲೆ ನಡೆಸಿದ್ದಾರೆ. ತಮಿಳರ ಆಸ್ತಿ ಪಾಸ್ತಿ, ವಾಹನ, ಅಂಗಡಿ ಮುಂಗಟ್ಟನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿ ತಮಿಳುನಾಡಿನ ವಿವಿಧ ಸಂಘಟನೆಗಳು ಶುಕ್ರವಾರ ಬಂದ್ ಗೆ ಕರೆ ನೀಡಿವೆ.[ಚೆನ್ನೈ: ಕನ್ನಡಿಗರಿಗೆ ಧಿಕ್ಕಾರ ಕೂಗಿ, ಬೆಂಕಿ ಹಚ್ಚಿಕೊಂಡ ಪ್ರಜೆ!]
ಬಂದ್ ಅವಧಿ : ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ರ ತನಕ.
ಯಾವ ಯಾವ ಸಂಘಟನೆ ಬೆಂಬಲ: ಪೆಟ್ರೋಲ್ ಬಂಕ್, ಲಾರಿ ಮಾಲೀಕರು, ಖಾಸಗಿ ಶಾಲೆ, ವಾಣಿಜ್ಯ ಸಂಘಟನೆಗಳು, 22 ಲಕ್ಷ ಅಂಗಡಿ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದಾರೆ.
ಪಕ್ಷಗಳು: ನಾಮ್ ತಮಿಳರ್ ಕಚ್ಚಿ, ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ), ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ), ವಿಡುಥಲೈ ಚಿರುಥೈಗಳ್ ಕಚ್ಚಿ(ವಿಸಿಕೆ) ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳು.
ಏನಿರಲ್ಲ: 4,600 ಪೆಟ್ರೋಲ್ ಬಂಕ್ ಗಳು ಸ್ಥಗಿತಗೊಳ್ಳಲಿದ್ದು, ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ.
* 18,000 ಖಾಸಗಿ ಶಾಲೆಗಳು (ನರ್ಸರಿ, ಪ್ರೈಮರಿ, ಮೆಟ್ರಿಕ್ಯುಲೇಷನ್, ಸಿಬಿಎಸ್ ಇ) ಬಂದ್ ಆಗಲಿವೆ. ಶನಿವಾರ ಪರೀಕ್ಷೆಗಳು ನಡೆಯಲಿವೆ.
* 1.5 ಲಕ್ಷ ಖಾಸಗಿ ಹಾಲು ವಿತರಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಅವಿನ್ ಮಿಲ್ಕ್ ಗಳು ಮಾತ್ರ ಸಿಗಲಿವೆ.
* 3 ಲಕ್ಷ ಲಾರಿಗಳು ಸಂಚಾರ ನಿಲ್ಲಿಸಲಿವೆ. ಕರ್ನಾಟಕ ಹಾಗೂ ತಮಿಳುನಾಡು ನಡುವೆ ದಿನವೊಂದಕ್ಕೆ 35, 000ಕ್ಕೂ ಅಧಿಕ ಲಾರಿಗಳು ಸಂಚರಿಸುತ್ತವೆ.
ತಮಿಳುನಾಡಿನ ಡಿಜಿ ಐಜಿ ಜತೆ ಮಾತುಕತೆ ನಡೆಸಿದ್ದೇನೆ. 25 ವಿವಿಧ ಪ್ಯಾರಾ ಮಿಲಿಟರಿ ಪಡೆ ಗಡಿಭಾಗದಲ್ಲಿ ಭದ್ರತೆ ಕಾಯಲಿದೆ. ತಮಿಳುನಾಡಿನಲ್ಲಿರುವ ಕನ್ನಡಿಗರ ರಕ್ಷಣೆ ಹಾಗೂ ಕರ್ನಾಟಕದಲ್ಲಿರುವ ತಮಿಳರ ರಕ್ಷಣೆಗೆ ಉಭಯ ರಾಜ್ಯಗಳು ಬದ್ಧವಾಗಿವೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹೇಳಿದ್ದಾರೆ.